ಬಾಗಲಕೋಟೆ: ಕ್ರೀಡಾ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದರಿಂದ ಯುವಕರಲ್ಲಿ ಕ್ರೀಡಾಸಕ್ತಿ ಹೆಚ್ಚಿಸುವುದರ ಜೊತೆಗೆ ದೈಹಿಕ ಶಿಕ್ಷಕರಿಗೆ ಪುನಶ್ಚೇತನ ನೀಡಲು ಸಹಕಾರಿಯಾಗುತ್ತವೆ ಎಂದು ನಿವೃತ್ತ ಪ್ರಾಚಾರ್ಯ ಡಾ. ಗುರುದತ್ತ ಜಿ.ಕೋರಿ ಹೇಳಿದರು.
ನಗರದ ಬಿವಿವಿ ಸಂಘದ, ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ ಖೋ–ಖೋ ಕ್ರೀಡೆಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಕ್ರೀಡೆಯು ವ್ಯಕ್ತಿತ್ವ ವಿಕಸನಕ್ಕೆ ಒಂದು ರಹದಾರಿಯಾಗಿದ್ದು ಯುವಜನತೆ ಇತ್ತ ವಾಲುವಂತೆ ಮಾಡುವುದು ದೈಹಿಕ ಶಿಕ್ಷಕರ ಕೈಯಲ್ಲಿದೆ. ಅವರು ನಾಲ್ಕು ಗೋಡೆಗಳ ಮಧ್ಯೆ ಉಪಾನ್ಯಾಸದಲ್ಲಿ ಕಾಲ ಕಳೆಯದೆ ಆಟದ ಮೈದಾನದತ್ತ ಹೆಜ್ಜೆ ಹಾಕಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹ ನೀಡಬೇಕು ಎಂದರು.
ಬದಲಾಗುತ್ತಿರುವ ಜಗತ್ತಿನಲ್ಲಿ ಕ್ರೀಡಾ ಹವ್ಯಾಸವು ಬದಲಾಗುತ್ತಿದ್ದು ಹೊಸ ಅಭಿರುಚಿಗಳೊಂದಿಗೆ ಕ್ರೀಡಾಸಕ್ತಿ ಬೆಳೆಸಿಕೊಂಡರೆ ಮಾತ್ರ ಸಾಧನೆ ಸಾಧ್ಯ. ಇಂತಹ ಕ್ರೀಡಾ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದರಿಂದ ಕ್ರೀಡೆಗಳ ಪರಿಚಯದ ಜೊತೆಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಸಾಧ್ಯವಾಗುತ್ತದೆ. ಸರಕಾರವು ಕೂಡ ಇಂತಹ ಕಾರ್ಯಾಗಾರಗಳನ್ನು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ನಡೆಸಬೇಕು ಎಂದರು.
ರಾಜ್ಯ ಖೋ–ಖೋ ಅಮೇಚೂರ ಪೇಡರೇಶನ್ ಕಾರ್ಯದರ್ಶಿಗಳಾದ ಪಿ.ಚಿನ್ನಮೂರ್ತಿ ಮಾತನಾಡಿ, ಖೋಖೋ ಹಳ್ಳಿಗಳಲ್ಲಿ ಹುಟ್ಟಿದ ಕ್ರೀಡೆಯಾದರೂ ತನ್ನದೇ ಆದ ಪ್ರಾಧಾನ್ಯತೆಯ ಮೂಲಕ ಕ್ರೀಡಾಕ್ಷೇತ್ರದಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಕಾಲ ಬದಲಾದಂತೆ ಖೋಖೋದಲ್ಲಿ ನಿಯಮಗಳು ಬದಲಾಗುತ್ತಾ ಬಂದಿದ್ದು, ದೈಹಿಕ ಶಿಕ್ಷಕರು ಅವುಗಳನ್ನು ಅನುಸರಿಸಬೇಕು ಎಂದರು.
ಪ್ರಾಚಾರ್ಯರಾದ ಪ್ರೊ. ಎಸ್.ಎಸ್ ಬಿರಾದಾರ ಮಾತನಾಡಿ, ಕ್ರೀಡಾ ಕಾರ್ಯಾಗಾರವು ಪ್ರತಿ ದೈಹಿಕ ಶಿಕ್ಷಕನ ಉನ್ನತಿಗೆ ಸಹಾಯಕಾರಿಯಾಗಿವೆ. ಅಲ್ಲದೇ ಇಂತಹ ಕಾರ್ಯಾಗಾರಗಳನ್ನು ಬರುವ ದಿನಗಳಲ್ಲಿ ಮತ್ತಷ್ಟು ವಿವಿಧ ಕ್ರೀಡೆಗಳ ಮೇಲೆ ಮಹಾವಿದ್ಯಾಲಯದಲ್ಲಿ ಸಂಘಟಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣದ ಪರಿವೀಕ್ಷಕರಾದ ಆರ್.ಆರ್ ಪಾಟೀಲ ಹಾಗೂ ಐಕ್ಯೂಎಸಿ ಸಂಯೋಜಕರಾದ ಡಾ. ಎಸ್. ಸಿ. ನಾಗರಬೆಟ್ಟ, ಸಂಘಟನಾ ಕಾರ್ಯದರ್ಶಿ ಪ್ರೊ. ಆರ್. ವಾಯ್ ಅಂಕಲಗಿ ಸೇರಿದಂತೆ ವಿವಿಧ ಸರಕಾರಿ & ಅರೆಸರಕಾರಿ ಶಾಲೆಗಳಿಂದ ಆಗಮಿಸಿದ ದೈಹಿಕ ಶಿಕ್ಷಕರು, ದೈಹಿಕ ನಿರ್ದೇಶಕರು ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರೊ. ಎಸ್.ಆರ್ ಗೌಡರ ನಿರೂಪಿಸಿದರು.


