ಉತ್ತರಕನ್ನಡ: 2ನೇ ತರಗತಿ ಬಾಲಕನಿಗೆ ಶಿಕ್ಷಕಿಯೊಬ್ಬರು ಬಾಸುಂಡೆ ಮೂಡುವಂತೆ ಥಳಿಸಿರುವ ಘಟನೆ ಉತ್ತರ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾಳಗನಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಸರಿಯಾಗಿ ಬರೆಯುವುದಿಲ್ಲ, ಕಲಿಸಿರೋದನ್ನು ಮನನ ಮಾಡಿಕೊಳ್ಳುವುದಿಲ್ಲ ಎಂದು ಸಿಟ್ಟಿಗೆದ್ದು ಶಿಕ್ಷಕಿಯು ವಿದ್ಯಾರ್ಥಿಗೆ ಸಣ್ಣ ಕೋಲಿನಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಹಗಿದೆ.
ಶಾಲೆ ಬಿಟ್ಟ ನಂತರ ಮನೆಗೆ ಹೋದ ಬಾಲಕ, ಮನೆಯಲ್ಲಿ ನೋವು ತಡೆದುಕೊಳ್ಳಲಾರದೇ ಅಳಲು ಆರಂಭಿಸಿದ್ದಾನೆ. ಮನೆಯವರು ಮೈಮೇಲಿನ ಶರ್ಟ್ ಬಿಚ್ಚಿ ನೋಡಿದಾಗ ಬಾಸುಂಡೆಗಳು ಮೂಡಿರುವುದು ಕಂಡುಬಂದಿದೆ. ಬಾಲಕನ ತಾಯಿ, ಗ್ರಾಮದ ಪ್ರಮುಖರಲ್ಲಿ ತಮ್ಮ ಮಗನಿಗೆ, ಶಿಕ್ಷಕಿ ಹೊಡೆದಿರುವುದನ್ನು ತೋರಿಸಿ ಕಣ್ಣೀರು ಹಾಕಿದ್ದಾರೆ.
ಶಾಲೆ ಬಿಟ್ಟ ನಂತರ ಮಾಹಿತಿ ತಿಳಿಯುತ್ತಿದ್ದಂತೆ ಬಿಇಒ ಸುಮಾ ಜಿ. ಶಾಲೆಗೆ ಭೇಟಿ ನೀಡಿದ್ದು, ಬಾಲಕನ ಪಾಲಕರು ಹಾಗೂ ಶಿಕ್ಷಕಿಯ ಜತೆ ಮಾತನಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಶಿಕ್ಷಕಿ, ತಾನು ಉದ್ದೇಶಪೂರ್ವಕವಾಗಿ ಬಾಲಕನಿಗೆ ಹೊಡೆದಿಲ್ಲ. ನನ್ನಿಂದ ತಪ್ಪಾಗಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ.
ಶಿಕ್ಷಕಿಯ ಮಾತು ಕೇಳಿ ಬಿಇಒ ಸುಮಾ ಆಕೆಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ನಂತರ ಬಾಲಕನನ್ನು ಮುಂಡಗೋಡದ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಶಾಲಾಭಿವೃದ್ಧಿ ಸಮಿತಿಯವರು ಹಾಗೂ ಬಾಲಕನ ಕುಟುಂಬಸ್ಥರು ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC