ಚಿತ್ರದುರ್ಗ: ಚಲಿಸುತ್ತಿದ್ದ ಕಾರು ಪಲ್ಟಿಯಾಗಿ ಮೂವರು ಮೃತಪಟ್ಟಿದ್ದಾರೆ ಹಾಗೂ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಚಿತ್ರದುರ್ಗದ ಮೊಳಕಾಲ್ಕೂರು ತಾಲೂಕಿನ ರಾಂಪುರ ಬಳಿ ಸಂಭವಿಸಿದೆ.
ಮೃತರೆಲ್ಲರೂ ಬಳ್ಳಾರಿಯ ಸಿರುಗುಪ್ಪ ಮೂಲದವರೆಂದು ತಿಳಿದು ಬಂದಿದೆ. ಮೃತ ಸುರೇಶನ ಅಜ್ಜಿ ಹುಲಿಗಮ್ಮ (66) ಎಂಬುವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಅಸುನೀಗಿದ್ದರು. ಬೆಂಗಳೂರಿನಿಂದ ಮೃತ ಅಜ್ಜಿಯ ಶವವನ್ನು ಕಾರಿನಲ್ಲಿ ಸಿರುಗುಪ್ಪಗೆ ಕರೆತರಲಾಗುತ್ತಿತ್ತು.
ಆದರೆ, ರಾಂಪುರ ಬಳಿಯ ಗ್ಯಾಂಡ್ ಪೋರ್ಡ್ ಹೋಟೆಲ್ ಬಳಿ ಕಾರಿನ ಟೈರ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿ ಕಾರು ಪಲ್ಟಿಯಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪಿಎಸ್ಐ ಪರಶುರಾಮ್ ಲಮಾಣಿ ಪರಿಶೀಲನೆ ನಡೆಸಿದರು. ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


