ಮಧುಗಿರಿ : ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸತ್ತಿರುವ ಶಾಸಕ
ಕೆ.ಎನ್.ರಾಜಣ್ಣ ಕೆಡಿಪಿ ಸಭೆಯಲ್ಲಿ ಡಿಸಿ ಶುಭ ಕಲ್ಯಾಣ್ ಎದುರೇ ಹರಿ ಹಾಯ್ದಿದ್ದು ನಮ್ಮಲಿರುವ ಅಧಿಕಾರಿಗಳು ಯುಸ್ ಲೆಸ್ ಅಧಿಕಾರಿಗಳು. ನಿಮ್ಮ ನಡವಳಿಕೆ ಹೀಗೆ ಮುಂದುವರೆದರೇ ಎಲ್ಲರನ್ನು ಮಾರ್ಚ್ ನಲ್ಲಿ ವರ್ಗಾವಣೆ ಮಾಡಿಸುತ್ತೇನೆ ಎಂದು ಗುಡುಗಿದರು.
ಅಧಿಕಾರಿಗಳ ಉದಾಸೀನ ವರ್ತನೆ:
ಪಟ್ಟಣದ ತಾ.ಪಂ. ಕಛೇರಿಯಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಅಧಿಕಾರಿಗಳ ಉದಾಸೀನ ವರ್ತನೆಗೆ ಆಕ್ರೋಶಗೊಂಡು, ಒಬ್ಬ ರೈತ ಲಂಚವಿಲ್ಲ ಎಂದು ಮೂಲಂಗಿ ತಂದು ಪ್ರತಿಭಟನೆ ಮಾಡುತ್ತಾನೆ ಎಂದರೆ ಯಾರಿಗೆ ಅಪಮಾನ. ಇಂತಹ ವರ್ತನೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಕೇವಲ ಪತ್ರ ವ್ಯವಹಾರದಲ್ಲೇ ವರ್ಷಾನುಗಟ್ಟಲೆ ಸಮಯವನ್ನು ಹಾಳು ಮಾಡುತ್ತಾ ಹಣವಿದ್ದರೂ ಕೆಲಸ ಮಾಡಲು ಉದಾಸೀನ ಮಾಡುತ್ತಿದ್ದೀರಾ, ಅಂತಹವರನ್ನು ಕ್ಷೇತ್ರದಿಂದ ಆಚೆ ಕಳಿಸುವುದಾಗಿ ಎಚ್ಚರಿಸಿ, ಲೋಕೋಪಯೋಗಿ ಇಲಾಖೆಯ ರಸ್ತೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿರುವ ಗೂಡಂಗಡಿಗಳನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು. ಅವರಗಲ್ಲು ರಸ್ತೆಯ ಅಭಿವೃದ್ಧಿ ಕಾರ್ಯಕ್ಕೆ ಇನ್ನು ಮೀನಾ ಮೇಷ ಎಣಿಸುತ್ತಿದ್ದು, ಪೊಲೀಸರ ಸಹಕಾರ ಪಡೆದು ಬೇಗ ಕೆಲಸ ಮುಗಿಸಿ ಎಂದರು. ಇದಕ್ಕೆ ದನಿಗೂಡಿಸಿದೆ ಡಿಸಿರವರು ತುಮಕೂರು ಗ್ರಾಮಾಂತರದಲ್ಲಿ ಇದೇ ರೀತಿಯ ಸಮಸ್ಯೆ ಇದ್ದು ಅಲ್ಲಿನ ತಹಶೀಲ್ದಾರ್ ಎಲ್ಲವನ್ನು ಬಗೆಹರಿಸಿದ್ದು ಅವರ ಬಳಿ ಸಲಹೆ ಪಡೆದು ಮುಂದುವರೆಯಲು ಸೂಚಿಸಿದರು.
450 ಕೋಟಿ ಬಳಕೆಯಾಗದೆ ಉಳಿದಿದೆ:
ನಂತರ ಡಿಸಿ ಶುಭ ಕಲ್ಯಾಣ್ ಮಾತನಾಡಿ, ಜಿಲ್ಲೆಯಲ್ಲಿ 450 ಕೋಟಿ ಬಳಕೆಯಾಗದೆ ಉಳಿದಿದೆ. ಮಧುಗಿರಿಯಲ್ಲೂ 13 ಕೋಟಿ ವೆಚ್ಚದ ಕೆಲಸ ಇನ್ನೂ ಆರಂಭಿಸಿಲ್ಲ, ಅಧಿಕಾರಿಗಳು 1 ತಿಂಗಳಲ್ಲಿ ಎಲ್ಲ ಕೆಲಸಕ್ಕೆ ಗುದ್ದಲಿ ಪೂಜೆ ಮಾಡಿಸಬೇಕು. ಇದು ಸರ್ಕಾರದ ಕಾರ್ಯದರ್ಶಿಗಳ ಆದೇಶವಾಗಿದ್ದು, ಗಂಭೀರವಾಗಿ ಪರಿಗಣಿಸುವಂತೆ ಖಡಕ್ ಸೂಚನೆ ನೀಡಿದರು.
ಜೆಜೆಎಂ ಇಲಾಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, 4 ತಿಂಗಳು ಸಮಯವಿದ್ದರೂ ಶೇ.30 ರಷ್ಟು ಮಾತ್ರ ಪ್ರಗತಿಯಾಗಿದೆ. 153 ಕಾಮಗಾರಿಗಳಲ್ಲಿ 10 ಮಾತ್ರ ಮುಗಿದಿದೆ. ಇಂಥ ಬೇಜವಾಬ್ದಾರಿ ಕೆಲಸ ಮಾಡಲು ನೀವೇ ಬೇಕಾ. ಇನ್ನು 1 ತಿಂಗಳ ಒಳಗಾಗಿ ಉಳಿದ ಕೆಲಸಗಳನ್ನು ಮುಗಿಸಿ ನನಗೆ ವರದಿ ನೀಡಬೇಕು ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ, ತಾಲೂಕಿಗೆ 6.21 ಕೋಟಿ ಹಣ ಬಿಡುಗಡೆಯಾಗಿದೆ. 3.85 ಕೋಟಿ ಖರ್ಚಾಗಿದ್ದು, ಕೆಲಸ ಮಾತ್ರ ಪ್ರಗತಿಯಲ್ಲಿಲ್ಲ. ಕೆಡಿಪಿ ಸಭೆಯ ಮಹತ್ವ ನಿಮಗೆ ತಿಳಿದಿಲ್ಲವೇ , ಪ್ರಗತಿ ಬಗ್ಗೆ ನೆನಪಿರಲಿ. ಈ ಬಗ್ಗೆ ಇಒ ಹಾಗೂ ಎಒರವರ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡ ಡಿಸಿ ಎಲ್ಲಾ ಇಲಾಖೆಯ ಅಧಿಕಾರಿಗಳು ಕೆಲಸದ ಗುಣ ಮಟ್ಟ ಪರಿಶೀಲನೆ ಮಾಡಬೇಕು. ಈ ವಿಚಾರವಾಗಿ ನನ್ನ ಕಡೆಯಿಂದ ನಿರ್ಮಿತಿ ಕೇಂದ್ರಕ್ಕೆ ನೋಟಿಸ್ ನೀಡುವಂತೆ ಸೂಚಿಸಿದರು.
ವಿದ್ಯುತ್ ಕಟ್ ಸರಿಯಲ್ಲ:
ಬೆಸ್ಕಾಂ ಇಲಾಖೆ ಸಭೆ ನಡೆಯುವಾಗ ವಿದ್ಯುತ್ ಕಟ್ ಮಾಡುವುದು ಸರಿಯಲ್ಲ, ನಿಮ್ಮ ಕೆಲಸವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಪದೇಪದೇ ವಿದ್ಯುತ್ ಕಡಿತಗೊಳಿಸುವುದು ಇನ್ನು ಮುಂದೆ ನಡೆಯಬಾರದು ಎಂದು ಶಾಸಕರು ಎಚ್ಚರಿಸಿದರು. ಕೆಪಿಟಿಸಿಎಲ್ ನಿಂದ ರಾಜ್ಯದಲ್ಲಿ 21 ಸಬ್ ಸ್ಟೇಷನ್ ಮಂಜೂರಾಗಿದ್ದು ಮಧುಗಿರಿಗೆ 3 ಸಿಕ್ಕಿದೆ. ಈ ಕೆಲಸವನ್ನು ಬೇಗ ಮುಗಿಸಲು ಸೂಚಿಸಿದರು.
ಲೈಸೆನ್ಸ್ ರದ್ದು ಮಾಡಿ:
ಆಹಾರ ಇಲಾಖೆಯಲ್ಲಿ ಅನ್ನ ಸುವಿಧ ಯೋಜನೆಯ ಕಳಪೆ ನಿರ್ವಹಣೆ ಬಗ್ಗೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡು 2,326 ಹಿರಿಯ ನಾಗರಿಕರಿದ್ದು, 326 ಮಂದಿಗೆ ಮಾತ್ರ ಈ ಯೋಜನೆ ತಲುಪುತ್ತಿದೆ. ಉಳಿದವರಿಗೆ ಯಾಕೆ ನೀಡಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಆಹಾರ ಶೀರಸ್ತೇದಾರ್ ಸುಜಾತ, ಈ ಕಾರ್ಯಕ್ರಮಕ್ಕೆ ನ್ಯಾಯಬೆಲೆ ಅಂಗಡಿಯವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದರು. ಹಾಗಾದರೆ ಅಂತಹ ಸೊಸೈಟಿಗಳ ಲೈಸೆನ್ಸ್ ರದ್ದು ಮಾಡಿ ಎಂದ ಜಿಲ್ಲಾಧಿಕಾರಿ, ಮಧ್ಯ ಪ್ರವೇಶಿಸಿದ ಶಾಸಕ ಕೆ.ಎನ್.ರಾಜಣ್ಣ ಅಂತಹ ರದ್ದಾದ ಅಂಗಡಿಗಳ ಬದಲಿಗೆ ಸ್ಥಳೀಯ ವಿ ಎಸ್ ಎಸ್ ಎನ್ ಸೊಸೈಟಿಗಳಿಗೆ ಪಡಿತರ ವಿತರಿಸುವ ಹಕ್ಕನ್ನು ನೀಡುವಂತೆ ಸೂಚಿಸಿದರು.
- ಬಾರ್ ಮೇಲೆ ಕೇಸ್ ಹಾಕಿ: ಅಬಕಾರಿ ಇಲಾಖೆಯಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಕ್ರಮ ವಹಿಸಿದ್ದು 153 ಕೇಸ್ ಗಳನ್ನು ದಾಖಲು ಮಾಡಿದ್ದೇವೆ ಎಂದು ಅಧಿಕಾರಿ ಶ್ರೀಲತಾ ತಿಳಿಸಿದರು. ತಕ್ಷಣ ಪ್ರತಿಕ್ರಿಯಿಸಿದ ಶಾಸಕರು ಹಳ್ಳಿಗಳಲ್ಲಿ ಬದುಕಲು ಮಧ್ಯ ಮಾರಾಟ ಮಾಡುವವರನ್ನು ಹಿಡಿಯುತ್ತೀರಾ. ಆದರೆ ಅವರಿಗೆ ಮದ್ಯ ಸರಬರಾಜು ಮಾಡುವ ಬಾರ್ ಗಳ ಮೇಲೆ ಮಾತ್ರ ಕ್ರಮವಿಲ್ಲ. ಮೊದಲು ಬಾರ್ ಗಳ ಮೇಲೆ ಪ್ರಕರಣ ದಾಖಲಿಸಿ ಎಂದು ಸೂಚಿಸಿದರು.
- ಸಾರಿಗೆ ಸೌಲಭ್ಯ: ಪ್ರತಿ ಹಳ್ಳಿಗೂ ಸಾರಿಗೆ ಸೌಲಭ್ಯ ಸಿಗಬೇಕು ಈ ನಿಟ್ಟನಲ್ಲಿ ಅಧಿಕಾರಿಗಳು ಕ್ರಮವಹಿಸಿ ಎಂದರು.
- ರೇಷ್ಮೆ ಬೆಳೆ: ತಾಲ್ಲೂಕಿನಲ್ಲಿ ಲಾಭದಾಯಕ ರೇಷ್ಮೆ ಬೆಳೆಯಲು ರೈತರು ಉತ್ಸುಕರಾಗಿದ್ದು 1500 ಹೆಕ್ಟರ್ ನಲ್ಲಿ ಬೆಳೆಯುತ್ತಿರುವ ಬಗ್ಗೆ ಅಧಿಕಾರಿ ಮಾಹಿತಿ ನೀಡಿದಾಗ ಮುಂದಿನ ಸಭೆಯಲ್ಲಿ 2 ಸಾವಿರ ಹೆಕ್ಟೆರ್ ಗೆ ಹೆಚ್ಚಿಸಲು ಕ್ರಮವಹಿಸಲು ಡಿಸಿ ಸಲಹೆ ನೀಡಿದರು.
- ಕಾಮಗಾರಿ ನನೆಗುದಿಗೆ: ಜಿ.ಪಂ ನಲ್ಲಿ 5054 — 3054 ಅನುದಾನದ ಕಾಮಗಾರಿ ನನೆಗುದಿಗೆಬಿದ್ದಿದ್ದು ಕೆಲಸ ಬಾಕಿ ಇಟ್ಟುಕೊಂಡಿದ್ದೀರಾ. ಈ ಬಗ್ಗೆ ಒಂದು ತಿಂಗಳಲ್ಲಿ ಕೆಲಸ ಪೂರ್ಣವಾಗಬೇಕು. ಪ್ರಗತಿ ಪಟ್ಟಿಯಲ್ಲಿ 10 ಕೋಟಿಯಲ್ಲಿ 1. ರೂ ಕೂಡ ಖರ್ಚು ಮಾಡಿಲ್ಲ ಎಂದರೆ ಹೇಗೆ ಎಂದ ಶಾಸಕರು ಈ ಅನುದಾನ ಬಿಡುಗಡೆ ಮಾಡಿಸಲು ಎಲ್ಲಾ ಕ್ರಮ ಕೈಗೊಳ್ಳುತ್ತೇವೆ. ಮೊದಲು ಕೆಲಸ ಮುಗಿಸಿ ಬಿಲ್ ಕಳಿಸಿ ಎಂದು ಡಿಸಿ ಸೂಚಿಸಿದರು ಹಾಗೆಯೇ ಎಲ್ಲಾ ಕೆಲಸದ ಬಿಲ್ ಗಳನ್ನು ಮಾರ್ಚ್ 5 ಅಥವಾ 10 ಒಳಗೆ ಖಜಾನೆಗೆ ತಲುಪಿಸಿ ಹಣ ಪಡೆಯುವಂತೆ ಸೂಚಿಸಿದರು.
ಹಾಸ್ಟೆಲ್ ಗಳನ್ನು ಪರಿಶೀಲಿಸಿ:
ಡಿಸಿ ಮಾತನಾಡಿ, ತಾಲೂಕಿನ ಎಲ್ಲಾ ಹಾಸ್ಟೆಲ್ ಗಳಲ್ಲಿ ಕುಡಿಯುವ ನೀರಿನ ಪರೀಕ್ಷೆಯನ್ನು ಪ್ರತಿ ತಿಂಗಳು ಮಾಡಬೇಕು. ಎಲ್ಲೂ ಸ್ವಚ್ಛತೆ, ಕುಡಿಯುವ ನೀರು, ಆಹಾರದ ವಿಚಾರದಲ್ಲಿ ಸಮಸ್ಯೆಗಳು ಕಾಣಬಾರದು. ಇದಕ್ಕಾಗಿ ಎಸಿ ಮತ್ತು ಇಓ ರವರು ಎಲ್ಲಾ ಹಾಸ್ಟೆಲ್ , ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದರು.
ಪುರಸಭೆಯ ಅಮೃತ್–2 ಯೋಜನೆಯ ಕುಂಠಿತಕ್ಕೆ ಬೇಸರ ವ್ಯಕ್ತಪಡಿಸಿದ ಡಿಸಿ, ಹಾಗೂ ಶಾಸಕರು ಈ ಯೋಜನೆಯ ಸಂಪೂರ್ಣ ದಾಖಲಾತಿಯನ್ನು ವರದಿ ರೂಪದಲ್ಲಿ ನೀಡುವಂತೆ ಸೂಚಿಸಿದರು. ಶಿಕ್ಷಣ ಇಲಾಖೆಯಲ್ಲಿ ಎಲ್ಲಾ ಮಕ್ಕಳಿಗೆ ಆಧಾರ್ ತಿದ್ದುಪಡಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡಲು ಕ್ಯಾಂಪ್ ಮಾಡಿ ಕ್ರಮವಹಿಸಬೇಕು. ವಿದ್ಯಾರ್ಥಿ ವೇತನದ ಬಗ್ಗೆ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿಕೊಂಡು ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಬೇಕು. ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಾಗುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮ ವಹಿಸಬೇಕು. ಈ ವೇಳೆ ಪ್ರತಿಕ್ರಿಯಿಸಿದ ಹೋರಾಟಗಾರ ದುಡ್ಡೇರಿ ಕಣಿಮಯ್ಯ ಗ್ರಾಮೀಣ ಭಾಗಕ್ಕೆ ಅಧಿಕಾರಿಗಳು ಬರುತ್ತಿಲ್ಲ. ಗ್ರಾಮೀಣ ಭಾಗದ ಪೋಷಕರು ಅನಕ್ಷರಸ್ಥರಿದ್ದು ಖುದ್ದು ಭೇಟಿಗೆ ತಾವು ಸೂಚಿಸಲು ಮನವಿ ಮಾಡಿದರು. ನಂತರ ಡಿಸಿ ಶುಭಾ ಕಲ್ಯಾಣ್ ಮಾತನಾಡಿ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಬರುವ ಎಲ್ಲ ಗಾರ್ಮೆಂಟ್ ಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಇ.ಎಸ್.ಐ ಮತ್ತು ಪಿ.ಎಫ್ ನೀಡುತ್ತಿರುವ ಬಗ್ಗೆ ಪರಿಶೀಲನೆ ಮಾಡಿದ್ದೀರಾ ಎಂದಾಗ ತಾಲೂಕು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಾಲೂಕಿನಲ್ಲಿ 4 ಗಾರ್ಮೆಂಟ್ಸ್ ಗಳಿದ್ದು 1 ಕೈಗಾರಿಕೆಯಲ್ಲಿ ಸೌಲಭ್ಯ ನೀಡುತ್ತಿದ್ದಾರೆ. ಉಳಿದ ಮೂರು ಕಡೆ ನೀಡುತ್ತಿಲ್ಲ ಎಂದಾಗ ಆಕ್ರೋಶಗೊಂಡ ಡಿಸಿ ರವರು ನೀವು ಏನು ಮಾಡುತ್ತಿದ್ದೀರಿ, ಇಲಾಖೆಯ ಕೆಲಸ ಕಾರ್ಮಿಕರ ಕಲ್ಯಾಣಕ್ಕಾಗಿ ನಿಮ್ಮನ್ನು ಸರ್ಕಾರ ನಿಯೋಜಿಸಿದೆ. ಶೀಘ್ರವಾಗಿ ಅಂತಹ ಕೈಗಾರಿಕೆಗಳಲ್ಲಿ ಇರುವ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ತಾಕೀತು ಮಾಡಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


