ಬಹಳ ಹಿಂದೆ ಸೂರ್ಯಕೇತು ಎಂಬ ವ್ಯಕ್ತಿಯಿದ್ದ. ಇವನು ತುಂಬಾ ಬಡವ ಮತ್ತು ಮಹಾನ್ ದೈವಭಕ್ತ. ದೇವರ ಧ್ಯಾನಕ್ಕೆ ಕುಳಿತು ಬಹಳ ಹೊತ್ತು ಧ್ಯಾನ ಮಾಡಿ ನಂತರ ಸಿಕ್ಕ ಕೆಲಸ ಮಾಡಿಕೊಂಡು ಬಂದ ಹಣದಿಂದ ಜೀವನ ನಡೆಸುತ್ತಿದ್ದ.
ಒಂದು ದಿನ ಅವನಿಗೆ ತಾನೂ ಕೂಡ ಶ್ರೀಮಂತನಾಗಬೇಕು ಎಂದು ಆಸೆ ಪಟ್ಟ ಅದಕ್ಕಾಗಿ ಯೋಚಿಸಿದ ದೇವರಲ್ಲಿ ಬೇಡಿದರೆ ತಾನೇ ದೇವರು ನಮಗೆ ಬೇಡಿದ್ದು ನೀಡುವುದು, ನಾವು ಏನನ್ನೂ ಕೇಳಿಕೊಳ್ಳದಿದ್ದರೆ ನಮ್ಮ ಮೊರೆ ಅವನಿಗೆ ಹೇಗೆ ತಿಳಿಯುತ್ತದೆ ಎಂದು ಕೊಂಡು ಅಂದು ಬೆಳಗ್ಗೆ ಬೇಗ ಎದ್ದವನು ಬೇಗ ಸ್ನಾನ ಮುಗಿಸಿ ಧ್ಯಾನ ಮಾಡುತ್ತಾ ಅಮ್ಮಾ ದೇವಿ ಇಂದು ನನಗೆ ನಿಧಿ ಸಿಗುವಂತೆ ಮಾಡು ಎಂದು ಕೇಳಿಕೊಂಡು ಅಂದು ಕೆಲಸ ಹುಡುಕಿಕೊಂಡು ಹೊರಟ, ಅವನ ಮುಗ್ದ ಬೇಡಿಕೆಗೆ ಮನ ಸೋತ ದೇವಿ ತನ್ನ ಸೇವಕರಾದ ಭವ ಮತ್ತು ವಿಭ ಎಂಬುವರನ್ನು ಕಳುಹಿಸಿ ಸೂರ್ಯ ಕೇತುವಿಗೆ ನಿಧಿ ಸಿಗುವಂತೆ ಮಾಡಿಬನ್ನಿ ಎಂದು ಕಳುಹಿಸಿದರು.
ಭವನು ಸೂರ್ಯಕೇತು ಬರವು ಜಾಗದಲ್ಲಿ ಒಂದು ನಿಧಿಯ ಗಂಟು ಇಟ್ಟು ಅಲ್ಲಿಂದ ಅದೃಶ್ಯನಾದನು. ಸೂರ್ಯಕೇತು ಮುಂದೆ ಬಂದವನು ನಿಧಿಯ ಗಂಟು ನೋಡಿ ಅದನ್ನು ಕೈಯಲ್ಲಿ ಹಿಡಿದು ಅರೆ ನಿಧಿಯ ಗಂಟು ಯಾರದರೂ ಬೀಳಿಸಿಕೊಂಡು ಹೋಗಿರಬಹುದೇ ಎಂದು ಕೊಂಡು ಸುತ್ತ ಮುತ್ತ ನೋಡಿದಾಗ ಅಲ್ಲೊಬ್ಬರು ವರ್ತಕರು ನಿಂತಿರುವುದನ್ನು ನೋಡಿ ಅವನಿಗೆ ಸ್ವಾಮಿ ಈ ನಿಧಿಯ ಗಂಟು ನಿಮ್ಮದೇ ಎಂದಾಗ ತಾನಾಗಿಯೇ ತನ್ನ ಕೈಗೆ ಬಂದ ನಿಧಿಯ ಗಂಟನ್ನು ನೋಡಿ ವರ್ತಕ ಹೌದು ಇದು ನನ್ನದೇ ಇದನ್ನೇ ಹುಡುಕುತಿದ್ದೆ ಎಂದು ಹೇಳುತ್ತಾ ಅದನ್ನು ತೆಗೆದುಕೊಂಡು ಅಲ್ಲಿಂದ ಹೊರಟು ಹೋದನು.
ಎರಡನೆಯ ದಿನ ಧ್ಯಾನ ಮುಗಿಸಿ ಇಂದಾದರೂ ನಿಧಿ ಗಂಟು ಸಿಗುವಂತೆ ಮಾಡು ಎಂದು ಪ್ರಾರ್ಥಿಸುತ್ತಾ ಕೆಲಸ ಹುಡುಕಲು ಹೊರಟ. ಅಂದು ಕೂಡ ಮಾತೆಯ ಆಜ್ಞೆಯಂತೆ ಭವ ದಾರಿಯಲ್ಲಿ ಒಂದು ನಿಧಿ ಗಂಟನ್ನು ಇಟ್ಟು ಮಾಯವಾದನು. ಅದನ್ನು ನೋಡಿದ ಸೂರ್ಯಕೇತು ಓ ಇದು ಕೂಡ ನಿಧಿಯ ಗಂಟು ಎಂದು ಗುರುತಿಸಿ ಇನ್ನೇನು ಕೈಗೆ ತೆಗೆದುಕೊಳ್ಳಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ರಾಜಭಟರಿಬ್ಬರು ಬರುತ್ತಿರುವುದನ್ನು ನೋಡಿ ಓಹೋ ಇದು ಅವರದ್ದಾಗಿಬಹುದು ನಾನು ಇದನ್ನು ಮುಟ್ಟಿದರೆ ನನ್ನನ್ನು ಕಳ್ಳ ಎಂದುಕೊಳ್ಳುತ್ತಾರೆ ಎಂದುಕೊಂಡು ಅಲ್ಲಿಂದ ಸರಸರನೆ ಮುಂದೆ ನಡೆದ. ಮತ್ತ ಮಾರನೆಯ ದಿನ ಮಾತೆಯ ಪ್ರಾರ್ಥನೆ ಮುಗಿಸಿ ಇಂದಾದರೂ ನಿಧಿಗಂಟು ಕರುಣಿಸು ಎಂದುಕೊಳ್ಳುತ್ತಾ ಬರುವಾಗ ಮತ್ತೆ ಮಾತೆ ಆಜ್ಞಾನುಸಾರ ಭವ ಮತ್ತೊಂದು ನಿಧಿ ಗಂಟು ಇಟ್ಟು ಮಾಯವಾದ. ಅದನ್ನು ಕೈಗೆ ತೆಗೆದುಕೊಂಡ ಸೂರ್ಯಕೇತು ಓಹೋ ಇದು ಕೂಡ ನಿಧಿಯಗಂಟು ಇದು ಮಾತೆ ನನಗಾಗಿ ಕರುಣಿಸಿರಬಹುದೇ ಎಂದು ಯೋಚಿಸುತ್ತಾ ಮುಂದೆ ನಡೆದು ಬರುತ್ತಿರುವಾಗ ಮಾತೆದೇವಿಯ ಉತ್ಸವ ಬರುತ್ತಿರುವುದನ್ನು ನೋಡಿ ಓಹೋ ಮಾತೆ ನನ್ನನ್ನು ಪರೀಕ್ಷಿಸಲು ಹೀಗೆ ಮಾಡಿರಬಹುದು, ಇದು ಮಾತೆಯ ನಿಧಿ, ನಾನು ತೆಗೆದುಕೊಳ್ಳುವುದು ಉಚಿತವಲ್ಲ ಇದನ್ನು ಮಾತೆಗೇ ಅರ್ಪಿಸುತ್ತೇನೆ ಎಂದು ಮಾತೆಯ ಹುಂಡಿಯಲ್ಲಿ ನಿಧಿಯ ಗಂಟನ್ನು ಹಾಕಿ, ದೇವಿಮಾತೆ ನಾನು ಕೃತಾರ್ಥನಾದೆ ನಿನ್ನ ದಯೆಯಿಂದ, ನೋಡು ನೀನು ಒಡ್ಡಿದ್ದ ಪರೀಕ್ಷೆಯಲ್ಲಿ ನಾನು ಗೆದ್ದಿದ್ದೇನೆ ಎಂದು ಬೀಗುತ್ತಾ ಎಂದು ಕೈಮುಗಿದು ಅಲ್ಲಿಂದ ಹೊರಟು ಹೋದನು.
ಈ ಬಾರಿ ಭವ ವಿಭರು ಮಾತೆಯಲ್ಲಿ ಅಮ್ಮಾ ಈಬಾರಿ ನಿಧಿಯ ಗಂಟು ಇಟ್ಟು ಬರೋಣವೇ ಎಂದಾಗ ಮಾತೆಯು ಏನೂ ಬೇಡ ಆತನ ಕೋರಿಕೆ ಈಡೇರಿಸಲು ನಾನು 3 ಬಾರಿ ಅದೃಷ್ಟ ಕೊಟ್ಟಿದ್ದೆ ಮೊದಲನೇ ಬಾರಿ ತನಗೆ ನಿಧಿಯ ಮೂಲಕ ಸಿಕ್ಕಿದ್ದ ಅದೃಷ್ಟವನ್ನು ಮೂರ್ಖತನದಿಂದ ತಾನೇ ಹೋಗಿ ತನ್ನ ಕೈಯಾರ ವರ್ತಕನಿಗೆ ಕೊಟ್ಟ, ಎರಡನೇ ಬಾರಿ ಅದು ರಾಜಭಟರದ್ದು ಆಗಿರಬಹುದೆಂದು ಎಂದು ಕಲ್ಪಿಸಿಕೊಂಡು ಒಂದು ಕ್ಷಣ ನಿಂತು ಸತ್ಯ ನೋಡದೇ ಅದನ್ನು ಅಲ್ಲಿಯೇ ಬಿಟ್ಟು ಹೋದ, ಮೂರನೇ ಬಾರಿ ನಾನು ಕೊಟ್ಟ ನಿಧಿಯನ್ನು ನನಗೇ ಹಿಂತುರುಗಿಸಿದ, ಇವೆಲ್ಲವೂ ಕೆಲವು ವ್ಯಕ್ತಿಗಳ ಮಾನಸಿಕ ಕಲ್ಪನೆಯ ವಿಕಲ್ಪವಾಗಿರುತ್ತದೆ. ಅವರಿಗೆ ಅದೃಷ್ಟಬಂದಾಗಲೆಲ್ಲಾ ಅದನ್ನು ಹೇಗೆ ತನ್ನ ಕೈವಶ ಮಾಡಿಕೊಳ್ಳಬೇಕು ಎಂಬುದರ ತಿಳಿ ಸತ್ಯ ಕೂಡ ತಿಳಿದಿರುವುದಿಲ್ಲ. ಕೈಗೆ ಸಿಕ್ಕ ಅದೃಷ್ಟ ಕೈತಪ್ಪಿ ಹೋದ ನಂತರ ಅವರ ಅರಿವಿಗೆ ಬರುತ್ತದೆ ಇದು ನನ್ನದೇ ತಪ್ಪು ಎಂದು, ಇದು ಕೂಡ ಹಾಗೆಯೆ ಎಂದಾಗ ಭವ – ವಿಭರು ಮಾತೆಗೆ ಕೈಮುಗಿದು ಲೀನರಾದರು.
ನೀತಿ: ದೇವರು ಕೊಟ್ಟು ನೋಡುತ್ತಾನೆ, ಆದರೆ ಅದನ್ನು ಪಡೆದುಕೊಳ್ಳುವ ಯೋಗ ನಮ್ಮ ಹಣೆಯಲ್ಲಿ ಬರೆದಿರಬೇಕು.

ಸಂಪಾದಕರ ನುಡಿ
ಈ ದಿನದ ಕಥೆ “ಅದೃಷ್ಟ ಒಲಿದು ಬಂದಾಗ…” ಎಂಬ ಶೀರ್ಷಿಕೆಯಡಿ, ಮಾನವನ ಮನಸ್ಥಿತಿ ಮತ್ತು ಅದೃಷ್ಟದ ನಡುವಿನ ಸೂಕ್ಷ್ಮ ಸಂಬಂಧವನ್ನು ಅತ್ಯಂತ ಸರಳವಾಗಿ ಆದರೆ ಗಂಭೀರ ಅರ್ಥದೊಂದಿಗೆ ನಿರೂಪಿಸುತ್ತದೆ. ದೇವರು ಅವಕಾಶವನ್ನು ಕೊಡುತ್ತಾನೆ; ಆದರೆ ಅದನ್ನು ಗುರುತಿಸಿ, ಧೈರ್ಯದಿಂದ ಸ್ವೀಕರಿಸುವ ವಿವೇಕ ನಮ್ಮೊಳಗಿರಬೇಕೆಂಬ ಸತ್ಯವನ್ನು ಈ ಕಥೆ ಸ್ಪಷ್ಟಪಡಿಸುತ್ತದೆ. ಸೂರ್ಯಕೇತು ಎಂಬ ಪಾತ್ರದ ಮೂಲಕ ಸಂಶಯ, ಭಯ, ಅತಿಯಾದ ನೀತಿಭಾವನೆಗಳು ಹೇಗೆ ಕೈಗೆ ಬಂದ ಅದೃಷ್ಟವನ್ನೇ ಕೈತಪ್ಪಿಸಿಕೊಳ್ಳುವಂತೆ ಮಾಡುತ್ತವೆ ಎಂಬುದನ್ನು ಕಥೆ ಪರಿಣಾಮಕಾರಿಯಾಗಿ ತೋರಿಸಿದೆ.
ಇದು ಕೇವಲ ಧಾರ್ಮಿಕ ಕಥೆಯಲ್ಲ; ಪ್ರತಿಯೊಬ್ಬರ ಜೀವನದಲ್ಲೂ ಮರುಕಳಿಸುವ ಅನುಭವದ ಪ್ರತಿಬಿಂಬ. ಅವಕಾಶ ಬಂದಾಗ ಅದನ್ನು ಪರೀಕ್ಷೆಯೆಂದು ಮಾತ್ರ ನೋಡದೇ, ಜವಾಬ್ದಾರಿಯುತವಾಗಿ ಬಳಸಿಕೊಳ್ಳುವ ಜ್ಞಾನ ಅಗತ್ಯವೆಂಬ ಸಂದೇಶವನ್ನು ಕಥೆ ಸಾರುತ್ತದೆ. ನೀತಿಯ ಸಾಲು — “ದೇವರು ಕೊಟ್ಟು ನೋಡುತ್ತಾನೆ, ಆದರೆ ಅದನ್ನು ಪಡೆದುಕೊಳ್ಳುವ ಯೋಗ ನಮ್ಮ ಹಣೆಯಲ್ಲಿ ಬರೆದಿರಬೇಕು” — ಓದುಗರನ್ನು ಆತ್ಮಪರಿಶೀಲನೆಗೆ ಪ್ರೇರೇಪಿಸುತ್ತದೆ.
ಅರ್ಥಪೂರ್ಣ ಸಂದೇಶ ಹೊಂದಿದ ಈ ಕಥೆಯನ್ನು ರಚಿಸಿದ ಶ್ರೀ ವೇಣುಗೋಪಾಲ್ ಅವರಿಗೆ ಅಭಿನಂದನೆಗಳು. ಇಂತಹ ಚಿಂತನೆಗೆ ದಾರಿ ಮಾಡಿಕೊಡುವ ಸಾಹಿತ್ಯವು ಸಮಾಜಕ್ಕೆ ಸದಾ ದಾರಿದೀಪವಾಗಿರುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


