ತಿಪಟೂರು: ನಗರದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಸತ್ಯಗಣಪತಿ ವಿಸರ್ಜನಾ ಮಹೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಶನಿವಾರ ರಾತ್ರಿ ಆಸ್ಥಾನ ಮಂಟಪದಿಂದ ಹೊರಟ ಮೆರವಣಿಗೆ ದೊಡ್ಡಪೇಟೆ, ಕನ್ನಿಕಾ ಪರಮೇಶ್ವರಿ ದೇವಾಸ್ಥಾನ ರಸ್ತೆ, ಕೋಟೆ, ನೀಲಕಂಠಸ್ವಾಮಿ ಸರ್ಕಲ್ ಮೂಲಕ ಸಾಗಿತು. ಭಾನುವಾರ ಮುಂಜಾನೆ ಗಾಂಧಿನಗರ, ಕಾರ್ಪೊರೇಷನ್ ರಸ್ತೆ, ರಾಮಮಂದಿರ ರಸ್ತೆ, ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಸಾಗಿ ಸಿಂಗ್ರಿ ನಂಜಪ್ಪ ವೃತ್ತದಿಂದ ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಅಮಾನಿಕೆರೆಯ ಬಳಿವರೆಗೆ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಸತ್ಯಗಣಪತಿಗೆ ಕೊಬ್ಬರಿ, ಕಿತ್ತಳೆ, ಸೇಬು, ಕಜ್ಜಾಯ, ಸೇವಂತಿಗೆ, ಚಕ್ಕುಲಿ, ಕರಿಕಡುಬು, ಕರಿದ ಪದಾರ್ಥಗಳಿಂದ ಮಾಡಿದ ಭಾರಿ ಗಾತ್ರದ ಹಾರಗಳು ಸೇರಿದಂತೆ ವಿವಿಧ ಬಗೆಯ ದೊಡ್ಡ ಹಾರಗಳನ್ನು ಭಕ್ತರು ಸಮರ್ಪಸಿದರು. ಪ್ರತಿ ಅಂಗಡಿಗಳ ಮುಂದೆ ಮಾವಿನ ತೋರಣ, ಬಾಳೆಗಿಡಗಳ ಅಲಂಕಾರದೊಂದಿಗೆ ಅನ್ನದಾನ, ಫಲಹಾರ, ಮಜ್ಜಿಗೆ, ಪಾಯಸ ನೀಡಲಾಯಿತು. ನೂರಾರು ತೆಂಗಿನ ಕಾಯಿ ಈಡುಗಾಯಿ, ನಗರದ ರಸ್ತೆಯ ಮೇಲೆ ವಿವಿಧ ಬಣ್ಣದ ರಂಗೋಲಿ ಹಾಕಲಾಗಿತ್ತು.
ಗಣೇಶೋತ್ಸವದಲ್ಲಿ ಕೋಲಾಟ, ವೀರಗಾಸೆ, ನಂದಿಧ್ವಜ, ಚಂಡೆ, ಹುಲಿ ಕುಣಿತ, ಭದ್ರ ಕಾಳಿ ಕುಣಿತ, ಕೀಲು ಕುದುರೆ, ಕುದುರೆ ಸವಾರಿ, ಡೊಳ್ಳು ಕುಣಿತ, ನಾದಸ್ವರ ಭಕ್ತರ ಮನ ತಣಿಸಿತು. ಡಿ.ಜೆ., ಸಿಡಿಮದ್ದಿನ ನಡುವೆ ಭಾನುವಾರ ಮೆರವಣಿಗೆ ನಡೆಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


