ಕೊರಟಗೆರೆ: ಸಮಾಜದ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅನನ್ಯ. ಆದರೆ ಅನೇಕ ಕಡೆಗಳಲ್ಲಿ ಇಂದಿಗೂ ಅವರನ್ನು ಕೀಳರಿಮೆಯಿಂದ ನೋಡುವ ಪ್ರವೃತ್ತಿ ಇದೆ. ಈ ಮನೋಭಾವನೆ ಬದಲಾಗಬೇಕಿದೆ ಎಂಬ ಮಾತಿಗೆ ಪೂರಕವಾಗಿ, ಕೊರಟಗೆರೆ ತಾಲ್ಲೂಕಿನ ಬೊಮ್ಮಲದೇವೀಪುರ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರು ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಇಡೀ ಜಿಲ್ಲೆಗೆ ಮಾದರಿಯಾಗಿದ್ದಾರೆ.
ಈ ಪಂಚಾಯಿತಿ ವ್ಯಾಪ್ತಿಯ 19 ಗ್ರಾಮಗಳಲ್ಲಿ ವಾರಕ್ಕೆ ಎರಡು ದಿನ ಶಿಸ್ತುಬದ್ಧವಾಗಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಇಲ್ಲಿನ ವಿಶೇಷವೆಂದರೆ, ಪಂಚಾಯಿತಿಯ ವಾಹನ ಚಾಲಕಿ ಆಶಾ, ಕಾರ್ಮಿಕರಾದ ಜಯಮ್ಮ ಮತ್ತು ನಾಗಮ್ಮ ಅವರ ಶ್ರದ್ಧೆ. ಪಂಚಾಯಿತಿ ನೀಡಿರುವ ಸ್ವಚ್ಛತಾ ವಾಹನದ ಮೂಲಕ ಪ್ರತಿ ಮನೆಬಾಗಿಲಿಗೆ ತೆರಳುವ ಇವರು, ‘ಕಸದ ಗಾಡಿ ಬಂದಿದೆ, ದಯವಿಟ್ಟು ಕಸ ನೀಡಿ’ ಎಂದು ಆತ್ಮೀಯವಾಗಿ ಕೂಗಿ ಕರೆಯುತ್ತಾರೆ. ಇವರ ಈ ನಯವಾದ ನಡವಳಿಕೆ ಮತ್ತು ಸೌಜನ್ಯದ ಮಾತುಗಳು ಗ್ರಾಮಸ್ಥರ ಮನಗೆದ್ದಿವೆ.
ಕೇವಲ ಕಸ ವಿಲೇವಾರಿ ಮಾಡುವುದಷ್ಟೇ ಅಲ್ಲದೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿಯೂ ಇವರು ಯಶಸ್ವಿಯಾಗಿದ್ದಾರೆ. ಇವರ ಕಾರ್ಯವೈಖರಿಗೆ ಸ್ಪಂದಿಸುತ್ತಿರುವ ಗ್ರಾಮಸ್ಥರು, ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುವ ಮೂಲಕ ಪೂರ್ಣ ಸಹಕಾರ ನೀಡುತ್ತಿದ್ದಾರೆ. “ಪೌರ ಕಾರ್ಮಿಕರು ಸಮಾಜದ ಮುಖ್ಯವಾಹಿನಿಯ ಭಾಗ. ಅವರು ನೀಡುವ ಗೌರವಕ್ಕೆ ಪ್ರತಿಯಾಗಿ ನಾವು ಅವರಿಗೆ ಸಹಕಾರ ನೀಡಬೇಕು” ಎಂಬ ಅರಿವು ಈ ಭಾಗದ ಜನರಲ್ಲಿ ಮೂಡಿದೆ. ಚರಂಡಿ ಅಥವಾ ರಸ್ತೆ ಬದಿ ಕಸ ಎಸೆಯುವ ಅಭ್ಯಾಸವನ್ನು ಬಿಟ್ಟು, ಪಂಚಾಯಿತಿ ವ್ಯವಸ್ಥೆಗೆ ಕೈಜೋಡಿಸಿರುವುದು ಇಲ್ಲಿನ ಪೌರ ಕಾರ್ಮಿಕರ ಶ್ರಮಕ್ಕೆ ಸಂದ ಜಯವಾಗಿದೆ. ಇವರ ಈ ಸೇವೆಯನ್ನು ಕಂಡು ಇಡೀ ಪಂಚಾಯಿತಿಯ ಸಾರ್ವಜನಿಕರು ಮೆಚ್ಚುಗೆಯ ಸುರಿಮಳೆಗೈಯುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


