ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಪ್ರೇಮಿಗಳನ್ನು ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ನಂದಿನಿಬಾಯಿ ಮತ್ತು ನಿತೀಶ್ ಕುಮಾರ್ ಬಂಧಿತ ಆರೋಪಿಗಳು. ವೆಂಕಟ್ ನಾಯಕ್(30) ಕೊಲೆಯಾದ ವ್ಯಕ್ತಿ. ಇದೇ ತಿಂಗಳ 9ರಂದು ಹೆಚ್ಎಸ್ಆರ್ ಲೇಔಟ್ ನ ಮನೆಯಲ್ಲಿ ಆರೋಪಿ ನಂದಿನಿಬಾಯಿ ತನ್ನ ಪ್ರಿಯಕರ ನಿತೀಶ್ ಕುಮಾರ್ ಜೊತೆ ಸೇರಿ ತನ್ನ ಪತಿ ವೆಂಕಟ್ ನಾಯಕ್ ತಲೆ ಮೇಲೆ ರುಬ್ಬುವ ಗುಂಡು ಹಾಕಿ ಕೊಲೆ ಮಾಡಿದ್ದರು. ಸದ್ಯ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ಗಂಡ ಮನೆಯಲ್ಲಿ ಇಲ್ಲ ಎಂದು ಹೇಳಿ ನಂದಿನಿ ಬಾಯಿ ಜನವರಿ 9 ರಂದು ಪ್ರಿಯಕರ ನಿತೇಶ್ನನ್ನು ಹೆಚ್ ಎಸ್ ಆರ್ ಲೇಔಟ್ ನ ತನ್ನ ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ ಗಂಡ ವೆಂಕಟನಾಯಕ್ ದಿಢೀರ್ ಮನೆಗೆ ಬಂದಿದ್ದ. ಮನೆಗೆ ಕಾಲಿಡುತ್ತಿದ್ದಂತೆ ರೂಮ್ ನಲ್ಲಿ ತನ್ನ ಪತ್ನಿ ಬೇರೊಬ್ಬನ ಜೊತೆ ಆತ್ಮೀಯ ಸಲುಗೆಯಲ್ಲಿದ್ದದನ್ನು ಕಂಡು ಕೋಪಗೊಂಡಿದ್ದ. ಬಳಿಕ ಪತಿ–ಪತ್ನಿ ನಡುವೆ ಗಲಾಟೆಯಾಗಿದ್ದು ,ಜಗಳ ತಾರಕ್ಕಕ್ಕೇರಿ ಕೊಲೆ ನಡೆದಿದೆ. ನಂದಿನಿ ಹಾಗೂ ಆಕೆಯ ಪ್ರಿಯಕರ ಇಬ್ಬರು ಸೇರಿ ವೆಂಕಟನಾಯಕ್ ನ ತಲೆ ಮೇಲೆ ರುಬ್ಬುವ ಗುಂಡು ಎತ್ತಾಕಿ ಕೊಲೆ ಮಾಡಿದ್ದಾರೆ.
ಇನ್ನು ಪತಿಯನ್ನು ಕೊಂದ ಬಳಿಕ ಮೃತದೇಹವನ್ನು ಮನೆಯ ಹೊರಗೆ ಶೌಚಾಲಯದ ಬಳಿ ಇಟ್ಟು ಹೃದಯಾಘಾತವೆಂದು ಬಿಂಬಿಸಲು ಯತ್ನಿಸಿದ್ದಾರೆ. ಚೂಪಾದ ಕಲ್ಲು ಇಟ್ಟು ಕಲ್ಲಿನ ಮೇಲೆ ಬಿದ್ದಿದ್ದಾನೆ ಎಂದು ಸೀನ್ ಕ್ರೀಯೆಟ್ ಮಾಡಿದ್ದಾರೆ. ನಂತರ ಬೆಳಗ್ಗೆ ಗಂಡ ಸಾವನ್ನಪ್ಪಿದ್ದಾನೆ ಎಂದು ನಂದಿನಿ ಪೊಲೀಸರಿಗೆ ಕರೆ ಮಾಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು, ತನಿಖೆ ನಡೆಸಿದ ವೇಳೆ ಕೊಲೆ ನಡೆದಿರೋದು ಬೆಳಕಿಗೆ ಬಂದಿತ್ತು.


