ತುರುವೇಕೆರೆ: ಜೈನರ ಶಾಶ್ವತ ಪವಿತ್ರ ತೀರ್ಥ ಕ್ಷೇತ್ರವಾದ ಶ್ರೀ ಸಮ್ಮೇದ ಶಿಖರ್ಜಿಯನ್ನು ಉಳಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜೈನ ಸಮಾಜದ ಮುಖಂಡ ವಿಪುಲ್ ಜೈನ್ ಒತ್ತಾಯಿಸಿದರು.
ಪಟ್ಟಣದಲ್ಲಿನ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರೆಗೂ ತಾಲೂಕಿನ ತಂಡಗ ಮತ್ತು ಮಾಯಸಂದ್ರ ಜೈನ ಸಮಾಜದ ವತಿಯಿಂದ ನೂರಾರು ಮಂದಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಜೈನ ಸಮಾಜದ ಮುಖಂಡ ವಿಪುಲ್ ಜೈನ್ ಮಾತನಾಡಿ, ಜಾರ್ಖಂಡ್ ಸರ್ಕಾರವು ಧರ್ಮ ಧರ್ಮದ ಶಾಶ್ವತ ಪವಿತ್ರತೀರ್ಥಕ್ಷೇತ್ರವಾದ ಶ್ರೀ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣ ಮಾಡಲು ನಿರ್ಧರಿಸಿರುವುದು ಖಂಡನೀಯವಾಗಿದೆ. ಇದು ನಮ್ಮ ಧರ್ಮಕ್ಕೆ ಅಪಮಾನ ಮಾಡುವ ವಿಚಾರವಾಗಿದ್ದು, ಕೂಡಲೇ ಈ ನಿರ್ಧಾರವನ್ನು ಜಾರ್ಖಂಡ್ ಸರ್ಕಾರ ಹಿಂಪಡೆಯಬೇಕು, ಇದರ ಹಿನ್ನೆಲೆಯಲ್ಲೇ “ಶಿಖರ್ಜಿ ಉಳಿಸಿ” ಎಂಬ ಆಂದೋಲನವನ್ನು ಭಾರತ ದೇಶಾದ್ಯಂತ ಮತ್ತು ಕರ್ನಾಟಕ ರಾಜ್ಯದ್ಯಂತ ಅಲ್ಪಸಂಖ್ಯಾತರಾದ ನಮ್ಮ ಜೈನ ಸಮಾಜವು ಹೋರಾಟವನ್ನು ಹಮ್ಮಿಕೊಂಡಿದ್ದು, ನಮ್ಮ ತಾಲೂಕಿನಲ್ಲಿಯೂ ಸಹ ಹೋರಾಟ ಮಾಡುವ ಮೂಲಕ ಇಂದು ತಾಲೂಕಿನ ದಂಡಾಧಿಕಾರಿಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹಾಗೂ ರಾಷ್ಟ್ರಪತಿಗಳಿಗೆ ಪವಿತ್ರ ತೀರ್ಥಕ್ಷೇತ್ರ ಶ್ರೀ ಸಮ್ಮೇದ ಶಿಖರ್ಜಿಯನ್ನು ಉಳಿಸಬೇಕೆಂದು ಮನವಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡು ಧರ್ಮೋ ರಕ್ಷತಿ ರಕ್ಷಿತಃ, ಅಹಿಂಸ ಪರಮೋ ಧರ್ಮ ಘೋಷಣೆಯೊಂದಿಗೆ ನಡೆಸಿದರು.
ಪ್ರತಿಭಟನೆಯಲ್ಲಿ ತಂಡಗ ಜೈನ ಸಮಾಜದ ಅಧ್ಯಕ್ಷರಾದ ಚಂದ್ರಕೀರ್ತಿ, ಮಾಯಸಂದ್ರ ಜೈನ ಸಮಾಜದ ಅಧ್ಯಕ್ಷರಾದ ಪ್ರಭು, ಕಾರ್ಯದರ್ಶಿ, ಮಹಾವೀರ ಬಾಬು, ಅಜಿತ್ ಪ್ರಸಾದ್, ಮದನ್ ಕುಮಾರ್, ಸರಸ್ವತಿ ಮಹಿಳಾ ಸಮಾಜದ ಸುಮತಿ ಪ್ರಕಾಶ್, ಶೈಲಪ್ರಸಾದ್, ಸುಪ್ರಿಯರಾಕೇಶ್, ಪೂಜಾ, ಚೈತ್ರ, ಸೇರಿದಂತೆ ಮುಂತಾದ ಮುಖಂಡರುಗಳು, ಮಹಿಳಾ ಪದಾಧಿಕಾರಿಗಳು, ಉಪಸ್ಥಿತರಿದ್ದರು.
ವರದಿ: ಸಚಿನ್ ಮಾಯಸಂದ್ರ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz