ಕೊರಟಗೆರೆ : ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈರೇನಹಳ್ಳಿಯ ದಲಿತ ಕಾಲೋನಿಯ ಹನುಮಂತರಾಯಪ್ಪ ಎಂಬ ಮೃತ ವ್ಯಕ್ತಿಯ ಶವವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ತಹಸೀಲ್ದಾರ್ ನಹಿದಾ ಜಮ್ ಜಮ್ ಭೇಟಿ ನೀಡಿ ಸ್ಪಂದಿಸಿದ್ದಾರೆ.
100ಕ್ಕೂ ಅಧಿಕ ದಲಿತ ಕುಟುಂಬ ಇರುವಂತಹ ಬೈರೇನಹಳ್ಳಿಗೆ ಗ್ರಾಮದಲ್ಲಿ ಸ್ಮಶಾನವೇ ಮರೀಚಿಕೆಯಾಗಿದೆ. 50ಕ್ಕೂ ಹೆಚ್ಚು ಭಾರಿ ಅರ್ಜಿ ನೀಡಿದ್ದ ದಲಿತರಿಗೆ ಸ್ಮಶಾನದ ಜಾಗ ನಿಗದಿ ಪಡಿಸದೆ ಕೊರಟಗೆರೆ ತಾಲ್ಲೂಕು ಆಡಳಿತ ಜಾಣ ಮೌನವಹಿಸಿದೆ.
100ಕ್ಕೂ ಹೆಚ್ಚು ಜನ ದಲಿತ ಕುಟುಂಬ ವಾಸವಿರುವ ಬೈರೇನಹಳ್ಳಿ ಗ್ರಾಮದಲ್ಲಿ ದಲಿತರಿಗೆ ಶವ ಸಂಸ್ಕಾರಕ್ಕೆ ಜಾಗವಿಲ್ಲದೇ ಕೆರೆ-ಕಟ್ಟೆ, ರಸ್ತೆಬದಿ, ಸರಕಾರಿ ಹಳ್ಳದಲ್ಲಿ ಮಣ್ಣು ಮಾಡಬೇಕಿದೆ ಮಾಡುವ ಸ್ಥಿತಿ ಇದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದು, ತಡರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದ ಪರಿಶಿಷ್ಟ ಜಾತಿಯ ಸಮುದಾಯದ ಹನುಮಂತರಾಯಪ್ಪ(55) ಎಂಬವರ ಮೃತದೇಹವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಬೈರೇನಹಳ್ಳಿ ಗ್ರಾಮದ ಲೇ.ತಿಮ್ಮಯ್ಯ ಎಂಬವರ ಮಗನಾದ ಹನುಮಂತರಾಯಪ್ಪಅನಾರೋಗ್ಯ ಹಿನ್ನಲೆ ಬುಧವಾರ ತಡರಾತ್ರಿ ಮೃತಪಟ್ಟಿದ್ದರು ಮೃತಪಟ್ಟ ದಲಿತ ವ್ಯಕ್ತಿಗೆ ಶವ ಸಂಸ್ಕಾರ ನಡೆಸಲು ಸ್ಮಶಾನವೇ ಇಲ್ಲದಿರುವ ಪರಿಣಾಮ ಬುಧವಾರ ರಾತ್ರಿಯಿಂದ ರಸ್ತೆಯಲ್ಲಿಯೇ ಕಾಯುವಂತಹ ಪರಿಸ್ಥಿತಿ ನಿರ್ಮಾನವಾಗಿದೆ. ಬೈರೇನಹಳ್ಳಿ-ಮಧುಗಿರಿ ಸಂಪರ್ಕದ ಮುಖ್ಯರಸ್ತೆಯ ಅಕ್ಕಪಕ್ಕದಲ್ಲಿ ಈಗಾಗಲೇ ನೂರಾರು ದಲಿತ ಸಮುದಾಯದ ಜನರ ಶವ ಸಂಸ್ಕಾರ ನಡೆಸಲಾಗಿದೆ. ಈಗ ಅಲ್ಲಿ ಗುಂಡಿ ತೋಡಿದರೇ ಶವಗಳ ದೇಹಗಳು ಸಿಗುತ್ತಿವೆ. ಕೊರಟಗೆರೆ ತಹಶೀಲ್ದಾರ್, ಶಾಸಕರು ಮತ್ತು ಅಧಿಕಾರಿಗಳಿಗೆ 50ಕ್ಕೂ ಅಧಿಕ ಅರ್ಜಿಗಳು ನೀಡಿದ್ದರೂ ಪ್ರಯೋಜನಾ ಆಗಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಘಟನೆ ಸಂಭಂಧ ಬೈರೇನಹಳ್ಳಿ ಗ್ರಾಮದ ದಲಿತ ಯುವ ಮುಖಂಡ ಲಕ್ಷ್ಮೀಕಾಂತ್ ಮಾತನಾಡಿ, ಕಳೆದ 40ವರ್ಷದಿಂದ ಕೆರೆ-ಕಟ್ಟೆ ಮತ್ತು ರಸ್ತೆ ಬದಿಯ ಚರಂಡಿಯೇ ಬೈರೇನಹಳ್ಳಿ ದಲಿತರಿಗೆ ಶವಸಂಸ್ಕಾರದ ಸ್ಥಳವಾಗಿದೆ. ಬೈರೇನಹಳ್ಳಿ ಗ್ರಾಮದ 100 ದಲಿತ ಕುಟುಂಬಗಳಿಗೆ ಸ್ಮಶಾನವೇ ಮರೀಚಿಕೆ ಆಗಿದೆ. ನಮಗೆ ನಿಗದಿ ಪಡಿಸಿರುವ ಸ್ಥಳವನ್ನು ಗುರುತಿಸುವಲ್ಲಿ ಅಧಿಕಾರಿವರ್ಗ ವಿಫಲವಾಗಿದೆ. ದಯವಿಟ್ಟು ನಮ್ಮ ಸಮುದಾಯ ಬದುಕಲು ಅನುವು ಮಾಡಿಕೊಡಿ ಎಂದು ಮನವಿ ಮಾಡಿದರು.
ನಂತರ ದಲಿತ ಮುಖಂಡ ವೆಂಕಟೇಶ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಸಭೆಯಲ್ಲಿ ಕಳೆದ 30ವರ್ಷದಿಂದ ಸ್ಮಶಾನದ ಜಾಗಕ್ಕೆ ಮನವಿ ಮಾಡಲಾಗಿದೆ. ಆದರೆ ನಮ್ಮ ಮನವಿ ಅರ್ಜಿಗಳಿಗೆ ಮಾತ್ರ ಸಿಮೀತವಾಗಿದೆ. ಅಧಿಕಾರಿಗಳ ನಿರ್ಲಕ್ಷದಿಂದ ದಲಿತ ಕುಟುಂಬದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸ್ಮಶಾನ ಇಲ್ಲದೇ ರಸ್ತೆಯಲ್ಲಿ ಶವ ಸಂಸ್ಕಾರ ಮಾಡುತ್ತಿರುವ ದುಸ್ಥಿತಿ ಬೈರೇನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ತಕ್ಷಣ ತಹಶೀಲ್ದಾರ್ ಕೊರಟಗೆರೆ ತಾಲೂಕಿನ ದಲಿತರಿಗೆ ಸ್ಮಶಾನದ ಜಾಗವನ್ನು ಗುರುತಿಸಿ ಕೊಡಬೇಕಿದೆ ಎಂದು ಆಗ್ರಹ ಮಾಡಿದರು.
ನಂತರ ಕೊರಟಗೆರೆ ತಹಶೀಲ್ದಾರ್ ನಾಹೀದಾ ಜಮ್ ಜಮ್ ಮಾತನಾಡಿ, ಈಗಾಗಲೇ ಬೈರೇನಹಳ್ಳಿ ಗ್ರಾಮದಲ್ಲಿ 4 ಸ್ಮಶಾನ ಜಾಗಗಳು ಇದ್ದರೂ ಕೂಡ ಸ್ಥಳೀಯ ಗ್ರಾಮದವರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಸ್ಮಶಾನಕ್ಕಾಗಿ ಅಲೆಯುವಂತಾಗಿದೆ. ದಲಿತ ಕುಟುಂಬಕ್ಕೆ ಬೈರೇನಹಳ್ಳಿ ಗ್ರಾಮದ ಸರ್ವೇ ನಂಬರ್ 261ರಲ್ಲಿ 20ಗುಂಟೆ ಜಮೀನು ಸ್ಮಶಾನಕ್ಕಾಗಿ ಗುರುತಿಸಿ, ಗ್ರಾ.ಪಂ.ಗೆ ಹಸ್ತಾಂತರ ಮಾಡಲಾಗಿದೆ. ಸ್ಮಶಾನ ಅಭಿವೃದ್ದಿ ಮಾಡುವಂತೆ ಈಗಾಗಲೇ ಅರಸಾಪುರ ಗ್ರಾ.ಪಂ.ಗೆ ಸೂಚಿಸಿದ್ದೇನೆ. ಕೊರಟಗೆರೆ ತಾಲೂಕಿನಲ್ಲಿ ವಾಸಿಸುತ್ತಿರುವ ದಲಿತರಿಗೆ ಸ್ಮಶಾನದ ಜಾಗ ನೀಡಲು ತುರ್ತು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಬೈರೇನಹಳ್ಳಿಯ ದಲಿತ ಕುಟುಂಬಗಳ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ತಾತ್ಕಾಲಿಕವಾಗಿ ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇನ್ನೂಳಿದ 55ಗ್ರಾಮಗಳಲ್ಲಿ ಇದೇ ರೀತಿಯ ಸಮಸ್ಯೆಗಳಿದ್ದು, ತಕ್ಷಣ ಕಾರ್ಯಪ್ರವೃತ್ತರಾಗಿ ದಲಿತ ಕುಟುಂಬಗಳಿಗೆ ಶವ ಸಂಸ್ಕಾರ ಮಾಡಲು ಸ್ಮಶಾನಕ್ಕೆ ಜಾಗವನ್ನು ಹಸ್ತಾಂತರ ಮಾಡಿ ಸ್ಮಶಾನದ ಜಾಗವನ್ನು ಅಭಿವೃದ್ದಿ ಪಡಿಸಬೇಕಿದೆ.
ವರದಿ: ಮಂಜುಸ್ವಾಮಿ.ಎಂ.ಎನ್. , ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB