ಮಧುಗಿರಿ: ಸಚಿವ ಕೆ.ಎನ್.ರಾಜಣ್ಣ ಅವರ ತವರು ಕ್ಷೇತ್ರ ಮಧುಗಿರಿ ತಾಲೂಕಿನಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದ್ದು, ದೇವಸ್ಥಾನಕ್ಕೆ ಬಂದ ದಲಿತ ಯುವಕನನ್ನು ನಿಂದಿಸಿ ಹೊರಗೆ ಕಳುಹಿಸಿದ ಅಮಾನವೀಯ ಘಟನೆ ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಕವಣದಾಲದಲ್ಲಿ ನಡೆದಿದೆ.
ಪೂಜೆ ಮಾಡಿಸಲು ನಿನ್ನೆ ಗ್ರಾಮದ ರಾಮಾಂಜನೇಯ ದೇವಾಲಯಕ್ಕೆ ತೆರಳಿದ್ದ ಸ್ವಾಮಿನಾಥ್ ಎಂಬವರು ತೆರಳಿದ್ದರು. ಈ ವೇಳೆ ಸ್ವಾಮಿನಾಥ್ ನನ್ನು ದಲಿತ ಎನ್ನುವ ಕಾರಣಕ್ಕೆ ದೇವಾಲಯದಿಂದ ಹೊರಗೆ ಕಳುಹಿಸಿ ಅವಮಾನಿಸಲಾಗಿದೆ.
ಹೊರಗೆ ಕಳುಹಿಸಿದ ಬಳಿಕ “ದಲಿತರು ದೇವಾಲಯಕ್ಕೆ ಬರಲ್ಲಾ, ನೀನು ಬರಬಾರದು” ಎಂದು ಜಾತಿ ಪೀಡಕರು ರಾಜಾರೋಷವಾಗಿ ತಾಕೀತು ಮಾಡಿದರು. ಈ ಹಿನ್ನೆಲೆಯಲ್ಲಿ ನೊಂದ ಯುವಕ ಸ್ವಾಮಿನಾಥನ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಘಟನೆ ಹಿನ್ನೆಲೆ ದೇವಸ್ಥಾನಕ್ಕೆ ಆಗಮಿಸಿದ ಪೊಲೀಸರು ಜಾತಿ ಪೀಡಕರಿಗೆ ಬುದ್ಧಿ ಹೇಳಿ, ಕೈತೊಳೆದುಕೊಂಡಿದ್ದಾರೆ. ಇನ್ನೊಂದೆಡೆ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಕೇವಲ ಬಿಲ್ ಬರೆಯುವುದಕ್ಕೆ ಸೀಮಿತವಾಗಿದ್ದು, ಪರಿಶಿಷ್ಟರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವ ಆರೋಪಗಳು ಕೂಡ ಕೇಳಿ ಬಂದಿದೆ. ಬಡವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW