ನವದೆಹಲಿ: ರಾಜ್ಯಸಭೆಯ ನಿರ್ಗಮಿತ ಸದಸ್ಯರಿಗೆ ಬೀಳ್ಕೊಡುಗೆ ನೀಡುವ ಸಂದರ್ಭದಲ್ಲಿ ಬುಧವಾರದಂದು ಸ್ವಾರಸ್ಯಕರ ಘಟನೆಯೊಂದು ನಡೆದಿದೆ. ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ರಾಜಕೀಯ ಪಲ್ಲಟಗಳನ್ನು ವ್ಯಂಗ್ಯವಾಗಿ ಟೀಕಿಸುವ ಮೂಲಕ ಎಲ್ಲರ ಗಮನ ಸೆಳೆದರು.
“ನಾನು ದೇವೇಗೌಡರನ್ನು ಕಳೆದ 54 ವರ್ಷಗಳಿಂದ ಬಲ್ಲೆ. ಅವರ ಜೊತೆಗೂಡಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ ಆಮೇಲೆ ಏನಾಯಿತು ಎಂಬುದು ನನಗೆ ತಿಳಿದಿಲ್ಲ. ಅವರು ನಮ್ಮನ್ನು ಪ್ರೇಮಿಸಿದರು (Mohabbat), ಆದರೆ ಮದುವೆಯಾಗಿದ್ದು ಮಾತ್ರ ಪ್ರಧಾನಿ ಮೋದಿ ಅವರನ್ನು,” ಎಂದು ಖರ್ಗೆ ಲಘು ಧಾಟಿಯಲ್ಲಿ ಕುಟುಕಿದರು. ಖರ್ಗೆ ಅವರ ಈ ಮಾತಿಗೆ ರಾಜ್ಯಸಭೆಯಲ್ಲಿ ನಗುವಿನ ಅಲೆ ಎದ್ದಿತು. ಈ ವೇಳೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ನಗುಮುಖದಿಂದಲೇ ಪ್ರತಿಕ್ರಿಯಿಸಿದರು.
ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ದೇಶಸೇವೆ ಮಾಡುವ ಉತ್ಸಾಹ ಎಂದಿಗೂ ಕುಂದುವುದಿಲ್ಲ. ಸಾರ್ವಜನಿಕ ಬದುಕಿನಲ್ಲಿರುವವರಿಗೆ ನಿವೃತ್ತಿ ಎಂಬುದೇ ಇರುವುದಿಲ್ಲ ಎಂದು ಖರ್ಗೆ ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, “ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ ಮತ್ತು ಶರದ್ ಪವಾರ್ ಅವರಂತಹ ನಾಯಕರು ತಮ್ಮ ಬದುಕಿನ ಬಹುಭಾಗವನ್ನು ಸಂಸದೀಯ ವ್ಯವಹಾರಗಳಲ್ಲಿ ಕಳೆದಿದ್ದಾರೆ. ಹೊಸದಾಗಿ ಆಯ್ಕೆಯಾದ ಸಂಸದರು ಇಂತಹ ಹಿರಿಯ ನಾಯಕರಿಂದ ಸಾಕಷ್ಟು ಕಲಿಯಬೇಕಿದೆ,” ಎಂದು ಸಲಹೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


