ತುಮಕೂರು: ಸಾಹಿತಿಗಳು, ಸಾಂಸ್ಕೃತಿಕ ಕಾರ್ಯಕರ್ತರು ಸರ್ಕಾರದ ಆಶ್ರಯ ಪಡೆಯುವುದು ನಿಲ್ಲಿಸಬೇಕು. ಸಾಹಿತಿ ದುಡಿದು ಸಂಪಾದಿಸಬೇಕು, ಮಾಸಾಶನದಿಂದಲ್ಲ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ಹೇಳಿದರು.
ನಗರದಲ್ಲಿ ಭಾನುವಾರ ಬಹುಮುಖಿ ಬಳಗದಿಂದ ಹಮ್ಮಿಕೊಂಡಿದ್ದ ‘ಅಪ್ಪ’ ಪ್ರಶಸ್ತಿ ಪ್ರದಾನ ಸಮಾರಂಭ, ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಸಾಶನ ಪಡೆದು ದಿನ ಪೂರ್ತಿ ಬರೆಯುತ್ತಾ ಕುಳಿತರೆ ಕ್ರಿಯಾಶೀಲ ಸಾಹಿತಿ ಎನ್ನಲು ಆಗುವುದಿಲ್ಲ. ಅವರಿಗೆ ಜೀವನ ಅನುಭವ ಇರುವುದಿಲ್ಲ. ಬದುಕಿನ ಜತೆಗೆ ಕ್ರಿಯಾಶೀಲವಾಗಿ ತೊಡಗಿಸಿಕೊಂಡಾಗ ಮಾತ್ರ ಉತ್ತಮ ಸಾಹಿತ್ಯ ಸೃಜನೆ ಸಾಧ್ಯ. ಪ್ರಸ್ತುತ ಯುವ ಬರಹಗಾರರು ತೆರೆದ ಕಣ್ಣಿನಿಂದ ನೋಡಿದ, ಬದುಕಿನ ಅನುಭವದ ಬಗ್ಗೆ ಬರೆಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಭರವಸೆಯ ಬರಹಗಾರರು ಕನ್ನಡಕ್ಕೆ ಬಂದಿದ್ದಾರೆ. ಇದು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.
ಜನಪ್ರತಿನಿಧಿ, ಆಡಳಿತಾಧಿಕಾರಿ ತಪ್ಪು ಮಾಡಿದರೆ ಸಂದರ್ಭ, ರಾಜಕಾರಣದ ಒತ್ತಡ ಎಂದು ಹೇಳಬಹುದು. ಆದರೆ ಒಬ್ಬ ಸಾಹಿತಿಯ ಆಲೋಚನೆ, ಕ್ರಿಯೆ, ತೀರ್ಪುಗಳಲ್ಲಿ ತಪ್ಪಾದರೆ ನಾಡಿನ ಮನಸಾಕ್ಷಿ ಸತ್ತು ಹೋಗುತ್ತದೆ. ಆತಂಕ ಶುರುವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ಇತ್ತೀಚೆಗೆ ಡಾಕ್ಟರೇಟ್ ಪುರಸ್ಕಾರಗಳು ಸಹ ಹಣಕ್ಕೆ ಬಿಕರಿಯಾಗುತ್ತಿವೆ. ಬಹಳಷ್ಟು ಸಮಾರಂಭಗಳಲ್ಲಿ ಕೃತಿ, ಕೃತಿಕಾರರಿಗೆ ಹೆಚ್ಚು ಮನ್ನಣೆ ಸಿಗುವುದಿಲ್ಲ. ಕೃತಿಯನ್ನು ವಿಮರ್ಶಿಸುವ ಜತೆಗೆ ಕೃತಿಕಾರರಿಂದಲೂ ಮಾತನಾಡಿಸುವ ಪ್ರಯತ್ನ ಹೊಸ ಬೆಳವಣಿಗೆ. ಇದು ಮುಂದುವರಿಯಲಿ’ ಎಂದು ಆಶಿಸಿದರು.
ಲೇಖಕರಾದ ರವಿಕುಮಾರ್ ನೀಹ, ದೀಪದ ಮಲ್ಲಿ, ಕಪಿಲ ಪಿ.ಹುಮನಾಬಾದೆ ಅವರಿಗೆ ‘ಅಪ್ಪ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಲೇಖಕ ಸತೀಶ್ ಜವರೇಗೌಡ, ಬಹುಮುಖಿ ಬಳಗದ ಹಡವನಹಳ್ಳಿ ವೀರಣ್ಣಗೌಡ, ಮಂಜುನಾಥ್ ದಂಡಿನಶಿವರ, ಎಚ್.ವಿ.ನಾಗರಾಜು ಇತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


