ದೇಶದಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟ ತಲುಪಿದೆ ಎಂಬ ಊಹಾಪೋಹಗಳ ಮಧ್ಯೆ ದೇಶದ ಅನೇಕ ಮಹಾನಗರಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇನ್ನು ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಎಂಎಸ್ಎಂಇಗಳು ಏಪ್ರಿಲ್ 25ರಂದು ಮನವಿ ಮಾಡಿದ್ದಾರೆ. ಈ ಬಳಿಕ ವಿಷಯದ ಚರ್ಚೆಯು ಮಹತ್ವ ಪಡೆದುಕೊಂಡಿದೆ.
ಅಷ್ಟೇ ಅಲ್ಲದೆ, ಜಮ್ಮು ಮತ್ತು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳು, ಆರರಿಂದ ಏಳು ಗಂಟೆಗಳವರೆಗೆ ವಿದ್ಯುತ್ ಕಡಿತಗೊಳಿಸುವುದರ ವಿರುದ್ಧ ಪ್ರತಿಭಟನೆಗಳನ್ನು ನಡೆಸಿವೆ. ಮತ್ತೊಂದೆಡೆ ಎಎಪಿ ನೇತೃತ್ವದ ದೆಹಲಿ ಸರ್ಕಾರವು ವಿದ್ಯುತ್ ಕಡಿತ ಮತ್ತು ಕಲ್ಲಿದ್ದಲು ಕೊರತೆಗೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದೆ.
ದೇಶದಲ್ಲಿರುವ 173 ಉಷ್ಣ ವಿದ್ಯುತ್ ಸ್ಥಾವರಗಳ ಪೈಕಿ 106 ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟಕ್ಕೆ ಕುಸಿದಿದೆ ಎಂದು ತಿಳಿದುಬಂದಿದೆ. ಉತ್ತರ ಭಾರತದಲ್ಲಿ ಬೀಸುವ ಬಿಸಿಗಾಳಿಯಿಂದಾಗಿ ವಿದ್ಯುತ್ಗೆ ಬೇಡಿಕೆ ಹೆಚ್ಚಾಗಿತ್ತು. ಆದರೆ ಕಲ್ಲಿದ್ದಲು ಸಂಗ್ರಹಣೆಯ ಕೊರತೆಯಿಂದ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ.
ಗುರುವಾರ ತಡರಾತ್ರಿ ಕೇಂದ್ರೀಯ ವಿದ್ಯುತ್ ಪ್ರಾಧಿಕಾರ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಒಟ್ಟು 106 ಸ್ಥಾವರಗಳಲ್ಲಿ ಸಂಗ್ರಹ ಶೇ 25ಕ್ಕಿಂತಲೂ ಕಡಿಮೆ ಮಟ್ಟಕ್ಕೆ ಕುಸಿದಿದೆ. 150 ಸ್ಥಾವರಗಳಲ್ಲಿ ದೇಶೀಯ ಕಲ್ಲಿದ್ದಲನ್ನು ಬಳಸಲಾಗುತ್ತಿದೆ. ಇವುಗಳಲ್ಲಿ 86 ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹವು ಶೋಚನೀಯ ಮಟ್ಟಕ್ಕೆ ಕುಸಿದಿದೆ. ಕೆಲವು ಸ್ಥಾವರಗಳಲ್ಲಿ ಕೇವಲ ಒಂದೂವರೆ ಅಥವಾ ಎರಡು ದಿನಗಳಿಗೆ ಆಗುವಷ್ಟು ಸಂಗ್ರಹ ಮಾತ್ರ ಉಳಿದಿದೆ. ನಿಯಮಗಳ ಪ್ರಕಾರ, ಉಷ್ಣ ವಿದ್ಯುತ್ ಸ್ಥಾವರಗಳು ಕನಿಷ್ಠ 26 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ಸಂಗ್ರಹ ಹೊಂದಿರಬೇಕು. ಕಲ್ಲಿದ್ದಲು ಸಂಗ್ರಹವು 6.5 ದಿನಗಳಿಗೆ ಮಾತ್ರ ಆಗುವಷ್ಟರ ಮಟ್ಟಿಗೆ ಕುಸಿದರೆ, ಅದನ್ನು ಶೋಚನೀಯ ಮಟ್ಟ ಎಂದು ಕರೆಯಲಾಗುತ್ತದೆ.
ಈ ಬಗ್ಗೆ ಕೇಂದ್ರ ಹೇಳಿದ್ದೇನು?
ಏಪ್ರಿಲ್ 26 ರಂದು, ಕನಿಷ್ಠ 86 ವಿದ್ಯುತ್ ಸ್ಥಾವರಗಳು ವಿಮರ್ಶಾತ್ಮಕವಾಗಿ ಕಡಿಮೆ ಸ್ಟಾಕ್ ಹೊಂದಿದ್ದರೂ ಸಹ, ದೇಶದಾದ್ಯಂತ ವಿದ್ಯುತ್ ಉತ್ಪಾದನೆಯನ್ನು ಸೀಮಿತಗೊಳಿಸುವ ಮೂಲಕ ಭಾರತದ ವಿದ್ಯುತ್ ಬೇಡಿಕೆಯು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 201.066 GW ತಲುಪಿದೆ. ಭಾರತದಲ್ಲಿ ಕಲ್ಲಿದ್ದಲು ಕೊರತೆಯ ಬಗ್ಗೆ ವದಂತಿಗಳನ್ನು ತಳ್ಳಿಹಾಕಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, “ನಾವು ವಿದ್ಯುತ್ ಸ್ಥಾವರದಲ್ಲಿ ಸರಾಸರಿ 21-22 ಮಿಲಿಯನ್ ಟನ್ ಕಲ್ಲಿದ್ದಲು ಹೊಂದಿದ್ದೇವೆ. ದೇಶದಲ್ಲಿ ಕಲ್ಲಿದ್ದಲಿನ ಕೊರತೆಯಿಲ್ಲ. ವಿದ್ಯುತ್ ಸ್ಥಾವರಗಳಲ್ಲಿ 10 ದಿನಗಳ ಕಲ್ಲಿದ್ದಲು ಸಂಗ್ರಹವಿದೆ” ಎಂದು ಹೇಳಿದರು.
ಅಖಿಲ ಭಾರತ ವಿದ್ಯುಚ್ಛಕ್ತಿ ಎಂಜಿನಿಯರ್ಗಳ ಒಕ್ಕೂಟ ಪ್ರತಿಕ್ರಿಯೆ:
“ಸಚಿವಾಲಯಗಳ ನಡುವಣ ಸಮನ್ವಯ ಕೊರತೆಯಿಂದ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕಲ್ಲಿದ್ದಲು ಪೂರೈಕೆಯಾಗದೇ ಇರುವುದರಿಂದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟಕ್ಕೆ ಕುಸಿದಿದೆ. ಆದರೆ, ಸಚಿವಾಲಯಗಳು ಇದಕ್ಕೆ ನಾವು ಹೊಣೆ ಅಲ್ಲ ಎನ್ನುತ್ತಿವೆ’ ಎಂದು ಒಕ್ಕೂಟವು ಆರೋಪಿಸಿದೆ.
ರಾಜಸ್ಥಾನ ಸಿಎಂ ಆಗ್ರಹ:
ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟ ತಲುಪಿದೆ ಎಂಬ ವಿಚಾರವನ್ನು ರಾಷ್ಟ್ರೀಯ ಬಿಕ್ಕಟ್ಟು ಎಂದು ಘೋಷಿಸಿ ಅಂತಾ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ‘ಉತ್ತರದಲ್ಲಿ ಬೀಸುವ ಬಿಸಿಗಾಳಿಯ ಪರಿಣಾಮವಾಗಿ ದೇಶದ 16 ರಾಜ್ಯಗಳಲ್ಲಿ ವಿದ್ಯುತ್ಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಬೇಡಿಕೆಯಷ್ಟು ವಿದ್ಯುತ್ ಉತ್ಪಾದಿಸಲು ಅಗತ್ಯವಿರುವ ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಇದನ್ನು ರಾಷ್ಟ್ರೀಯ ಬಿಕ್ಕಟ್ಟು ಎಂದು ಘೋಷಿಸಬೇಕು” ಎಂದಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy