ಬೆಂಗಳೂರು: ಕೆರೆಗಳಿಗೆ ನೀರು ತುಂಬಿಸುವುದರಲ್ಲಿ ಏಷ್ಯಾದಲ್ಲೇ ಉತ್ತಮ ಕಾರ್ಯ ನಮ್ಮ ರಾಜ್ಯದಲ್ಲಿ ಆಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ “ನೀರಿದ್ದರೆ ನಾಳೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಗರಿಕತೆ ಬೆಳೆದದ್ದು — ಉಳಿದಿರುವುದು ನೀರಿನಿಂದಲೇ. ಜನರಲ್ಲಿ ನೀರಿನ ಬಳಕೆ, ನೀರಿನ ಮೌಲ್ಯ ಮತ್ತು ಅಂತರ್ಜಲವೃದ್ಧಿ ಬಗ್ಗೆ ಸಚಿವ ಬೋಸರಾಜು ಅವರು ಇಲಾಖೆಯ ವತಿಯಿಂದ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಇದು ಆರೋಗ್ಯಕರ ಸಂಗತಿ ಎಂದರು.
ರಾಜ್ಯದಲ್ಲಿ 37 ಲಕ್ಷ ಬೋರ್ ವೆಲ್ ಗಳ ಮೂಲಕ ಅಂತರ್ಜಲ ಬಳಕೆ ಆಗುತ್ತಿದೆ. ದಾಖಲೆಗಳಲ್ಲಿ ಇಲ್ಲದ ಲಕ್ಷಾಂತರ ಅನಧಿಕೃತ ಬೋರ್ ವೆಲ್ ಗಳೂ ಇವೆ. ರಾಷ್ಟ್ರೀಯ ಸರಾಸರಿಗಿಂತ ಶೇ.8 ರಷ್ಟು ಹೆಚ್ಚಿನ ಬಳಕೆ ಆಗುತ್ತಿದೆ ಎನ್ನುವ ವರದಿಗಳಿವೆ ಎಂದು ಹೇಳಿದರು.
144 ತಾಲ್ಲೂಕುಗಳನ್ನು ಹೊರತು ಪಡಿಸಿ ಉಳಿದ ತಾಲ್ಲೂಕುಗಳಲ್ಲಿ ನೀರಿನ ಅಂತರ್ಜಲದ ಪ್ರಮಾಣ ಕೊರತೆ ಇದೆ. ಈ ಕಾರಣಕ್ಕೇ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಗಳನ್ನು ತುಂಬಿಸುವ ಕೆ.ಸಿ.ವ್ಯಾಲ್ಯೂ ಯೋಜನೆ ಜಾರಿ ಮಾಡಲಾಯಿತು. ಇದರಿಂದ ಈಗ ಅಂತರ್ಜಲ ವೃದ್ಧಿಯಾಗಿದೆ. ಆದರೆ ಇದನ್ನೂ ವಿರೋಧಿಸುವವರು ಇದ್ದಾರೆ ಎಂದು ಸಿಎಂ ಹೇಳಿದರು.
ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಅಂತರ್ಜಲ ವೃದ್ಧಿಗೆ ಸಾವಿರಾರು ಕೋಟಿ ಖರ್ಚು ಮಾಡಿದ್ದೇವೆ. ಇದರಿಂದ ಅಂತರ್ಜಲ ಉತ್ತಮವಾಗಿ ವೃದ್ಧಿಯಾಗಿದೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC