ಕೊರಟಗೆರೆ : ಭಾರತ ವಿಶ್ವದಲ್ಲಿಯೇ ಯುವ ಬಲಿಷ್ಠ ಮತ್ತು ಸದೃಢ ರಾಷ್ಟ್ರವಾಗಿದೆ. ಈ ಬಲಿಷ್ಠ ರಾಷ್ಟ್ರವನ್ನು ಮಣಿಸಲು ಅನ್ಯ ದೇಶಗಳು ಡ್ರಗ್ಸ್ ಮೂಲಕ ದೇಶಕ್ಕೆ ಕಾಲಿಟ್ಟಿವೆ ಎಂದು ತಹಶೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.
ತುಮಕೂರು ಜಿಲ್ಲಾ ಪೋಲಿಸ್, ಮಧುಗಿರಿ ಉಪ ವಿಭಾಗ, ಕೊರಟಗೆರೆ ಪೋಲಿಸ್ ಠಾಣೆ ವತಿಯಿಂದ ಸ್ಕೌಟ್ಸ್ ಅಂಡ್ ಗೈಡ್ಸ್ ಸಹಯೋಗದಲ್ಲಿ ವಿದ್ಯಾರ್ಥಿಗಳ ಜೊತೆ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದವರೆಗೆ ‘‘ವಿಶ್ವ ಮಾದಕ ದ್ರವ್ಯಗಳ ವಿರೋಧಿ’’ ದಿನದ ಬಗ್ಗೆ ಹಮ್ಮಿಕೊಳ್ಳಲಾದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಶೇ.೫೮ ರಿಂದ ೬೦%ರಷ್ಟು ಮಂದಿ ಯುವಕರಿರುವ ಬಲಿಷ್ಠ ದೇಶ ಭಾರತ. ಕಳೆದ ಎರಡು ದಶಕದಲ್ಲಿ ಆರ್ಥಿಕತೆ, ಸಾಮಾಜಿಕತೆ, ಶೈಕ್ಷಣಿಕತೆ ಗುಣಮಟ್ಟವನ್ನು ಕುಗ್ಗಿಸಲು ಅನ್ಯ ದೇಶಗಳಿಂದ ಮಾದಕ ವಸ್ತುಗಳು ಹೆಚ್ಚಾಗಿ ರಫ್ತು ಆಗುತ್ತಿವೆ. ೧೯೮೭ ಡಿ.೭ರಂದು ವಿಶ್ವ ಸಂಸ್ಥೆಯು ಸಾಮಾನ್ಯ ಸಭೆಯಲ್ಲಿ ಜೂ.೨೬ರಂದು ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನ ಎಂದು ಘೋಷಿಸಿದೆ ಎಂದು ಹೇಳಿದರು.
ಉತ್ತಮ ಸಮಾಜಕ್ಕೆ ಯುವ ಶಕ್ತಿಯೇ ಆಧಾರ ಸ್ತಂಭ. ಆದರೆ ಡ್ರಗ್ಸ್ ಚಟದಿಂದಾಗಿ ಯುವಶಕ್ತಿಯು ತಪ್ಪು ದಾರಿ ಹಿಡಿಯುತ್ತಿದೆ. ಕುಟುಂಬದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಮಾದಕ ವಸ್ತುಗಳಿಂದ ಅತ್ಯಂತ ಜಾಗೃತರಾಗಿರಬೇಕು. ಸ್ವಸ್ಥ ಸಮಾಜದಲ್ಲಿ ಆರೋಗ್ಯವಂತ ಜೀವನವನ್ನು ನಡೆಸಬೇಕು ಎಂದು ಹೇಳಿದರು.
ಸಿಪಿಐ ಅನಿಲ್ ಮಾತನಾಡಿ, ವಿಶ್ವದಾದ್ಯಂತ ಮಾದಕ ವಸ್ತುಗಳ ದುಶ್ಚಟಗಳಿಗೆ ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಮತ್ತು ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣೆ ಕಾನೂನು ಬಾಹಿರ ಎಂದು ಗೊತ್ತಿದ್ದರೂ ಇದರ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಡ್ರಗ್ ಮಾಫಿಯಾ ಹತೋಟಿಗೆ ತರಲು ವಿಶ್ವದಲ್ಲೆಡೆ ಕಾನೂನು ಪ್ರಯತ್ನಗಳು ನಡೆಯುತ್ತಿವೆ. ಇದನ್ನು ಬುಡ ಸಮೇತ ಕಿತ್ತು ಹಾಕಲು ಸಾರ್ವಜನಿಕರ ಸಹಕಾರ ಅಷ್ಟೇ ಪ್ರಮುಖವಾಗಿದೆ ಎಂದು ಹೇಳಿದರು.
ಸ್ಕೌಟ್ಸ್ ಅಂಡ್ ಗೈಡ್ಸ್ ತಾ.ಅಧ್ಯಕ್ಷ ಕೆ.ಆರ್ ಓಬಳರಾಜು ಮಾತನಾಡಿ, ಭವಿಷ್ಯತ್ತಿನ ಉತ್ತಮ ಪ್ರಜೆಗಳಾಗಲು ಹಾಗೂ ಉತ್ತಮ ಸಮಾಜ ನಿರ್ಮಿಸಲು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನವಹಿಸಬೇಕು. ಯಾವುದೇ ಕಾರಣಕ್ಕೂ ಮಾದಕ ವ್ಯಸನಿಗಳಾಗಬಾರದು. ಸರ್ಕಾರವು ಮಾದಕ ದ್ರವ್ಯ ಮತ್ತು ಅಕ್ರಮ ಸಾಗಣೆಯನ್ನು ತಡೆಯಲು ಕಠಿಣ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಂದ ಪ್ರತಿಜ್ಞೆ:
ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ಹಲವು ಶಾಲೆಯ ವಿದ್ಯಾರ್ಥಿಗಳು ವೃತ್ತಾಕಾರದಲ್ಲಿ ನಿಂತು ಮಾದಕ ಪದಾರ್ಥಗಳ ವಿರುದ್ಧ ನಿರಂತರ ಧ್ವನಿ ಮೊಳಗಿಸುವೆ, ನಾನು ಮಾದಕ ಪದಾರ್ಥ ಸೇವಿಸುವುದಿಲ್ಲ, ಇತರರು ಸೇವಿಸದಂತೆ ತಡೆಯಲು ಪ್ರಯತ್ನಿಸುತ್ತೇವೆ. ಮಾದಕ ಪದಾರ್ಥಗಳನ್ನು ಸದಾ ವಿರೋಧಿಸುವೆ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ವೇಳೆ ಪಿ ಎಸ್ ಐ ತೀರ್ಥೇಶ್, ಅಭಿಷೇಕ್, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸ್ಕೌಟ್ಸ್ ಅಂಡ್ ಗೈಡ್ಸ್ ಮುಖ್ಯಸ್ಥ ಕರಿಸಿದ್ದಪ್ಪ, ಕಾರ್ಯದರ್ಶಿ ಪ್ರಸನ್ನಕುಮಾರ್, ಶಿಕ್ಷಕರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW