ತುಮಕೂರು: ದಸರಾ ಅಂಗವಾಗಿ ನಗರದ ಕ್ಯಾತ್ಸಂದ್ರದ ಚಂದ್ರಮೌಳೀಶ್ವರ ಬಡಾವಣೆಯ ಮಧುಸೂದನ್ ಅವರ ನಿವಾಸದಲ್ಲಿ ಸಾಂಪ್ರದಾಯಿಕ ಗೊಂಬೆಗಳ ಪ್ರದರ್ಶನ ಏರ್ಪಡಿಸಿದ್ದು, ಗಮನ ಸೆಳೆಯುತ್ತಿದೆ.
ಸುಮಾರು 1 ಸಾವಿರ ವಿವಿಧ ಮಾದರಿ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ನವರಾತ್ರಿ ಆರಂಭದ ದಿನದಿಂದ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅ. 2ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ನಿವೃತ್ತ ನೌಕರರಾದ ಮಧುಸೂದನ್ 14 ವರ್ಷಗಳಿಂದ ಪ್ರತಿ ದಸರಾ ಸಮಯದಲ್ಲಿ ಇದೇ ರೀತಿಯಾಗಿ ಗೊಂಬೆಗಳ ಪ್ರದರ್ಶನ ಏರ್ಪಡಿಸುತ್ತಿದ್ದಾರೆ.
ಆಂಧ್ರಪ್ರದೇಶ, ತಮಿಳುನಾಡು, ಉತ್ತರಪ್ರದೇಶ, ವಾರಾಣಸಿ ಸೇರಿದಂತೆ ವಿವಿಧ ಕಡೆಗಳಿಂದ ಗೊಂಬೆಗಳನ್ನು ಖರೀದಿಸಿ ತಂದು ಸಂಗ್ರಹಿಸಿದ್ದಾರೆ. ವಿಧಾನಸೌಧ, ಹೈಕೋರ್ಟ್, ಅಯೋಧ್ಯೆ ರಾಮ ಮಂದಿರದ ಮಾದರಿಗಳು ಆಕರ್ಷಣೀಯವಾಗಿವೆ. ಮೈಸೂರು ಮಹಾರಾಜರ ಚಿತ್ರಗಳು ಸಹ ಇವೆ.
ಮೈಸೂರು ದಸರಾ ಮೆರವಣಿಗೆ ದೃಶ್ಯವನ್ನು ಗೊಂಬೆಗಳಲ್ಲಿ ಕಟ್ಟಿಕೊಡುವ ಕೆಲಸ ತುಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ. ರಾಮಾಯಣ, ಮಹಾಭಾರತದ ಬಗ್ಗೆ ತಿಳಿಸುವ ಗೊಂಬೆಗಳು ನೋಡುಗರನ್ನು ಆಕರ್ಷಿಸುತ್ತಿವೆ.
ಈ ಹಿಂದೆ ನಮ್ಮ ತಾಯಿ ಗೊಂಬೆ ಸಂಗ್ರಹ ಮಾಡುತ್ತಿದ್ದರು. ಅದು ನನಗೂ ರೂಢಿಯಾಯಿತು. ಬೇರೆ ಕಡೆಗಳಲ್ಲಿ ಈ ರೀತಿ ಪ್ರದರ್ಶನಕ್ಕೆ ಇಡುತ್ತಿದ್ದರು. ನಮ್ಮಲ್ಲಿ ಯಾಕೆ ಮಾಡಬಾರದು ಎಂದು ಆಲೋಚಿಸಿ ಮನೆಯಲ್ಲಿಯೇ ಸಾಂಪ್ರದಾಯಿಕ ಗೊಂಬೆಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಪ್ರತಿ ವರ್ಷವೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ’ ಎಂದು ಮಧುಸೂದನ್ ಪ್ರತಿಕ್ರಿಯಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC