ಇತ್ತೀಚಿಗೆ ತುಮಕೂರು ಮತ್ತು ಹಾಸನ ಜಿಲ್ಲೆಗಳ ಪ್ರವಾಸದಲ್ಲಿದ್ದ ಭಾರತ ಸರ್ಕಾರದ ರೈಲ್ವೇ ಮತ್ತು ಜಲಶಕ್ತಿ ರಾಜ್ಯಖಾತೆ ಸಚಿವರಾದ ಸೋಮಣ್ಣನವರಿಗೆ ತಿಪಟೂರು ಹಾಗೂ ಅರಸೀಕೆರೆಯ ತೆಂಗು ಬೆಳೆಯುವ ರೈತರು ತೆಂಗು ಬೆಳೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೀಟ ಮತ್ತು ರೋಗಗಳ ತೀವ್ರತೆಯ ಬಗ್ಗೆ ಕೇಂದ್ರ ಸಚಿವ ವಿ. ಸೋಮಣ್ಣರವರ ಬಳಿ ವಿವರಿಸಿದ್ದರು. ಈ ಪರಿಸ್ಥಿತಿ ಮುಂದುವರೆದರೆ ಶೀಘ್ರದಲ್ಲಿಯೆ ಎಲ್ಲಾ ತೆಂಗಿನ ತೋಟಗಳು ನಾಶವಾಗುವ ಅಪಾಯವಿದೆ ಎಂಬ ಆತಂಕವನ್ನು ರೈತರು ವ್ಯಕ್ತಪಡಿಸಿದರು. ಕೃಷಿ ಕ್ಷೇತ್ರದಲ್ಲಿ ತೆಂಗಿನಕಾಯಿ ಬೆಳೆಗೂ ರಕ್ಷಣೆಯ ಅಗತ್ಯವಿದೆ ಹಾಗೂ ಜಿಲ್ಲೆಯ ತೆಂಗಿನ ಕೃಷಿಯ ಉಳಿವಿಗಾಗಿ ತ್ವರಿತ ಕ್ರಮಕೈಗೊಳ್ಳಬೇಕಾಗಿ ಸಚಿವರಲ್ಲಿ ಮನವಿ ಮಾಡಿಕೊಂಡರು.
ತೆಂಗು ಬೆಳೆಯ ರೋಗದ ಪರಿಸ್ಥಿಯ ಗಂಬೀರತೆಯನ್ನು ಗಮನಿಸಿದ ಸಚಿವರು ತಕ್ಷಣ ಕ್ರಮಕೈಗೊಳ್ಳುವುದಾಗಿ ಮತ್ತು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರ ಗಮನಕ್ಕೆ ತಂದು ಈ ಬಗ್ಗೆ ಕ್ರಮ ಜರುಗಿಸುವ ಭರವಸೆ ನೀಡಿದ್ದರು.
ಈ ವಿಷಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಜಾಗೃತಗೊಳಿಸಲು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವರಿಗೆ ಅಧಿಕೃತ ಪತ್ರವನ್ನು ನೀಡಿ ತೆಂಗು ಬೆಳೆ ಮತ್ತು ತೆಂಗು ಬೆಳೆಯ ರೋಗಗಳ ಬಗ್ಗೆ ವಿಸ್ತಾರವಾಗಿ ವಿವರಿಸಿ ಶೀಘ್ರ ಕ್ರಮಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದಾರೆ.
ತುಮಕೂರು ಜಿಲ್ಲೆ ತನ್ನ ವಿಸ್ತಾರವಾದ ತೆಂಗಿನಕಾಯಿ ಕೃಷಿ ಪ್ರದೇಶದಿಂದಾಗಿ ಕಲ್ಪತರು ನಾಡು ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ. ಈ ಜಿಲ್ಲೆಯು ಕರ್ನಾಟಕ ಮತ್ತು ಭಾರತದ ಒಟ್ಟಾರೆ ತೆಂಗಿನಕಾಯಿ ಉತ್ಪಾದನೆಗೆ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಈ ಪ್ರದೇಶವು ಸಾವಿರಾರು ಕೃಷಿ ಕುಟುಂಬಗಳನ್ನು ಬೆಂಬಲಿಸುವುದಲ್ಲದೆ, ಕೊಬ್ಬರಿ ಸಂಸ್ಕರಣೆ, ತೆಂಗಿನ ಎಣ್ಣೆ ಹೊರತೆಗೆಯುವಿಕೆ ಮತ್ತು ತೆಂಗಿನ ನಾರಿನ ಉತ್ಪಾದನೆಯಂತಹ ಪೂರಕ ಕೈಗಾರಿಕೆಗಳನ್ನು ಸಹ ಉಳಿಸಿಕೊಳ್ಳುತ್ತಿದೆ ಎಂಬ ವಿಷಯವನ್ನು ಕೇಂದ್ರ ಸಚಿವ ವಿ.ಸೋಮಣ್ಣನವರು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ತೆಂಗಿನಲ್ಲಿ ಬರುವ ಬಿಳಿ ನೊಣ, ಕಾಂಡ ರಸ ಸೋರುವುದು ಹಾಗೂ ಗ್ಯಾನೋಡರ್ಮ ನಿಯಂತ್ರಣಕ್ಕೆ ಈ ಕೆಳಕಂಡಂತೆ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ.
- ತುಮಕೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಐ.ಸಿ.ಎ.ಆರ್. ಸಂಸ್ಥೆ, ತೆಂಗು ಅಭಿವೃಧ್ದಿ ಮಂಡಳಿ ಹಾಗೂ ಕೆ.ವಿ.ಕೆ ವಿಜ್ಞಾನಿಗಳು ಒಳಗೊಂಡ ತಂಡಗಳನ್ನು ರಚಿಸಿ ವಿವರವಾದ ಕ್ಷೇತ್ರ ಸಮೀಕ್ಷೆಯನ್ನು ನಡೆಸಿ ಕೀಟ ಹಾಗೂ ರೋಗದ ತೀವ್ರತೆಯನ್ನು ನಿರ್ಣಯಿಸುವಂತದ್ದು.
- ಪರಿಣಾಮಕಾರಿ ಕೀಟ ಮತ್ತು ರೋಗ ನಿರ್ವಹಣಾ ಪದ್ದತಿಗಳ ಕುರಿತು ರೈತರಿಗೆ ಮಾರ್ಗದರ್ಶನ ಹಾಗೂ ತರಬೇತಿ ನೀಡಲು ತಾಂತ್ರಿಕ ತಜ್ಞರು ಹಾಗೂ ಕೆ.ವಿ.ಕೆ ವಿಜ್ಞಾನಿಗಳ ನಿಯೋಜನೆ.
- ಐ.ಸಿ.ಎ.ಆರ್ ಸಂಸ್ಥೆ ಹಾಗೂ ತೆಂಗು ಅಭಿವೃಧ್ಧಿ ಮಂಡಳಿಯ ಆರ್ಥಿಕ ನೆರವಿನೊಂದಿಗೆ ಕೆ.ವಿ.ಕೆ, ಗಳ ಮೂಲಕ ಪೀಡಿತ ಪ್ರದೇಶದಲ್ಲಿ ತರಬೇತಿ ಕಾರ್ಯಕ್ರಮಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ಪ್ರಾರಂಭಿಸುವುದು.
- ತೆಂಗಿನಲ್ಲಿ ಬಿಳಿ ನೊಣ ನಿಯಂತ್ರಣೆಕ್ಕೆ ಐಸಿರಿಯಾ, ಹಳದಿ ಅಂಟು ಬಲೆ, ಬೇವಿನ ಎಣ್ಣೆ, ಕಾಂಡ ಸೋರುವ ರೋಗಕ್ಕೆ ಹಾಗೂ ಅಣಬೆರೋಗ ನಿಯಂತ್ರಣ ಬೇರು ಉಪಚಾರಕ್ಕಾಗಿ ಹೆಕ್ಸಾಕಾನೋಜಲ್, ಟ್ರೆöÊಕೋಡರ್ಮ, ಸುಡೋಮೊನಾಸ್ ಹಾಗೂ ಕೆಂಪು ತಲೆ ಹುಳುವಿನ ನಿಯಂತ್ರಣಕ್ಕಾಗಿ ಪರಾವಲಂಬಿ ಗೋನಿಯೋಜಸ್, ಬೇವಿನ ಕೇಕ್ ಇತ್ಯಾದಿ ಅವಶ್ಯಕ ಪರಿಕರಗಳ ಸುಗಮ ಪೂರೈಕೆ ಮಾಡುವುದು.
ಪತ್ರಕ್ಕೆ ತಕ್ಷಣ ಸ್ಪಂದಿಸಿದ ಭಾರತ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು ಐ.ಸಿ.ಎ.ಆರ್. ಸಂಸ್ಥೆಗಳು, ತೆಂಗು ಅಭಿವೃದ್ಧಿ ಮಂಡಳಿ ತ್ವರಿತ ಕ್ರಮಕ್ಕೆ ಸೂಚನೆ ನೀಡಿದೆ.
ರೋಗ ನಿರ್ವಹಣ ಕ್ರಮಗಳ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸುವ, ತೋಟಗಳಲ್ಲಿ ಪ್ರಾತ್ಯಕ್ಷಿಕೆಗಳು, ಜಾಗೃತಿ ಅಭಿಯಾನಗಳು ರೈತರಿಗೆ ತರಬೇತಿ ಮತ್ತು ತಾಂತ್ರಿಕ ಮಾರ್ಗದರ್ಶನವನ್ನು ಒದಗಿಸುವ ಯೋಜನೆ ರೂಪಿಸುವ ಕ್ರಮ ಜಾರಿಯಾಗಲಿದೆಯೆಂಬ ವಿಷಯವನ್ನು ಕೇಂದ್ರ ಸಚಿವ ಶ್ರೀ ಸೋಮಣ್ಣ ತಿಳಿಸಿದ್ದಾರೆ.
ರೈತರ ಹಿತಕಾಯುವಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರ್ಕಾರ ಸದಾ ಬದ್ದ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW