ತಿಪಟೂರು: ತಿಪಟೂರ್ ನಗರದ ಜನರಿಗೆ ನಗರಸಭೆ ಕಲುಷಿತ ನೀರನ್ನು ಕುಡಿಸುತ್ತಿದ್ದು, ತಾಲ್ಲೂಕಿನ ಈಚನೂರು ಗ್ರಾಮದ ಕೆರೆಗೆ ಕಳೆದ ನಾಲ್ಕೈದು ವರ್ಷಗಳಿಂದ ನಗರ ಸಭೆ ಕಲುಷಿತ ನೀರನ್ನು ಕಳುಹಿಸುತ್ತಿದೆ ಎನ್ನುವ ಆಕ್ರೋಶ ಕೇಳಿ ಬಂದಿದೆ.
ಶಾಸಕರು ಹಾಗೂ ಮಾಜಿ ಶಾಸಕರ ಗಮನಕ್ಕೆ ಈ ವಿಚಾರವನ್ನು ಸಾಕಷ್ಟು ಬಾರಿ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಯಾರೂ ಯಾವುದೇ ಸ್ಪಷ್ಟನೆ ಕೂಡ ನೀಡುತ್ತಿಲ್ಲ ಅಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಕೆರೆಗೆ ಅಧಿಕಾರಿಗಳು ಕಲುಷಿತ ನೀರು ಬಿಡುತ್ತಿದ್ದಾರೆ. ಈ ಕಲುಷಿತ ನೀರನ್ನು ಕುಡಿದು ಇಪ್ಪತ್ತು ಕುರಿಗಳು ಸಾವನ್ನಪ್ಪಿದ ಘಟನೆ ಕೂಡ ನಡೆದಿದೆ ಅಂತ ಇಲ್ಲಿನ ಸಾರ್ವಜನಿಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆರೆಯಲ್ಲಿ ಕಲುಷಿತ ನೀರು ಸಂಗ್ರಹವಾಗುತ್ತಿರುವುದನ್ನು ತಡೆಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹೇಮಾವತಿ ನೀರು ಹಾಗೂ ನಗರದ ಯುಜಿಡಿಯ ಕಲುಷಿತ ನೀರು ಈಚನೂರು ಕೆರೆಗೆ ಒಟ್ಟಿಗೆ ಸಂಗ್ರಹವಾಗ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಗಮನ ನೀಡುತ್ತಿಲ್ಲ. ಹಾಗಾಗಿ ರಾಜ್ಯ ಸರ್ಕಾರವೇ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಕ್ರಮಕೈಗೊಳ್ಳಬೇಕು ಅಂತ ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.
ನಗರದಿಂದ ಬಂದ ಕಲುಷಿತ ನೀರು ಮತ್ತೆ ಶುದ್ದಿಗೊಳಿಸಿ ಪುನಃ ಕುಡಿಯುವ ನೀರಿಗಾಗಿ ನಗರಕ್ಕೆ ಪೂರೈಕೆ ಮಾಡಲಾಗುತ್ತಿದೆ. ಜನರ ಜೀವನದಲ್ಲಿ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಈಗಾಗಲೇ ಜುಲೈ 25 ರಿಂದ ಕಾಲುವೆಯಲ್ಲಿ ಹೇಮಾವತಿ ನೀರು ಹರಿಯುತ್ತಿದೆ. ಆದರೂ ಈಚನೂರು ಕೆರೆ ಇನ್ನೂ ತುಂಬಿಲ್ಲ. ಈಗಿರುವ ನೀರು ಕೇವಲ 2 ತಿಂಗಳಿಗೆ ಮಾತ್ರ ತಿಪಟೂರು ನಗರಕ್ಕೆ ಪೂರೈಕೆ ಮಾಡಲು ಸಾಧ್ಯ. ಅಧಿಕಾರಿಗಳ ಬೇಜವಾಬ್ದಾರಿಯಿಂದ ರೈತರು ಕಂಗಾಲಾಗಿದ್ದಾರೆ. ದಿನ ನಿತ್ಯ 200hp ಹಾಗೂ 40 hp 2 ಮೋಟಾರ್ ಗಳು ಕಾರ್ಯ ನಿರ್ವಹಿಸದೆ ಸ್ತಬ್ದಗೊಂಡಿವೆ. ಜಿಲ್ಲಾಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಗ್ರಾಮಸ್ಥರ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q