“ನಾವು ಏಕೆ ಹೀಗೆ?” ಎಂದು ಯೋಚಿಸುತ್ತಾ ಹೋದರೆ ಬಹುಶ: ಉತ್ತರ ಸಿಗುವುದು ಕಷ್ಟ ಎನಿಸಬಹುದು. ಮನುಷ್ಯ ಪ್ರಾಣಿ ಪ್ರಪಂಚದಲ್ಲೇ ಅತ್ಯಂತ ವಿಕಾಸ ಹೊಂದಿ ಮಿಕ್ಕಲ್ಲಾ ಪ್ರಾಣಿಗಳಿಗಿಂತ ಅತ್ಯಂತ ಮುಂದುವರೆದ ಬುದ್ಧಿವಂತ ಪ್ರಾಣಿ ಪ್ರಭೇದ. ನಾವು ಒಂದು ಪ್ರಾಣಿ ಎಂಬ ಅರಿವು ನಮಗೆ ತಿಳಿದಿದ್ದರೂ ಕೂಡ ನಮ್ಮನ್ನು ನಾವು “ಮನುಷ್ಯ” ಎಂಬ ಅನ್ವರ್ಥ ಪದ ಅರ್ಥೈಸಿ ಅಥವಾ ಕೊಟ್ಟು ಹಾಗೆಯೇ ಕರೆದುಕೊಳ್ಳುತ್ತೇವೆ. ಮನುಷ್ಯ ಎಂದು ಕರೆದುಕೊಳ್ಳುವ ಮೂಲಕ ಪ್ರಾಣಿಗಳನ್ನು “ಪ್ರಾಣಿ” ಎಂಬ ಪ್ರತ್ಯೇಕ ಸ್ಥಿತಿಯಲ್ಲಿ ನೋಡುವ ಮನಸಿಗರಾಗುತ್ತೇವೆ. ಇದಕ್ಕೆ ಕಾರಣ ಏನಿರಬಹುದು? ಈ ವಿಚಾರವನ್ನು ಅತ್ಯಂತ ವಿಶೇಷವಾಗಿ ಯೋಚಿಸುವ ಅಗತ್ಯ ಇಲ್ಲವೆಂದು ಅಂದುಕೊಳ್ಳುತ್ತಾ; ಇದಕ್ಕೇಕೆ ಇಷ್ಟೊಂದು ಮಹತ್ವ ಕೊಡಬೇಕು? ಎಂದು ಕೂಡ ಭಾವಿಸಬಹುದು, ಏಕೆಂದರೆ ಎಲ್ಲಾ ಪ್ರಾಣಿಗಳನ್ನು ತನ್ನ ಹತೋಟಿಗೆ ಇಟ್ಟುಕೊಳ್ಳಬಲ್ಲ ಜಾಣ್ಮೆ ಮನುಷ್ಯನಲ್ಲಿದೆ ಎಂಬುದಾಗಿಯೇ? ಹುಲಿ, ಸಿಂಹದಂತಹ ಎಂತಹ ಕ್ರೂರ ಮೃಗಗಳಾಗಲೀ, ಆನೆಯಂತ ಶಕ್ತಿಶಾಲಿ ಪ್ರಾಣಿಯಾಗಲೀ ತನ್ನ ಹತೋಟಿಗೆ ತೆಗೆದುಕೊಳ್ಳುತ್ತಾನೆ ಎಂಬುದಾಗಿಯೇ? ಇದಕ್ಕೆ ಉತ್ತರ ಇದ್ದರೂ ಇರಬಹುದು ಆದರೆ ವೈರಸ್, ಬ್ಯಾಕ್ಟೀರಿಯದಂತಹ ಅತಿ ಸೂಕ್ಷ್ಮ ವೈರಾಣು ಮಾನವ ದೇಹದೊಳಗೆ ಹೇಳದೇ ಕೇಳದೇ ಪ್ರವೇಶಿಸಿ ಮನುಷ್ಯನನ್ನೇ ಹೈರಾಣ ಮಾಡುವ ಶಕ್ತಿ ಇವುಗಳಲ್ಲಿ ಇರುವುದಾದರೆ, ಇವುಗಳು ನಮ್ಮ ದೇಹಕ್ಕೆ ಆಕ್ರಮಿಸುವುದನ್ನು ಮೊದಲೇ ತಿಳಿದು ಇವುಗಳನ್ನು ನಿಯಂತ್ರಿಸುವ ಜಾಣ್ಮೆ ಅಥವಾ ಶಕ್ತಿ ಮನುಷ್ಯನಿಗೆ ಯಾಕೆ ದೊರಕಿಲ್ಲ? ಏಕೆಂದರೆ ಇವು ನಮ್ಮ ಕಣ್ಣಿಗೆ ಕಾಣದಷ್ಟು ಅತ್ಯಂತ ಸೂಕ್ಷ್ಮ ಜೀವಿಗಳು ಎಂಬುದಾಗಿ ಇರಬಹುದು ಅಲ್ಲವೇ? ಇವು ಯಾವಾಗ ಹೇಗೆ ಆಕ್ರಮಿಸುತ್ತವೆ ಎಂಬುದು ಕಣ್ಣಿಗೆ ಕಾಣಿಸುವುದಿಲ್ಲ ಅಲ್ಲವೇ? ಇಲ್ಲಿಯೂ ಕೂಡ ಉತ್ತರ ಇದ್ದರೂ ಇರಬಹುದು ಎಂಬುದು.
ಆದರೆ ಇವುಗಳು ಮನುಷ್ಯರಷ್ಟೇ ಅಲ್ಲ, ಯಾವ ಪ್ರಾಣಿ, ಪಕ್ಷಿ, ವೃಕ್ಷ, ಹಣ್ಣು, ಹೂವು ಯಾವುದನ್ನು ಬಿಡದೆ ಬಾದೆ ಕೊಡುವುದ ಬಿಟ್ಟಿಲ್ಲ ಅಲ್ಲವೇ? ಇವುಗಳಲ್ಲಿ ರೋಗ ಕಾರಕ ಸೂಕ್ಷ್ಮ ಜೀವಿಗಳು ಇರುವುದರ ಜೊತೆಗೆ ಮನುಷ್ಯನಿಗೆ ಉಪಯೋಗಕಾರಿ ಸೂಕ್ಷ್ಮ ಜೀವಿಗಳು ಇವೆ ಎಂಬುದು ತಿಳಿದ ವಿಷಯ. ಇವು ಜೀವಗೋಳದಲ್ಲಿ ಇರದ ಜಾಗವಿಲ್ಲ, ಸತ್ತ ಅಥವಾ ಜೀವ ವಿರುವ ಬಹುಕೋಶ ಜೀವಿಗಳ ದೇಹವು (ಜೊತೆಗೆ ಪ್ರಾಣಿ ಜನ್ಯ ಹಾಲು, ಸಸ್ಯ ಜನ್ಯ ಹೂ, ಹಣ್ಣು… ಇತ್ಯಾದಿ) ಇವುಗಳನ್ನು ತಮ್ಮ ವಾಸಸ್ಥಾನ ಮಾಡಿಕೊಂಡಿದ್ದರೂ, ಕೆಲವು ಪ್ರಭೇದಗಳು ಪ್ರಕೃತಿಯಲ್ಲಿ ನರ್ಜೀವ ವಸ್ತುವಿನಂತೆ ಬಹುಕಾಲ ಇದ್ದು, ತನಗೆ ಅನುಕೂಲಕರ ಪರಿಸರ ಅಥವಾ ಅನ್ಯ ದೇಹ ಸಿಕ್ಕಾಗ ಜೀವ ಬರಿಸಿಕೊಂಡುಬಿಡುತ್ತವೆ. ಇದಕ್ಕೆ ಪ್ರತ್ಯೇಕ ಅಧ್ಯಯನವೇ ಇದೆ. ಆದರೂ ಸರ್ವಮಯವಾಗಿರುವ ಇವುಗಳಿಗೆ ಜೀವ ಪ್ರಭೇಧದಲ್ಲಿ ಮೊದಲ ಸ್ಥಾನ ಸಿಗಬೇಕಿತ್ತು ಅಂದುಕೊಳ್ಳಬೇಕೆ? ಖಂಡಿತ ಇಲ್ಲ ಇದೊಂದು ಅಸಂಬದ್ಧ ಪ್ರಶ್ನೆಯಂತಾಗುತ್ತದೆ. ಇವೆಲ್ಲವನ್ನು ನಾನೇ ಹೇಳುತ್ತಿರುವಾಗ ಇವನು ಏನು ಹೇಳಲು ಹೊರಟಿದ್ದಾನೆ ಎಂದು ಅನ್ನಿಸಬಹುದು? ಇದಕ್ಕೆ ಒಂದು ಕಾರಣ ಇದೆ, ಅದು ಏನೆಂದರೆ; ಎಲ್ಲವನ್ನೂ ಆಳುತ್ತಿರುವ ಅಥವಾ ಇಷ್ಟೆಲ್ಲಾ ಬರಿಯ ಕಣ್ಣಿಗೆ ಕಾಣದ ಅತ್ಯಂತ ಸೂಕ್ಷ್ಮ ಜೀವಿಗಳ ಜಗತ್ತು ಇದ್ದರೂ ಕೂಡ ಮನುಷ್ಯನಿಗೆ ತುಂಬ ಮಹತ್ವ ಜಾಸ್ತಿ, ಆದರೆ ಏಕೆ ಹೀಗೆ? ಇದಕ್ಕೆ ಎಂತಹವರೂ ಕೂಡ ಉತ್ತರ ಸುಲಭವಾಗಿ ಹೇಳುತ್ತಾರೆ. ಅದು ಏನೆಂದರೆ ಮನುಷ್ಯ ಎಲ್ಲವನ್ನು ತನ್ನ ನಿಯಂತ್ರಣದಲ್ಲಿ ತೆಗೆದುಕೊಳ್ಳುವ ಬುದ್ಧಿವಂತಿಕೆ ಹೊಂದಿರುವುದು. ಮನುಷ್ಯನ ಮೆದುಳಿನ ರಚನೆ ಹೇಗಿದೆ ಎಂದರೆ ಎಲ್ಲವನ್ನೂ ಅಧ್ಯಯನ ಮಾಡಿ ಕರಗತ ಮಾಡಿಕೊಳ್ಳುವ ಶಕ್ತಿ ಹೊಂದಿದೆ. ಎಂತಹ ಸೂಕ್ಷ್ಮ ಜೀವಿಗಳೇ ಆಗಿರಲಿ (ಅಥವಾ ಬಹುಕೋಶ) ಅದರ ದೇಹ ರಚನೆ ಅಧ್ಯಯನ ಮಾಡಿ, ಅದರ ಗುಣ ಲಕ್ಷಣ ಕಂಡು ಹಿಡಿದು, ಅದಕ್ಕೆ ಪರ್ಯಾಯ ವಿರೋಧಕಗಳನ್ನು ಸಿದ್ಧಪಡಿಸುವುದು. ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳುವುದು. ಇವೆಲ್ಲವೂ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಗೊತ್ತಿರದ ವಿಚಾರ ಏನೆಂದು ಹುಡುಕುತ್ತಾ ಹೋಗುವುದು ಇಲ್ಲಿ ಮುಖ್ಯವಾಗುತ್ತದೆ.
ಮೇಲಿನ ಬರಹದಲ್ಲಿ ಬರಿಯ ಪ್ರಾಣಿ ಅಥವಾ ಸೂಕ್ಷ್ಮ ಜೀವಗಳ ನಿಯಂತ್ರಣಕ್ಕೆ ಸೀಮಿತವಾಗಿರದ ಮನುಷ್ಯನ ಬುದ್ಧಿಶಕ್ತಿ ಸಾಮರ್ಥ್ಯ, ನಾನಾ ಕ್ಷೇತ್ರಗಳಲ್ಲಿ ತನ್ನ ನಿರಂತರ ಅಧ್ಯನದಿಂದ ದೊರೆತ ಜ್ಞಾನದಿಂದ ಬಹುಮುಖ ವಿಚಾರಗಳಲ್ಲಿ ಸಂಶೋಧನೆ ಕೈಗೊಂಡು, ಆ ಮುಖೇನ ವಿಜ್ಞಾನ ಮತ್ತು ಗಣಿತದ ಸಹಾಯದಿಂದ ಇಂದು ಮನುಷ್ಯನ ಯೋಚನೆ ಎಲ್ಲಿಗೆ ಮುಟ್ಟಿದೆ ಎಂದರೆ ಅನ್ಯಗ್ರಹ ಜೀವಿಗಳ ಹುಡುಕಾಟದ ಕಡೆಗೆ ಮುಂದುವರೆದಿರುವುದನ್ನು ನಾವು ನೋಡುತ್ತಿದ್ದೇವೆ. ಜೊತೆಗೆ ಗೆಲಾಕ್ಸಿಗಳಲ್ಲಿ ನಮ್ಮ ಕಲ್ಪನೆಗೆ ನಿಲುಕದ ಕಪ್ಪುಕುಳಿಗಳು (Black Hole) (ಐನ್ ಸ್ಟೈನ್ ಮಹಾನ್ ವಿಜ್ಞಾನಿ ಕಪ್ಪುಕುಳಿಗಳ ಕಲ್ಪನೆಯೇ ಇರದ ಕಾಲದಲ್ಲಿ ಇಂತಹ ಒಂದು ಸೂತ್ರ ಇರಬಹುದಾದ ಸಾಧ್ಯತೆಯ ಬಗ್ಗೆ ಪ್ರಸ್ತಾಪ ಮಂಡಿಸಿದ್ದರು ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು, ಅಂದರೆ ಮನುಷ್ಯನ ಬುದ್ಧಿಮತ್ತೆಯ ಪರಾಕಾಷ್ಟೆ), ಡಾರ್ಕ ಎನರ್ಜಿ (Dark Energy), ಡಾರ್ಕ್ ಮ್ಯಾಟರ್ (Dark Matter) ಇವುಗಳ ಬಗ್ಗೆ ತಿಳಿದುಕೊಳ್ಳುವಲ್ಲಿ ಸಾಕಷ್ಟು ಸಂಶೋಧನೆ ನಡೆಸುತ್ತಿದ್ದಾನೆ. ಆದರೆ ಇವೆಲ್ಲವುದರ ತಿಳಿದುಕೊಳ್ಳುವ ಅವಶ್ಯಕತೆಯಾದರೂ ಏನು ಎಂದು ಪ್ರಶ್ನಿಸಿಕೊಂಡಾಗ, ನಾವು ಈ ಭೂಗ್ರಹದಲ್ಲಿ ಏಕೆ ಹುಟ್ಟಿದ್ದೇವೆ ಎಂಬ ಮರು ಪ್ರಶ್ನೆ ಹುಟ್ಟುಹಾಕಿಕೊಳ್ಳುತ್ತದೆ. ಹೌದು ನಾವು ಏಕೆ ಹುಟ್ಟಿದ್ದೇವೆ? ನಮ್ಮಿಂದ ಈ ಜಗತ್ತಿಗೆ ಆಗಬಹುದಾದ ಉಪಯೋಗವಾದರೂ ಏನು? ಆದರೆ ಈ ಜಗತ್ತಿನ ಆಸರೆಯಲ್ಲಿರುವ ನಾವು, ಈ ಜಗತ್ತಿಗೆ ಏನು ತಾನೆ (ಕೊಡುಗೆ) ಕೊಡಬಲ್ಲೆವು? ಒಂದಲ್ಲಾ ಒಂದು ದಿನ ಎಲ್ಲವೂ ನಶಿಸಿಹೋಗುತ್ತದೆ ಅಥವಾ ಮುಗಿದುಹೋಗುತ್ತದೆ ಎಂಬುದು ಶತ ಸತ್ಯ, ಹಾಗೆ ಗೊತ್ತಿದ್ದರೂ ಸಹ ಅಭಿವೃದ್ಧಿಯ ಹೆಸರಿನಲ್ಲಿ, ಪ್ರಕೃತಿಯ ವಿನಾಶದ ಪಾಲುದಾರಿಕೆಯಲ್ಲಿ ನಾವು ಮೊದಲಿಗರಾಗಿ ಮುನ್ನಡೆಯುತ್ತಿದ್ದೇವೆ, ಒಮ್ಮಿಂದ ಒಮ್ಮೆಗೆ ಅಲ್ಲದಿದ್ದರೂ ನಿಧಾನವಾಗಿ ಎಲ್ಲವೂ ಒಂದಾದ ನಂತರ ಒಂದು ಎಂಬಂತೆ ಬರಿದು ಆಗುತ್ತದೆ. ಹೀಗಿರುವಾಗ ಯಾವ ಸಾರ್ಥಕಕ್ಕಾಗಿ ಪ್ರಕೃತಿ ಮನುಷ್ಯ ಪ್ರಾಣಿಯ ಮೆದುಳನ್ನು ಇಷ್ಟೊಂದು ಬುದ್ಧಿಮತ್ತೆ ತುಂಬಿತು? ಉಳಿದ ಪ್ರಾಣಿಗಳ ಬುದ್ಧಿಮತ್ತೆ ಕೇವಲ 3 ವಿಷಯಗಳಿಗೆ ಮಾತ್ರ ಸೀಮಿತ ಮಾಡಿತಾದರೂ ಏಕೆ? ಮೊದಲನೆಯದಾಗಿ ತನ್ನ ಪ್ರಾಣ ರಕ್ಷಣೆ, ಎರಡನೆಯದಾಗಿ ಆಹಾರ ಮತ್ತು ಮೂರನೆಯದಾಗಿ ವಂಶೋದ್ಧಾರ ಮಾಡುವುದು. ಇಷ್ಟಕ್ಕೇ ಸೀಮಿತಗೊಳಿಸಿ ಮನುಷ್ಯ ಪ್ರಾಣಿಯ ಮೆದುಳಿಗೆ ಮಾತ್ರ ಇಷ್ಟೊಂದು ಸಾಮ್ರಾಜ್ಯ ಏಕೆ ತುಂಬಿರಬಹುದು? ಅದರ ಉದ್ದೇಶವಾದರೂ ಏನು? ಈ ಜಗತ್ತು ನಮ್ಮಿಂದ ಏನಾದರೂ ನಿರೀಕ್ಷಿಸುತ್ತಿದೆಯೇ? ಅಥವಾ ನಾವು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆಯೇ? ಗೊತ್ತಿಲ್ಲ, ಇಲ್ಲಿ ಏನೋ ಒಂದು ವಿಚಾರ ಅಡಗಿದೆ ಎಂದು ಅನ್ನಿಸದೇ ಇರಬಹುದೇ? ನನ್ನ ಪ್ರಕಾರ ಈ ಜಗತ್ತಿಗೆ ನಾವು ಜೀವ ವಿರುವ ದೇಹಗಳು ಎಂಬ ವಿಚಾರವೇ ತಿಳಿಯದೇ ಹೋಗಿರಬಹುದು ಎನಿಸುತ್ತದೆ, ಅದಕ್ಕೆ ಜೀವ, ನಿರ್ಜೀವ ಎಂಬ ಕಲ್ಪನೆಯೇ ಇಲ್ಲದಿರಬಹುದು, ಅದು ಹೇಗೆಂದರೆ ವಿವಿಧ ಕಾಲ ಮಜಲುಗಳಲ್ಲಿ, ಒಂದು ಅನುಕೂಲಕರ ಪರಿಸ್ಥಿತಿಗಳಲ್ಲಿ ರಾಸಾಯನಿಕ ವಿವಿಧ ಸಂಯೋಜನೆಗಳಲ್ಲಿ ಸೂಕ್ಷ್ಮಾಣು ಜೀವಿಗಳಿಂದ ಹಿಡಿದು ಮನುಷ್ಯನ ವರೆಗೆ ಸಾವಿರಾರು ವರ್ಷಗಳ ಕಾಲ ನಿರಂತರ ಪ್ರಾಕೃತಿಕ ರಾಸಾಯನಿಕ ಪ್ರಕ್ರಿಯೆಗಳಿಂದ ತಳೆದಿರುವ ಜೀವ, ಕೇವಲ ಪ್ರಕೃತಿಯ “ಆಕಸ್ಮಿಕ” ಒಂದು ಅವಿಭಾಜ್ಯ ಅಂಗ ಅಷ್ಟೇ ಎಂದುಕೊಳ್ಳಬಹುದು.
ಸಾವಿರಾರು ಕೋಟಿ ವರ್ಷಗಳ ಹಿಂದೆ ಅದೆಷ್ಟೋ ಬಾರಿ, ಉಲ್ಕೆಗಳ ಪ್ರಭಾವದಿಂದ ಅದೆಷ್ಟೋ ಜೀವ ಸಂಕುಲ ನಾಶವಾಗಿದೆ, ಅದರ ಪಳೆಯುಳಿಕೆಗಳ ಪ್ರತಿಫಲದ ಉಪಯೋಗ ಇಂದು ಮನುಷ್ಯ ಪಡೆದುಕೊಳ್ಳುತ್ತಿದ್ದಾನೆ, ಆದರೆ ಅದೂ ಕೂಡ ಶಾಶ್ವತವಲ್ಲ. ಪ್ರಕೃತಿಗೆ ಜೀವ ಉಳಿಸುವ ಮನೋಭಾವವಿದ್ದರೆ ಇಂತಹ ವಿಕೋಪಗಳು ಅಂದು ನಡೆಸುತ್ತಿರಲಿಲ್ಲ. ಇಂದೂ ಕೂಡ ಸುನಾಮಿ, ಭೂಕಂಪದಂತ ಪ್ರಾಕೃತಿಕ ಅವಘಡಗಳಿಂದ ಮಾನವನ ಜೊತೆಗೆ ಅದೆಷ್ಟೋ ಪ್ರಾಣಿಗಳು ಜೀವ ಕಳೆದುಕೊಂಡಿವೆ. ಸ್ವತಹ ಪ್ರಕೃತಿಯೇ ಇಂತಹ ವಿಕೋಪಗಳಿಂದ ನಾಶವಾಗಿದೆ, ಇವೆಲ್ಲವೂ ಏಕೆ ನಡೆಯುತ್ತಿದೆ ಮತ್ತು ಏಕೆ ನಡೆಯಬೇಕು? ಇಲ್ಲೇ ಗಮನಿಸಿ, ಇಂತಹ ಜೀವ ವಿನಾಶದ ಕ್ರಮ, ಪ್ರಕೃತಿಯಿಂದಲೇ ನಡೆಯುತ್ತಿದೆ ಎಂಬ ಗಮನ ಈ ಜಗತ್ತಿನ ಕಣ್ಣಿಗೆ ಕಾಣುತ್ತಿರುವಂತೆ ಅನ್ನಿಸುತ್ತಿಲ್ಲ. ಅನ್ನಿಸಿದ್ದರೆ ಹೇಗಾದರೂ ಕಾಪಾಡುವ ಪ್ರಕ್ರಿಯೆ ಕೂಡ ಕಾಣಿಸುತ್ತಿತ್ತು ಅಲ್ಲವೇ? ಕಾಲಾಂತರಗಳಲ್ಲಿ ಮನುಷ್ಯ ಪ್ರಾಣಿಯ ಮೆದುಳಿನ ಅದ್ಭುತ ಯೋಚನಾ ಸಾಮರ್ಥ್ಯದ ಪ್ರತಿಫಲದ ಕೂಸಾಗಿ ವಿವಿಧ ಧರ್ಮಗಳು ಹುಟ್ಟಿರಬಹುದು. (ಇಲ್ಲಿ ನಾನು ಯಾವ ಧರ್ಮದ ಹೆಸರನ್ನೂ ಉಲ್ಲೇಖಿಸಿಲ್ಲ ಮತ್ತು ಅಲ್ಲಗಳೆಯುತ್ತಿಲ್ಲ) ಹಿಂದಿನಿಂದ ಇಂದಿನವರೆವಿಗೂ ಗಮನಿಸಿದಾಗ ಧಾರ್ಮಿಕ ಕಾರಣಗಳಿಂದ ಅದೆಷ್ಟೋ ಯುದ್ಧಗಳು ನಡೆದು ಅದೆಷ್ಟು ಜೀವ ನಾಶವಾಗಿದೆ? ಇಲ್ಲಿ ಜೀವ ಏಕೆ ನಾಶವಾಯಿತು? ಜೀವ ಉಳಿಸುವ ಜಗತ್ತಿನ ಅಗೋಚರ ಶಕ್ತಿ ಯಾಕೆ ಬರಲಿಲ್ಲ. ಬಂದು ಕಾಪಾಡುವ ಹೊಣೆ ಹೊರಲಿಲ್ಲ, ಇವೆಲ್ಲವುಗಳನ್ನು ಅವಲೋಕಿಸಿದಾಗ ಈ ಜಗತ್ತಿಗೆ, ತನ್ನ ಮಡಿಲಲ್ಲಿ ಜೀವ ಎಂಬುದೂ ಕೂಡ ಒಂದು ಇದೆ ಎಂಬ ಕಲ್ಪನೆ ಇರುವುದಿಲ್ಲ ಎಂದಂತೆ ಆಯಿತು ಅಲ್ಲವೇ? ಪ್ರಕೃತಿಯಲ್ಲಿ ಜೀವ ಮತ್ತು ನಿರ್ಜೀವ ಎಲ್ಲವೂ ಒಂದೇ, ಎಲ್ಲವೂ ಒಂದೇ ಎಂಬ ಕಲ್ಪನೆಗೆ ಬಂದಾಗ ಹುಟ್ಟು ಮತ್ತು ನಾಶ ಎಲ್ಲವೂ ಒಂದೇ ಎಂಬಂತೆ ಆಯಿತು ಅಲ್ಲವೇ? ಮತ್ತು ಎಲ್ಲದ್ದಕ್ಕೂ ಅನ್ವಯಿಸುತ್ತದೆ. ಇಲ್ಲಿ ಯಾವುದು ಯಾವುದನ್ನು ಕಾಯುವ ಅಥವಾ ಕಾಪಾಡುವ ಗೋಜಿಗೆ ಹೋಗುವುದಿಲ್ಲ. ಸೃಷ್ಟಿಯ ಜೊತೆಗೆ ಜೀವ ಸೃಷ್ಟಿ ಎನ್ನುವುದು ವಿಜ್ಞಾನದ ಒಂದು ಅನುಕೂಲಕರ ವಾತಾವರಣದ ಕೊಡುಗೆ ಅಷ್ಟೇ, ಇಲ್ಲಿ ನಮ್ಮ ಸೌರವ್ಯೂಹದಲ್ಲಿ ಉಳಿದ ಗ್ರಹಗಳಲ್ಲಿ ಜೀವ ಸೃಷ್ಟಿ ಏಕೆ ಆಗಿಲ್ಲ, ಎಂದರೆ ಅಲ್ಲಿ ನಮ್ಮ ಭೂಮಿಯಂತಹ ಅನುಕೂಲಕರ ವಾತಾವರಣ ಇಲ್ಲದಿರುವುದು ಇದು ಗೊತ್ತಿರುವ ವಿಷಯ. ಹಾಗೆಯೇ ನಾವು ಅಂದರೆ ಜೀವಿಗಳು ಸೃಷ್ಟಿಯ ಒಂದು ಅವಿಭಾಜ್ಯ ಅಂಗವಾಗಿದ್ದೇವೆ, ವಿನಾಶ ಎಂಬುದರಿಂದ ನಾವೇನು ಹೊರತಾಗಿಲ್ಲ, ನಮಗೆ ಜೀವವಿರುವುದರಿಂದ ಪುನರಪಿ ಜನನಂ, ಪುನರಪಿ ಮರಣಂ ಎಂಬ ದಾಸರ ಧಾರ್ಮಿಕ ಸಿದ್ದಾಂತದಲ್ಲಿ ನಂಬಿಕೆ ಇಟ್ಟಿದ್ದೇವೆ. ಜೀವ ಸೃಷ್ಟಿಸುವ ಅಥವಾ ಹುಟ್ಟಿಸದಿರುವ ಸಮಯ ಸಂದರ್ಭಗಳು ಈ ಜಗತ್ತಿನ ಒಂದು ನಿಯಮದಂತೆ ನಡೆಯುತ್ತಿರುತ್ತದೆ. ಈ ಜಗತ್ತಿನ ವಿನಾಶದ ನಂತರ, ಮುಂದಿನ ಜಗತ್ತಿನಲ್ಲಿ ಈ ಜೀವ ಎಂಬುದು ಮತ್ತೊಮ್ಮೆ ಹುಟ್ಟಿ ಬರಬಹದು ಅಥವಾ ಬರದೇಯೇ ಇರಬಹುದು, ಮುಂದಿನ ಜಗತ್ತು ಒಂಟಿಯಾಗಿಯೇ ಇರಬಹುದು ಗೊತ್ತಿಲ್ಲ. ಅದಕ್ಕಾಗಿಯೇ ಈಗ ಎಲ್ಲವೂ ಮತ್ತು ಎಲ್ಲರೂ ಇರುವಾಗಲೇ ಹಿತಮಿತಗಳಿಂದ ಬದುಕುವುದ ಕಲಿತು, ಅನ್ಯೋನ್ಯದಿಂದ ಬದುಕಬೇಕು ಎಂಬುದು ಮುಖ್ಯವಾಗುತ್ತದೆ.

ಸಂಪಾದಕರ ನುಡಿ
ಪ್ರಿಯ ಓದುಗರೇ,
ಲೇಖಕ ವೇಣುಗೋಪಾಲ್ ಅವರ ಈ ಆಳವಾದ ಚಿಂತನಾ ಲೇಖನ ಮನುಷ್ಯ ಅಸ್ತಿತ್ವದ ಮೂಲಭೂತ ಪ್ರಶ್ನೆಗಳನ್ನು ಮತ್ತೊಮ್ಮೆ ನಮ್ಮ ಮುಂದೆ ತೆರೆದಿಡುತ್ತದೆ. “ನಾವು ಯಾರು? ಪ್ರಕೃತಿಯಲ್ಲಿ ನಮ್ಮ ಸ್ಥಾನ ಏನು? ಮನುಷ್ಯನಿಗೆ ಮಾತ್ರ ಈ ಮಟ್ಟದ ಬುದ್ಧಿಶಕ್ತಿ ಯಾಕೆ?” ಎಂಬ ವಿಚಾರಗಳನ್ನು ಅವರು ಅತ್ಯಂತ ನಿಷ್ಠೆಯೊಂದಿಗೆ ವಿಶ್ಲೇಷಿಸಿದ್ದಾರೆ.
ಮನುಷ್ಯನ ಬುದ್ಧಿಶಕ್ತಿ, ವಿಜ್ಞಾನದಲ್ಲಿ ಅವನ ಸಾಧನೆಗಳು, ಕಣ್ಣಿಗೆ ಕಾಣದ ಸೂಕ್ಷ್ಮಾಣುಗಳಿಂದ ಹಿಡಿದು ಅಪಾರ ಗಾತ್ರದ ಗೆಲಾಕ್ಸಿಗಳ ತನಕ ಅಧ್ಯಯನ ಮಾಡುವ ಸಾಮರ್ಥ್ಯ—ಇವೆಲ್ಲವೂ ಅವನ ವಿಶೇಷತೆಯಾಗಿದ್ದರೂ, ಪ್ರಕೃತಿಯ ನಿಯಮಗಳ ಮುಂದೆ ಮನುಷ್ಯನ ಅಸ್ತಿತ್ವ ಅತಿ ಅಲ್ಪ ಎನ್ನುವುದನ್ನು ಲೇಖನ ಸೂಕ್ಷ್ಮವಾಗಿ ನೆನಪಿಸುತ್ತದೆ.
ಈ ಬರಹ ದೃಷ್ಠಿಗೋಚರ ಮಾಡುವ ಪ್ರಮುಖ ವಿಚಾರಗಳು:
ಪ್ರಕೃತಿ ಯಾವ ಜೀವಕ್ಕೂ ವಿಶೇಷ ಸ್ಥಾನ ಕೊಡುವುದಿಲ್ಲ; ಜೀವ ಮತ್ತು ನಿರ್ಜೀವ ಎರಡೂ ಒಂದೇ ಪ್ರಕ್ರಿಯೆಯ ಅಂಗಗಳು.
ಜೀವ ಸೃಷ್ಟಿಗಾಗಲಿ, ಜೀವ ನಾಶವಾಗಲಿ, ಪ್ರಕೃತಿಗೆ ‘ಉದ್ದೇಶ’ ಎಂಬ ಕಲ್ಪನೆ ಇರುವುದಿಲ್ಲ. ಇವೆಲ್ಲವೂ ರಾಸಾಯನಿಕ–ಭೌತಿಕ ಪರಿವರ್ತನೆಗಳ ಸಹಜ ಕ್ರಮ.
ಮನುಷ್ಯ ತನ್ನ ಬದುಕಿಗೆ ಅರ್ಥ ನೀಡುವ ಏಕೈಕ ಜೀವಿ; ಆದರೆ ತನ್ನ ಅಸ್ತಿತ್ವದ ಮೂಲ ಪ್ರಶ್ನೆಗೆ ಉತ್ತರ ಹುಡುಕುವ ಯತ್ನ ಇನ್ನೂ ಮುಂದುವರಿಯುತ್ತಲೇ ಇದೆ.
ಪ್ರಾಣಿ–ಪಕ್ಷಿಗಳು ತಮ್ಮ ಬದುಕನ್ನು ಮೂರು ಅಗತ್ಯಗಳಿಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದರೂ, ಮನುಷ್ಯ ಮಾತ್ರ ಅನ್ವೇಷಣೆ, ಕಲ್ಪನೆ, ಸಂಶೋಧನೆ, ತತ್ವ, ಧರ್ಮ, ವಿಜ್ಞಾನ—ಎಲ್ಲದರ ಮೂಲಕ ತನ್ನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ.
ಪ್ರಕೃತಿಯೊಂದಿಗೆ ಮನುಷ್ಯ ಹೊಂದಿಕೊಳ್ಳದೆ ನಡೆಯುವ ಪ್ರತಿಯೊಂದು ಕ್ರಮ ತನ್ನದೇ ನಾಶಕ್ಕೆ ಕಾರಣವಾಗಬಹುದೆಂಬ ಎಚ್ಚರಿಕೆಯನ್ನು ಲೇಖನ ತಿಳಿಹೇಳುತ್ತದೆ.
ಲೇಖನದ ಅಂತಿಮ ಉದ್ದೇಶವೇನೆಂದರೆ,
ಈ ಜಗತ್ತಿನಲ್ಲಿ ಅರ್ಥಪೂರ್ಣವಾಗಿ ಬದುಕಲು, ಪರಸ್ಪರ ಹಿತ ಮತ್ತು ಪ್ರಕೃತಿಯ ಹಿತ ಎರಡನ್ನೂ ಸಮಾನವಾಗಿ ಕಾಳಜಿಯಿಂದ ನೋಡುವುದು ಮನುಷ್ಯನ ನೈಸರ್ಗಿಕ ಕರ್ತವ್ಯ.
ಬದುಕಿರುವಾಗ ಪರಸ್ಪರ ಅನುಕೂಲ, ಪ್ರೀತಿ, ಸಹವಾಸ—ಇವೆಲ್ಲವೇ ಮನುಷ್ಯನ ಬುದ್ಧಿಮತ್ತೆಗೆ ನಿಜವಾದ ಮೌಲ್ಯ.
ಲೇಖಕ ವೇಣುಗೋಪಾಲ್ ಅವರ ಚಿಂತನೆ ಓದುಗರಲ್ಲಿ ಪ್ರಶ್ನೆಗಳನ್ನು ಹುಟ್ಟಿಸುವುದಷ್ಟೇ ಅಲ್ಲ, ಆ ಪ್ರಶ್ನೆಗಳ ಹಿಂದೆ ಅಡಗಿರುವ ಜಗತ್ತಿನ ಮರ್ಮವನ್ನು ಅರಿಯುವ ದಾರಿಯನ್ನೂ ತೆರೆದಿಡುತ್ತದೆ.
– ಸಂಪಾದಕರು
ನಮ್ಮ ತುಮಕೂರು ಡಿಜಿಟಲ್ ಸುದ್ದಿ ಮಾಧ್ಯಮ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


