ಬೀದರ್: ಬೀದರ್ ಜಿಲ್ಲೆಯ ಔರಾದ ತಾಲೂಕಿನ ದುಡುಕನಾಳ್ ಸಮೀಪ ಪಂಚಾಯತ್ ರಾಜ್ ಇಲಾಖೆ ವತಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಬೇಕಾಗಿದ್ದ ರಸ್ತೆ ಸುಧಾರಣೆ ಕಾಮಗಾರಿ ಟೆಂಡರ್ ಇಲ್ಲದೇ ಆರಂಭಿಸಿದ ಹಿನ್ನೆಲೆ, ಈಗಾಗಲೇ ಜೆ.ಇ.ಶಿವಕುಮಾರ್ ಪುರಾಣಿಕ್ ಅವರನ್ನು ಅಮಾನತ್ ಮಾಡಲಾಗಿದ್ದು, ಪಂಚಾಯತ್ ರಾಜ್ ಇಲಾಖೆ ಇ.ಇ.ಶಿವಾಜಿ ಡೋಣೆ ಹಾಗೂ ಎಇಇ ವೆಂಕಟರಾವ್ ಶಿಂಧೆ ವಿರುದ್ದವೂ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ.
ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ್ ದಿಲೀಪ್ ಬದೋಲೆ ಅವರು ಜೆಇ ಶಿವಕುಮಾರ್ ಪುರಾಣಿಕ್ ರನ್ನು ಅಮಾನತ್ ಗೊಳಿಸಿ ಇಇ ಡೋಣೆ ಹಾಗೂ ಶಿಂಧೆ ವಿರುದ್ದವೂ ಶಿಸ್ತು ಕ್ರಮ ಜರುಗಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪಾತ್ರ ಬರೆದಿದ್ದಾರೆ.
ಟೆಂಡರ್ ಇಲ್ಲದೇ ದುಡುಕನಾಳ್ ಸಮೀಪ 2 ಕೋಟಿ ರೂ. ಕಾಮಗಾರಿ ಆರಂಭಿಸಿರುವ ಬಗ್ಗೆ ಸ್ಥಳೀಯ ಪತ್ರಿಕಾ ವರದಿಗಳನ್ವಯ ಜಿಲ್ಲಾ ಪಂಚಾಯತ್ ಸಿಇಒ ಗಿರೀಶ್ ಬದೋಲೆ ಅವರು ಜಿ.ಪಂ. ಯೋಜನಾಧಿಕಾರಿ ಹಾಗೂ ಕೆಆರ್ ಡಿಎಲ್ ಇಇ ನೇತೃತ್ವದಲ್ಲಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ತನಿಖಾ ತಂಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿತ್ತು.
ವರದಿಯಲ್ಲಿ ಪಂಚಾಯತ್ ರಾಜ್ ಇಲಾಖೆ ಇಇ ಶಿವಾಜಿ ಡೋಣೆ, ಎಇಇ ವೆಂಕಟರಾವ್ ಶಿಂಧೆ ಹಾಗೂ ಜೆಇ ಶಿವಕುಮಾರ್ ಪುರಾಣಿಕ ಕರ್ತವ್ಯ ಲೋಪದ ಬಗ್ಗೆ ಉಲ್ಲೇಖಿಸಲಾಗಿತ್ತು. ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ಅಂದಾಜು 60 ಲಕ್ಷ ರೂ .ಕಾಮಾಗಾರಿ ಮುಗಿದಿರುವುದು ಬೆಳಕಿಗೆ ಬಂದಿತ್ತು. ಟೆಂಡರ್ ಅಂತಿಮ ದಿನಾಂಕ 24.4.2025. ಆದರೆ, ಸದರಿ ಕಾಮಗಾರಿ ಆರಂಭವಾಗಿದ್ದು, 31.3.2025.ಈ ಎಲ್ಲಾ ವಿಷಯಗಳನ್ನು ಪರಿಗಣಿಸಿ ವರದಿ ನೀಡಲಾಗಿತ್ತು.
ಈಗ ಜಿ.ಪಂ. ಸಿಇಒ ಪಂಚಾಯತ್ ರಾಜ್ ಇಲಾಖೆ ಇಇ ಹಾಗೂ ಎಇಇ ವಿರುದ್ಧ ಕ್ರಮಕ್ಕಾಗಿ ಪಾತ್ರ ಬರೆದಿದ್ದು, ಮುಂದೆನಾಗುತ್ತದೆ ಕಾದು ನೋಡಬೇಕಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4