ಕೊರಟಗೆರೆ: ಮಳೆರಾಯನ ಆರ್ಭಟದಿಂದ ಸುವರ್ಣಮುಖಿ, ಜಯಮಂಗಲಿ ಮತ್ತು ಗರುಡಾಚಲ ನದಿಪಾತ್ರದ ಸೇತುವೆಗಳು ಸಂಪೂರ್ಣ ಜಲಾವೃತವಾಗಿದೆ.
ಕೊರಟಗೆರೆ ಕ್ಷೇತ್ರದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಬಹುತೇಕ ಮಣ್ಣಿನ ಮನೆಗಳು ಕುಸಿದಿವೆ. ರೈತಾಪಿವರ್ಗ ಬಿತ್ತನೆ ಮಾಡಿದ್ದ ಬೆಳೆಗಳು ನೀರಿನಲ್ಲಿ ಮುಳುಗಿ ರೈತರಿಗೆ ಕೋಟ್ಯಾಂತರ ರೂ ನಷ್ಟವಾಗಿದೆ.
ಕೊರಟಗೆರೆ ಕ್ಷೇತ್ರದಲ್ಲಿ ಹುಟ್ಟಿ ಹರಿಯುವ ಸುವರ್ಣಮುಖಿ, ಜಯಮಂಗಲಿ ಮತ್ತು ಗರುಡಾಚಲ ನದಿಪಾತ್ರದ 175ಕ್ಕೂ ಅಧಿಕ ಕೆರೆ-ಕಟ್ಟೆಗಳು ಭರ್ತಿಯಾಗಿವೆ.
25ವರ್ಷಗಳ ನಂತರ ಮಾವತ್ತೂರು ಕೆರೆಯ ಕೋಡಿ ಬಿದ್ದಿರುವ ಪರಿಣಾಮ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮತ್ತೊಂದು ಕಡೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾದ ಪರಿಣಾಮ ಗ್ರಾಮೀಣ ಪ್ರದೇಶದ ರೈತರಿಗೆ ಸಮಸ್ಯೆ ಎದುರಾಗಿದೆ.
ಗ್ರಾಮೀಣ ಪ್ರದೇಶದ ತೋಟದ ಮನೆಗಳಲ್ಲಿ ವಾಸಿಸುತ್ತೀರುವ ರೈತರಿಗೆ ಈಗಾಗಲೇ ಸಂಕಷ್ಟ ಎದುರಾಗಿದೆ. ಮತ್ತೆ ಮಳೆಯಾದರೇ ಅನಾಹುತ ಎದುರಾಗುವ ಸಾಧ್ಯತೆಯೇ ಹೆಚ್ಚಾಗಿದೆ.
ರೈತಾಪಿವರ್ಗ ತೋಟದ ಮನೆಗಳನ್ನು ತೊರೆದು ಗ್ರಾಮಗಳಿಗೆ ಆಗಮಿಸುವಂತೆ ಈಗಾಗಲೇ ಕಂದಾಯ, ಪೊಲೀಸ್ ಇಲಾಖೆ ಮತ್ತು ಗ್ರಾಪಂ ಅಧಿಕಾರಿವರ್ಗ ಮನವಿ ಮಾಡಿದೆ.
ಮಳೆರಾಯನ ಆರ್ಭಟದಿಂದ ಸಂಕಷ್ಟ ಎದುರಾಗಿರುವ ಪ್ರದೇಶಗಳಲ್ಲಿ ಈಗಾಗಲೇ ಕಂದಾಯ, ಪೊಲೀಸ್ ಮತ್ತು ಸ್ಥಳೀಯ ಗ್ರಾಪಂ ಆಡಳಿತ ಮೊಕ್ಕಾಂ ಹೊಡಿದೆ.
ನೂರಾರು ವಿದ್ಯುತ್ ಕಂಬಗಳು ಧರೆಗೆ ಉರುಳಿರುವ ಪರಿಣಾಮ ರಾತ್ರಿಯಿಡಿ ರೈತರು ಮತ್ತೆ ಕತ್ತಲೆಯಲ್ಲಿಯೇ ಕಾಲ ಕಳೆಯುವ ಪರಿಸ್ಥಿತಿಯು ನಿರ್ಮಾಣವಾಗಿದೆ. ಸಮಸ್ಯೆ ತೀರ್ವ ಆಗಿರುವ ಪರಿಣಾಮ ಬೆಸ್ಕಾಂ ಇಲಾಖೆಯು ಸಹ ಹಗಲುರಾತ್ರಿ ಕಾರ್ಯಚರಣೆ ನಡೆಯುತ್ತಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ರೈತರಿಗೆ ಪರಿಹಾರದ ಭರವಸೆ ನೀಡಿದ್ದಾರೆ. ತಹಶೀಲ್ದಾರ್ ನಾಹೀದಾ ಅವರು ಕೂಡ ರೈತರ ಮನೆಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದ್ದು, ಅಪಾಯಕಾರಿ ಸ್ಥಳದಲ್ಲಿರುವವರ ಸ್ಥಳಾಂತರಕ್ಕೆ ಕ್ರಮವಹಿಸಿದ್ದಾರೆ.
ವರದಿ: ಮಂಜುಸ್ವಾಮಿ.ಎಂ.ಎನ್ . ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz