ಬೆಂಗಳೂರು: ಬೆಂಗಳೂರು ಮೆಟ್ರೊ ನಿಲ್ದಾಣಗಳಲ್ಲಿ ಮಳಿಗೆ ಹಂಚಿಕೆಯಲ್ಲಿ ಯಾವುದೇ ಪಕ್ಷಪಾತ ಮಾಡಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸ್ಪಷ್ಟನೆ ನೀಡಿದೆ.
ಅಮುಲ್ಗೆ 10 ಮಳಿಗೆಗಳ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿಎಂಆರ್ ಸಿಎಲ್ ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ ಚವಾಣ್, ಬೆಂಗಳೂರು ಮೆಟ್ರೊ ನಿಲ್ದಾಣಗಳ ವ್ಯಾಪ್ತಿಯಲ್ಲಿರುವ ಅಂಗಡಿಗಳು ಮತ್ತು ಮಳಿಗೆಗಳನ್ನು ಟೆಂಡರ್ ಪ್ರಕ್ರಿಯೆ ಮೂಲಕ ಹಂಚಲಾಗಿದೆ. ಈ ಪ್ರಕ್ರಿಯೆಯ ಮೂಲಕ ಅಮುಲ್ 10 ಮಳಿಗೆಗಳನ್ನು ಪಡೆದುಕೊಂಡಿದೆ ಎಂದರು.
ಭವಿಷ್ಯದ ಟೆಂಡರ್ಗಳಲ್ಲಿ ನಂದಿನಿ ಭಾಗವಹಿಸಿದರೆ ಅದಕ್ಕೂ ಮಳಿಗೆಗಳನ್ನು ನೀಡುತ್ತೇವೆ. ನಾವು ಯಾರಿಗೂ ಆದ್ಯತೆ ನೀಡುವುದಿಲ್ಲ. 10 ಮಳಿಗೆಗಳಿಗೆ ಐದು ವರ್ಷಗಳ ಅವಧಿಗೆ ಅಮುಲ್ಗೆ ಮಾಸಿಕ ರೂ. 7 ಲಕ್ಷ ಬಾಡಿಗೆ ನಿಗದಿಪಡಿಸಲಾಗಿದೆ. ಬಿಎಂಆರ್ಸಿಎಲ್ ಇತ್ತೀಚೆಗೆ ಆಹ್ವಾನಿಸಿದ ಟೆಂಡರ್ನಲ್ಲಿ ನಂದಿನಿ ಭಾಗವಹಿಸಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಮ್ಮ ಮೆಟ್ರೋದಲ್ಲಿ ಅಮುಲ್ ಮಳಿಗೆ ತೆರೆದ ಹಿನ್ನೆಲೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ರಾಜ್ಯದ ನಂದಿನಿಗೆ ಸ್ಥಾನವಿಲ್ಲವೇ ಎನ್ನುವ ಆಕ್ರೋಶ ಕೇಳಿ ಬಂದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮತ್ತು ಕನ್ನಡ ಪರ ಸಂಘಟನೆಗಳು ರಾಜ್ಯ ಸರ್ಕಾರವನ್ನು ತರಾಟೆಗೆತ್ತಿಕೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW