ಚಿತ್ರರಂಗದಲ್ಲಿ ಸ್ಟಾರ್ ವಾರ್ ಹೊಸದೇನು ಅಲ್ಲ. ದಶಕಗಳಿಂದಲೂ ಇದು ಚಾಲ್ತಿಯಲ್ಲಿದೆ. ಆದರೆ, ಕಾಲಕ್ಕೆ ತಕ್ಕಂತೆ ಈ ವಾರ್ ನ ಸ್ವರೂಪ ಬದಲಾಗುತ್ತಿರುತ್ತದೆ ಅಷ್ಟೆ.
ಚಿತ್ರನಟರು ಅನೊನ್ಯವಾಗಿಯೇ ಇದ್ದರು, ಈ ನಟರ ಫ್ಯಾನ್ಸ್ ಮಾತ್ರ ಕಿತ್ತಾಡೋದು ಬಿಡಲ್ಲ. ಇದಕ್ಕೆ ಕನ್ನಡ, ತಮಿಳು, ತೆಲುಗು, ಹಿಂದಿ ಎಂಬ ಬೇಧಭಾವವಿಲ್ಲ. ಎಲ್ಲಾ ಭಾಷೆಯ ಚಿತ್ರರಂಗದಲೂ ಈ ಸ್ಟಾರ್ ವಾರ್ ಇದ್ದದ್ದೇ.
ಮೊನ್ನೆಯಷ್ಟೆ ತಮಿಳು ನಟ ಕ್ಯಾಪ್ಟನ್ ವಿಜಯಕಾಂತ್ ನಿಧನದ ವೇಳೆ ನಡೆದ ಘಟನೆಯೊಂದು ಈ ಲೇಖನಕ್ಕೆ ಪ್ರೇರಣೆ. ೮೦-೯೦ ರ ದಶಕದ ಸೂಪರ್ ಸ್ಟಾರ್ ವಿಜಯಕಾಂತ್, ಅನಾರೋಗ್ಯದಿಂದ ನಿಧನ ಹೊಂದಿದರು. ಈ ನಟನ ಅಪಾರ ಅಭಿಮಾನಿಗಳು ಶೋಕದಲ್ಲಿ ಮುಳುಗಿದ್ದದ್ದನ್ನು ಟಿವಿಗಳಲ್ಲಿ ಗಮನಿಸಿದ್ದೇವೆ.
ಇದೇ ವೇಳೆ ನಟನ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸಾವಿರಾರು ಅಭಿಮಾನಿಗಳು ನೆರೆದಿದ್ದದ್ದನ್ನು ನೋಡಿದ್ದೇವೆ. ವಿಜಯಕಾಂತ್ ಅವರ ಸಮಕಾಲೀನ ನಟರಾದ ರಜನಿಕಾಂತ್, ಕಮಲ ಹಾಸನ್, ಸತ್ಯರಾಜ್.. ಸೇರಿದಂತೆ ತಮಿಳು ಚಿತ್ರರಂಗದ ದಿಗ್ಗಜರು ಅಂತಿಮ ದರ್ಶನ ಪಡೆದು ವಿದಾಯ ಹೇಳಲು ಆಗಮಿಸುತ್ತಿದ್ದರು.
ಇದೇ ವೇಳೆ ತಮಿಳಿನ ಜನಪ್ರಿಯ ನಟ ದಳಪತಿ ವಿಜಯ್ ಸಹ ಆಗಮಿಸಿ ಅಂತಿಮ ದರ್ಶನ ಪಡೆದು, ವಿಜಯಕಾಂತ್ ಕುಟುಂಬದವರಿಗೆ ಸಾಂತ್ವನ ಹೇಳಿ ಹಿಂದಿರುತ್ತಿದ್ದ ವೇಳೆ ನಡೆದ ಘಟನೆ ಇಡೀ ಸಿನಿ ಪ್ರೇಮಿಗಳೇ ತಲೆತಗ್ಗಿಸುವಂತಾಯಿತು. ಅಭಿಮಾನಿಗಳ ಗುಂಪಿನ ನಡುವೆ ಕಿಡಿಗೇಡಿಯೊಬ್ಬ ನಟ ವಿಜಯ್ ಮೇಲೆ ಚಪ್ಪಲಿ ಎಸೆದಿದ್ದ. ಈ ಚಪ್ಪಲಿ ನಟನ ಭುಜಕ್ಕೆ ತಾಕಿ ಕೆಳಗಡೆ ಬಿತ್ತು. ಈ ದೃಶ್ಯ ಸ್ಥಳದಲ್ಲಿದ್ದ ಕ್ಯಾಮೆರಾಗಳಲ್ಲಿ ಸೆರೆಯಾಗಿ ನ್ಯೂಸ್ ಚಾನೆಲ್ ಗಳಲ್ಲಿ ಬಿತ್ತರವಾಯ್ತು. ನಿಜಕ್ಕೂ ಇದು ಅನಪೇಕ್ಷಿತ ಅಹಿತಕರ ಘಟನೆ. ಸಾವಿನ ಮನೆಯಲ್ಲೂ ಸ್ಟಾರ್ ವಾರ್ , ಕ್ಷುಲ್ಲಕ ಮನಸ್ಸಿನ ವ್ಯಕ್ತಿಯ ಕೃತ್ಯ. ಇದರಿಂದ ಆತ ಯಾವುದೇ ನಟನ ಅಭಿಮಾನಿಯಾಗಿದ್ದರು ಸಹ ಆತನಿಗೆ ಶೋಭೆ ತರದು.
ಇಂಥದ್ದೆ ಒಂದು ಘಟನೆ ಕರ್ನಾಟಕದಲ್ಲೂ ನಡೆದಿತ್ತು. ನಟ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ, ಆಟಿಯೋ ಲಾಂಚ್ ಸಮಾರಂಭವೊಂದರಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆದು ವಿಕೃತಿ ಮೆರೆದಿದ್ದ. ಸಾವಿರಾರು ಜನರ ಗುಂಪಿನ ನಡುವೆ ಒಬ್ಬ ಎಸಗುವ ಈ ಕೃತ್ಯ ಇಡೀ ಸಿನಿ ಪ್ರೇಮಿಗಳಿಗೆ ಕಳಂಕ.
ವಿಶೇಷವೆಂದ್ರೆ, ಈ ಎರಡು ಪ್ರಕರಣಗಳಲ್ಲಿ ನಟರು ಭಾವೋದ್ರೇಕಕ್ಕೆ ಒಳಗಾಗದೇ ಸಂಯಮ ಪ್ರದರ್ಶಿಸಿದ್ದು. ತಮಿಳು ನಟ ವಿಜಯ್ ಆಗಲಿ ಅಥವಾ ಕನ್ನಡದ ನಟ ದರ್ಶನ್ ಆಗಲಿ ಘಟನೆಯನ್ನು ದೊಡ್ಡದು ಮಾಡಿ ದ್ವೇಷದ ಜ್ವಾಲೆಯನ್ನು ಹೆಚ್ಚಿಸುವ ಕೆಲಸ ಮಾಡಲಿಲ್ಲ. ಇದು ಆ ನಟರ ದೊಡ್ಡ ಗುಣಕ್ಕೆ ಸಾಕ್ಷಿ.
ಇನ್ನಾದರೂ ಅಭಿಮಾನಿಗಳು, ನಟರ ಮೇಲಿನ ಕ್ರೇಜ್ ಗೆ ಇಂಥ ಹೀನ ಕೃತ್ಯ ಎಸಗದಿರಲಿ ಎಂಬುದೇ ನಮ್ಮಲ್ಲೆರ ಹಾರೈಕೆ. ದ್ವೇಷ ಅಳಿಯಲಿ, ಅಭಿಮಾನ ಉಳಿಯಲಿ..


