ಮರಗಳ್ಳತನ ಆರೋಪದ ಮೇಲೆ ತಮ್ಮ ಸಹೋದರನ ವಿರುದ್ದ ಪ್ರಕರಣ ದಾಖಲಾದ ಹಿನ್ನೆಲೆ ಸರ್ಕಾರದ ವಿರುದ್ದ ಕಿಡಿಕಾರಿ, ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದ ಮೈಸೂರು–ಕೊಡಗು ಸಂಸದ ಪ್ರತಾಪ್ ಸಿಂಹಗೆ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ. ಟಾರ್ಗೆಟ್ ಮಾಡುವುದಕ್ಕೆ ಪ್ರತಾಪ್ ಸಿಂಹ ನ್ಯಾಷನಲ್ ಲೀಡರಾ..? ಪ್ರತಾಪ್ ಸಿಂಹ ತಾವು ನ್ಯಾಷನಲ್ ಲೀಡರ್ ಅಂದುಕೊಂಡಿದ್ದಾರೆ ನ್ಯಾಷನಲ್ ಲೀಡರ್ ಎಂಬ ಭ್ರಮೆಯಲ್ಲಿ ಹೇಳಿಕೆ ನೀಡಿದ್ದಾರೆ. ನಮ್ಮ ತಂದೆ ಯಾವತ್ತೂ ರಾಜಕೀಯವಾಗಿ ಟಾರ್ಗೆಟ್ ಮಾಡಿಲ್ಲ. ತಮಗೆ ರಾಜಕೀಯವಾಗಿ ಅನ್ಯಾಯ ಮಾಡಿದರು ಆದರೂ ಅನ್ಯಾಯ ಮಾಡಿದವರ ವಿರುದ್ದ ರಾಜಕಾರಣ ಮಾಡಲಿಲ್ಲ. ಇಂತಹದರಲ್ಲಿ ಪ್ರತಾಪ್ ಸಿಂಹರನ್ನ ಏಕೆ ಟಾರ್ಗೆಟ್ ಮಾಡ್ತಾರೆ. ಪ್ರತಾಪ್ ಸಿಂಹ ಸಹೋದರ ತಪ್ಪು ಮಾಡಿದ್ದಾರೆ ಅದಕ್ಕೆ ಕೇಸ್ ಆಗಿದೆ. ಇಲ್ಲಿ ನನ್ನ ರಾಜಕೀಯ ಪ್ರಶ್ನೆಯೇ ಇಲ್ಲ ಎಂದರು.


