ತುಮಕೂರು: ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಇಕ್ಬಾಲ್ ಮಜೀದ್ ಫೌಂಡೇಶನ್ ಹಾಗೂ ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ಸಿಐಟಿಯು ಜಿಲ್ಲಾ ಶಾಖೆ, ಜಶನ್ ಸ್ಪೀಚ್ ಅಂಡ್ ಹಿಯರಿಂಗ್ ಸೆಂಟರ್ ಸಹಯೋಗದಲ್ಲಿ ಈ ತಿಂಗಳ 9ರಂದು ನಗರದ ಮೆಳೇಕೋಟೆ ರಿಂಗ್ ರಸ್ತೆಯ ಸ್ಟಾರ್ ಕನ್ವೆನ್ಷನ್ ಹಾಲ್ ನಲ್ಲಿ ವಿಕಲಚೇತನರ ಸಮಾವೇಶ ಏರ್ಪಾಡಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಇಕ್ಬಾಲ್ ಮಜೀದ್ ಫೌಂಡೇಶನ್ ನ ಇಕ್ಬಾಲ್ ಅಹಮ್ಮದ್ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 49 ಸಾವಿರ ವಿಕಲಚೇತನರಿದ್ದಾರೆ ಇವರಲ್ಲಿ ಬಹಳಷ್ಟು ಮಂದಿ ಕ್ರೀಡಾಪಟುಗಳಿದ್ದಾರೆ. ಇಂತಹವರು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟಗಳಿಗೆ ಹೋಗಿಬರಲು ಸರ್ಕಾರ ವಿಶೇಷ ಬಸ್ ವ್ಯವಸ್ಥೆ ಮಾಡಬೇಕು. ವಿಕಲಚೇತನ ಕಲಾವಿದರು, ಕ್ರೀಡಾಪಟುಗಳಿಗೆ ಹೆಚ್ಚಿನ ಆದ್ಯತೆ, ಅವಕಾಶ ದೊರಕಿಸಿ ಅವರ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಿ ಅವರಲ್ಲಿ ಆತ್ಮ ವಿಶ್ವಾಸ ಬೆಳೆಸಬೇಕೆನ್ನುವ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.
9ರಂದು ಬೆಳಿಗ್ಗೆ 10.30ಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಕಲಚೇತನರ ಸಮಾವೇಶ ಉದ್ಘಾಟಿಸುವರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಸಿಐಟಿಯು ರಾಜ್ಯ ಉಪಾಧ್ಯಕ್ಷ ಸೈಯದ್ ಮುಜೀಬ್ ಅಹಮ್ಮದ್, ರಾಜ್ಯ ವಾಕ್ ಶ್ರವಣ ತಜ್ಞರ ಸಂಘದ ಅಧ್ಯಕ್ಷೆ ಚೈತ್ರ ಕೊಟ್ಟ ಶಂಕರ್, ಇಲಾಖೆ ಅಧಿಕಾರಿಗಳು, ಮತ್ತಿತರ ಗಣ್ಯರು ಭಾಗವಹಿಸುವರು. ಇದೇ ಮೊದಲ ಬಾರಿಗೆ ಸಮಾವೇಶದಲ್ಲಿ ವಿಕಲಚೇತನರ ವಧುವರ ವೇದಿಕೆ ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಎಸ್. ಬಾಬು ಮಾತನಾಡಿ, ಅಂದು ಬೆಳಿಗ್ಗೆ 8.30ಕ್ಕೆ ನಗರಪಾಲಿಕೆ ಆವರಣದ ಡಾ. ಅಂಬೇಡ್ಕರ್ ಪ್ರತಿಮೆ ಬಳಿಯಿಂದ ವಿಕಲಚೇತನರಿಂದ ಬೈಕ್ ಮತ್ತು ವೀಲ್ ಚೇರ್ ರ್ಯಾಲಿ ಏರ್ಪಡಿಸಲಾಗಿದೆ ಎಂದು ಹೇಳಿದರು.
ಜಶನ್ ಸ್ಪೀಚ್ ಅಂತ ಹಿಯರಿಂಗ್ ಸೆಂಟರ್, ಸುಖಾಂಕ್ ಚಾರಿಟಬಲ್ ಟ್ರಸ್ಟ್ ಪರಿಶ್ರಮ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ, ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರ ಶಾಸಕರ ಅನುದಾನದಲ್ಲಿ ಶ್ರವಣದೋಷವುಳ್ಳವರಿಗೆ ಡಿಜಿಟಲ್ ಪ್ರೋಗ್ರಾಮಬಲ್ ಶ್ರವಣ ಯಂತ್ರ ವಿತರಣೆ ಮಾಡಲಾಗುವುದು ಎಂದರು.
ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ವಿ. ಮುರುಗೇಶ್, ಮುಖಂಡರಾದ ಗುರುಪ್ರಸಾದ್, ಶಬ್ಬೀರ್ ಪಾಷಾ, ಪರಿಶ್ರಮ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿಯ ಮಹಮದ್ ಅಲಿ, ಜಾಫರ್ ಮೊದಲಾದವರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


