ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ನ ಅರಣ್ಯದಂಚಿನಲ್ಲಿರುವ ಶಿವಪುರ ಹೊರವಲಯದಲ್ಲಿ ಹುಲಿ ದಾಳಿಗೆ ಇಬ್ಬರು ಕುರಿಗಾಹಿಗಳಿಗೆ ಗಾಯವಾಗಿರುವಂತಹ ಘಟನೆ ನಡೆದಿದೆ. ಶಿವಶೆಟ್ಟಿ(55), ಜವರಯ್ಯ(65) ಗಾಯಗೊಂಡವರು.
ಮೊದಲಿಗೆ ಕುರಿಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಕುರಿಯನ್ನು ರಕ್ಷಿಸಲು ಕುರಿಗಾಹಿಗಳು ಯತ್ನಿಸಿದಾಗ ಕುರಿಗಾಹಿಗಳ ಮೇಲೆ ದಾಳಿ ಮಾಡಿದೆ. ಗಾಯಾಳುಗಳಿಗೆ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗುಂಡ್ಲುಪೇಟೆ ತಾಲೂಕಿನ ಕಲ್ಲಹಳ್ಳಿಯಲ್ಲಿ ಇತ್ತೀಚೆಗೆ ಹಸುವಿನ ಮೇಲೆ ಹುಲಿ ದಾಳಿ ಮಾಡಿತ್ತು. ಕಲ್ಲಹಳ್ಳಿ-ಸಂಪಿಗೆಪುರ ಮಾರ್ಗದಲ್ಲಿ ಹುಲಿ ಸಂಚರಿಸುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಪದೇ ಪದೆ ಹುಲಿ ಕಾಣಿಸಿರುವ ಕಾರಣ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು.


