ತುಮಕೂರು: ನವರಾತ್ರಿ ಆಚರಣೆಯು ಅಂತಿಮ ಘಟ್ಟ ತಲುಪಿದ್ದು, ಜಂಬೂ ಸವಾರಿಗೆ ನಗರ ಸಜ್ಜಾಗಿ ನಿಂತಿದೆ. ದಸರಾದ ಕೊನೆಯ ದಿನವಾದ ಗುರುವಾರ ವಿಜಯದಶಮಿಯಂದು ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ.
ಕಳೆದ ವರ್ಷದಿಂದ ಜಿಲ್ಲಾ ಆಡಳಿತ ದಸರಾ ಆಚರಣೆ ಮಾಡುತ್ತಾ ಬಂದಿದ್ದು, ಈ ವರ್ಷದ ಆಚರಣೆ ಹಾಗೂ ಕಾರ್ಯಕ್ರಮಗಳನ್ನು ಮತ್ತಷ್ಟು ವಿಸ್ತರಿಸಿದೆ. ಹಿಂದಿನ ವರ್ಷಗಳಲ್ಲಿ ಬನ್ನಿ ಕಡಿದು, ದೇವರ ಮೆರವಣಿಗೆ ಮಾಡಲಾಗುತಿತ್ತು. ಆದರೆ ಈ ಬಾರಿ ಜಂಬೂ ಸವಾರಿ ಮೆರವಣಿಗೆಯನ್ನು ಅದ್ದೂರಿಯಾಗಿ ಏರ್ಪಡಿಸಲಾಗಿದೆ.
ಮೈಸೂರು ದಸರಾ ಮಾದರಿಯನ್ನು ಜಿಲ್ಲಾ ಆಡಳಿತ ಸಹ ಅನುಕರಣೆ ಮಾಡುತ್ತಿದ್ದು, ಮೆರವಣಿಗೆಗೆ ಆನೆಗಳನ್ನು ಕರೆ ತರಲಾಗಿದೆ. ಮೈಸೂರಿನ ಜಂಬೂ ಸವಾರಿ ಮಾದರಿಯಲ್ಲೇ ನಗರದಲ್ಲೂ ಮೆರವಣಿಗೆ ಆಯೋಜನೆ ಮಾಡಲಾಗಿದೆ. ಆನೆಗಳ ಜತೆಗೆ ನಗರ ಹಾಗೂ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಗ್ರಾಮ ದೇವತೆಗಳು ಭಾಗವಹಿಸಲಿವೆ.
ವೈಭವಯುತ ಅಂಬಾರಿ ಮೆರವಣಿಗೆಯಲ್ಲಿ ಕಳಸ ಹೊತ್ತ 150 ಮಹಿಳೆಯರು ಪಾಲ್ಗೊಳ್ಳಲಿದ್ದಾರೆ. ವಿವಿಧ ಕಲಾ ತಂಡಗಳು ಪ್ರದರ್ಶನ ನೀಡಲಿದ್ದು, ಕಲಾವಿದರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದು, ತಮ್ಮ ಪ್ರತಿಭೆ ಪ್ರದರ್ಶನ ಮಾಡಲಿದ್ದಾರೆ.
ಜೂನಿಯರ್ ಕಾಲೇಜು ಮೈದಾನದಲ್ಲಿ ವಿಜಯದಶಮಿ ಧಾರ್ಮಿಕ ಪೂಜೆ, ಶಮಿ ಪೂಜೆ ನೆರವೇರಲಿದೆ. ಬಿಜಿಎಸ್ ವೃತ್ತದಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಗೆ ಸಚಿವ ಜಿ.ಪರಮೇಶ್ವರ ಪುಷ್ಪಾರ್ಚನೆ ಮಾಡುವ ಮೂಲಕ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆಯು ಬಿಜಿಎಸ್ ವೃತ್ತದಿಂದ (ಟೌನ್ ಹಾಲ್) ಆರಂಭವಾಗಿ ಅಶೋಕ ರಸ್ತೆ, ಜಿಲ್ಲಾಧಿಕಾರಿ ಕಚೇರಿ ವೃತ್ತ, ಅಮಾನಿಕೆರೆ ರಸ್ತೆ, ಕೆಇಬಿ ರಸ್ತೆ, ಕೋತಿತೋಪು, ಎಸ್.ಎಸ್.ವೃತ್ತದ ಮೂಲಕ ಕಾಲೇಜು ಮೈದಾನಕ್ಕೆ ಬಂದು ತಲುಪಲಿದೆ.
ಗುರುವಾರ ಸಂಜೆ ಕಾಲೇಜು ಆವರಣದಲ್ಲಿ ದಶಾವತಾರ ರೂಪಕ, ಜಾನಪದ ನೃತ್ಯ ಗಮನ ಸೆಳೆಯಲಿದೆ. ಅರ್ಜನ್ ಜನ್ಯ ನೇತೃತ್ವದಲ್ಲಿ ಸಂಗೀತ ರಸಸಂಜೆ ಮೂಡಿಬರಲಿದೆ. ರಾತ್ರಿ 10.30 ಗಂಟೆಗೆ ಹಸಿರು ಸಿಡಿಮದ್ದುಗಳಿಂದ ಬಾಣ ಬಿರುಸು ಪ್ರದರ್ಶನದ ಮೂಲಕ ದಸರಾ ಆಚರಣೆಗೆ ತೆರೆ ಬೀಳಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC