ತುರುವೇಕೆರೆ: ಈ ಸಮಾಜ ನನಗೇನು ನೀಡಿದೆ ಅನ್ನುವುದಕ್ಕಿಂತ ಸಮಾಜಕ್ಕೆ ನಾನೇನು ಕೊಡುಗೆ ನೀಡಿದ್ದೇನೆ ಎಂದು ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹುಲ್ಲೇಕೆರೆ ಸಮಾಜ ಸೇವಕ ಎಚ್.ಬಿ.ಗಂಗಾಧರಯ್ಯ ಹೇಳಿದರು.
ತಾಲ್ಲೂಕಿನ ದಂಡಿನಶಿವರ ಹೋಬಳಿಯ ದೊಂಬರನಹಳ್ಳಿ ಗ್ರಾಮದ ಶ್ರೀ ಸೋಮೇಶ್ವರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನೋಟ್ ಬುಕ್, ಲೇಖನ ಸಾಮಗ್ರಿಗಳ ವಿತರಣೆ ಹಾಗೂ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಸಾಕಷ್ಟು ಪ್ರತಿಭಾವಂತ ಮಕ್ಕಳಿದ್ದಾರೆ ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಆರ್ಥಿಕ ನೆರವಿನ ಕೊರತೆಯಿಂದಾಗಿ ಎಷ್ಟೋ ಪ್ರತಿಭೆಗಳು ಉನ್ನತ ಮಟ್ಟದ ವ್ಯಾಸಂಗ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ನಾವು ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಪೂರಕವಾದ ಪ್ರೋತ್ಸಾಹವಿಲ್ಲದ ಕಷ್ಟದ ದಿನಗಳನ್ನು ಕಂಡಿದ್ದೇನೆ.
ಸಮಾಜದಲ್ಲಿ ಬಹಳ ಮಂದಿ ಸ್ಥಿತಿವಂತರಿದ್ದಾರೆ. ಅವರೆಲ್ಲಾ ಬಡಬಗ್ಗರಿಗೆ ತಮ್ಮ ಕೈಲಾದ ಸಹಾಯ ಮಾಡಿದರೆ ನಿರ್ಗತಿಕರೂ ಸಮಾಜದಲ್ಲಿ ಕೊಂಚ ಮುಂದೆ ಬರಲು ಸಾಧ್ಯವಿದೆ ಆದರೆ ಇಂತಹ ಮೌಲ್ಯಯುತ ಆಲೋಚನೆಗಳನ್ನು ಇಂದು ಕಾಣಲು ಸಾಧ್ಯವಿಲ್ಲ. ಬಲಗೈಯಲ್ಲಿ ಮಾಡಿದ ದಾನವು ಎಡಗೈಯಿಗೆ ತಿಳಿಯಬಾರದು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು ಆದರೆ ಇಂದು ಸೇವೆಗಳು ಕೇವಲ ತೋರ್ಪಡಿಕೆಗೆ, ಹೆಸರು ಗಳಿಕೆಗೆ ಮಾತ್ರ ಸೀಮಿತವಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯ ಶಿಕ್ಷಕಿ ಎಚ್.ಕೆ.ರತ್ನಮ್ಮ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಮುಂದಿನ ಜೀವನ ರೂಪಿಸಿಕೊಳ್ಳಲು ಪ್ರೌಢ ಶಾಲಾ ಹಂತ ಸೂಕ್ತ ವೇದಿಕೆಯನ್ನು ನಿರ್ಮಿಸಿಕೊಡುತ್ತದೆ. ಈ ವೇಳೆ ವಿದ್ಯಾರ್ಥಿಗಳು ಕಾಲ ಹರಣ ಮಾಡದೆ ಓದುವಿನ ಕಡೆ ಚಿತ್ತಹರಿಸಿ ಗುರಿಯೆಡೆಗೆ ಸಾಗ ಬೇಕು ಎಂದು ಕಿವಿ ಮಾತು ಹೇಳಿದರು.
ಇದೇ ವೇಳೆ ಸಮಾಜ ಸೇವಕ ಎಚ್.ಬಿ.ಗಂಗಾಧರಯ್ಯ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಎಸ್.ಡಿ.ಎಂಸಿ ಅಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ಬಸವರಾಜು, ಶಿಕ್ಷಕರುಗಳಾದ ದೊಡ್ಡಮನೆ ಕೀರ್ತಿ, ವೈ.ಜಿ.ಕೃಷ್ಣ, ನರಸಿಂಹಮೂರ್ತಿ, ನಾಗೇಶ್, ಸಿಬ್ಬಂದಿಗಳಾದ ರಮೇಶ್, ತಿಲೋತ್ತಮನಾಯಕ್, ಅನಿಲ್, ರೂಪ, ಪಾರ್ವತಮ್ಮ, ಕಲಾವತಿ ಮತ್ತು ಪೋಷಕರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5