ತಿಪಟೂರು: ತಾಲೂಕಿನ ಹಾಲ್ಕುರಿಕೆ ರಸ್ತೆಯ ಹರಿಸಮುದ್ರ ಗೇಟ್ ಬಳಿ ಡೀಸೆಲ್ ಒತ್ತೊಯ್ಯುತ್ತಿದ್ದ ಲಾರಿ ಪಲ್ಟಿಯಾಗಿದ್ದು, ಇದೇ ವೇಳೆ ಡೀಸೆಲ್ ತುಂಬಿಕೊಳ್ಳಲು ಅಕ್ಕ ಪಕ್ಕದ ಗ್ರಾಮಸ್ಥರು ಮುಂದಾದ ಘಟನೆ ನಡೆದಿದೆ.
ಹಾಸನದಿಂದ ಚಿತ್ರದುರ್ಗಕ್ಕೆ ಅತಿ ವೇಗದಲ್ಲಿ ಚಲಿಸುತ್ತಿದ್ದ ಡೀಸೆಲ್ ಟ್ಯಾಂಕರ್ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಬಳಿಕ ಟ್ರಾನ್ಸ್ ಫಾರ್ಮ್ ಕಂಬಕ್ಕೆ ಹೊಡೆದು ಮಗುಚಿ ಬಿದ್ದಿದೆ.
ಬೈಕ್ ನಲ್ಲಿದ್ದ ಕುಳಿತಿದ್ದ ಭೈರನಾಯಕನಹಳ್ಳಿ ಮೂಲದ ಗೃಹಿಣಿ ಸರ್ವಮಂಗಳ(47) ಎಂಬವರಿಗೆ ಅಪಘಾತದಲ್ಲಿ ಗಂಭೀರವಾಗಿ ಗಾಯವಾಗಿದ್ದು, ಅವರು ಚಿಕತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಸರ್ವಮಂಗಳ ಅವರು, ಗೃಹಲಕ್ಷ್ಮಿ ಯೋಜನೆಯ ಹಣ ಸಿಗದ ಕಾರಣ ಹೊನ್ನವಳ್ಳಿಯ ನಾಡಕಚೇರಿಯಲ್ಲಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿ ಹಿಂದಿರುಗುತ್ತಿದ್ದರು ಈ ವೇಳೆ ಹರಿಸಮುದ್ರ ಗೇಟ್ ನ ಬಳಿ ವೇಗವಾಗಿ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ.
ಟ್ಯಾಂಕರ್ ಪಲ್ಟಿಯಾದ ಪರಿಣಾಮ ರಸ್ತೆಯ ತುಂಬೆಲ್ಲ ನೀರಿನಂತೆ ಇಂಧನ ಡೀಸೆಲ್ ಹರಿದಿದ್ದು, ಈ ವೇಳೆ ಸುತ್ತಮುತ್ತಲಿನ ಗ್ರಾಮಸ್ಥರು ಬಿಂದಿಗೆ, ಬಕೇಟು, ಡೀಸೆಲ್ ಕ್ಯಾನ್ ಗಳನ್ನು ಗಳನ್ನು ಹಿಡಿದು ಮನಸೋ ಇಚ್ಛೆ ಡೀಸೆಲ್ ತುಂಬಿಕೊಂಡು ತೆರಳುತ್ತಿರುವುದು ಕಂಡು ಬಂತು.
ಈ ರಸ್ತೆಯಲ್ಲಿ ಪ್ರತಿ ದಿನಾಲು ನೂರಾರು ಟ್ಯಾಂಕರ್ ಲಾರಿಗಳು ಅತಿ ವೇಗವಾಗಿ ಚಲಿಸುತ್ತಿರುತ್ತವೆ. ರಸ್ತೆಯಲ್ಲಿ ಬಹಳಷ್ಟು ತಿರುವುಗಳಿದ್ದು, ತಿರುವುಗಳನ್ನು ಲೆಕ್ಕಿಸದೆ ಸಂಚಾರಿ ನಿಯಮವನ್ನು ಪಾಲಿಸದೆ ಅತಿ ವೇಗವಾಗಿ ಚಾಲಕರು ಗಾಡಿಯನ್ನು ಚಲಾಯಿಸುವುದು ಸರ್ವೇಸಾಮಾನ್ಯವಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಇತ್ತ ಗಮನಹರಿಸಿ, ಈ ರೀತಿಯ ಅನಾಹುತಗಳು ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಘಟನೆ ನಡೆದ ವಿಚಾರ ತಿಳಿದ ಕೂಡಲೇ ಹೊನ್ನವಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಡಿಸೇಲ್ ತುಂಬಿಸಿಕೊಳ್ಳಲು ನೂಕು ನುಗ್ಗಲು ಬಿದ್ದ ಸ್ಥಳೀಯರಿಗೆ ಅರಿವು ಮೂಡಿಸಿದ್ದಾರೆ.
ಸ್ಥಳಕ್ಕೆ ಡಿ.ವೈ.ಎಸ್.ಪಿ.ವಿನಾಯಕ ಶೆಟಗೇರಿ, ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ: ಆನಂದ, ತಿಪಟೂರು


