ತುಮಕೂರು: ಜಿಲ್ಲೆಯಲ್ಲಿ ಮೂವರು ಸಚಿವರಿದ್ದರೂ ದಲಿತರ ಮೇಲೆ ಅಮಾನವೀಯ ಕೃತ್ಯ ನಡೆದಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಜಿಲ್ಲಾ ಸಚಿವರು ಎಂಬುದೇ ಮರೆತಿದ್ದಾರೋ ಅಥವಾ ಉದ್ದೇಶ ಪೂರ್ವಕವಾಗಿ ನಿರ್ಲಕ್ಷ್ಯ ತಾಳಿದ್ದರೋ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಈಚೆಗೆ ಹತ್ಯೆಗೀಡಾದ ಗಿರೀಶ್ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಅವರು, ಪೊಲೀಸ್ ಇಲಾಖೆಯ ಇತ್ತೀಚಿನ ವಿದ್ಯಮಾನ ಅಚ್ಚರಿ ತಂದಿದೆ. ಮೇಲ್ನೋಟಕ್ಕೆ ತನಿಖೆ ನಡೆಸದೆ, ಗಂಭೀರತೆ ಇಲ್ಲಿ ಕಾಣಬೇಕಿದೆ. ದಲಿತ ವಿರೋಧಿತನ ಮಟ್ಟ ಹಾಕಿ ನ್ಯಾಯ ಒದಗಿಸುವ ಗೃಹ ಇಲಾಖೆ ಮಾಡಬೇಕು ಎಂದು ಒತ್ತಾಯಿಸಿದರು.
ಇಡೀ ರಾಜ್ಯವೇ ಬೆಚ್ಚಿಬೀಳಿಸಿದ ಈ ಹತ್ಯಾಕಾಂಡ ಬಗ್ಗೆ ಬೇಜವಾಬ್ದಾರಿತನ ಪ್ರದರ್ಶಿಸದೆ, ನ್ಯಾಯಯುತ ತನಿಖೆ ನಡೆಯಬೇಕು. ಈಗಾಗಲೇ 20 ಕ್ಕೂ ಅಧಿಕ ಮಂದಿ ಆರೋಪಿಗಳ ಬಂಧನವಾಗಿದೆ. ಕೂಲಿ ಮಾಡಿ ಜೀವನ ಸಾಗಿಸುವ ಗಿರೀಶ್ ಎಂಬ ಇಬ್ಬರು ದಲಿತ ಯುವಕರ ಕೊಲೆಯ ಸಂಚು ಹೊರತರಬೇಕಿದೆ ಎಂದು ಅವರು ಒತ್ತಾಯಿಸಿದರು.
ಘಟನೆಗೆ ಮೂಲ ಕಾರಣಕರ್ತರ ಹೆಸರು ಬಯಲಾಗಲಿ ಎಂದು ಒತ್ತಾಯಿಸಿದ ಅವರು, ರಾಜ್ಯದ ಅನೇಕ ಕಡೆ ಜಾತಿ ಮಧ್ಯೆ ಕಲಹ ನಡೆಯುತ್ತಿದೆ. ಈ ಪೈಕಿ ದಲಿತರ ವಿರುದ್ಧವೇ ಹೆಚ್ಚು ಶೋಷಣೆ ನಡೆದಿದೆ. ಈ ಪ್ರಕರಣದಲ್ಲಿ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಗುಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ, ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೆಕಟ್ಟೆ ಜಯಣ್ಣ, ಮುಖಂಡರಾದ ಕೆ.ಆರ್.ತಾತಯ್ಯ, ಎಂ.ವಿ.ಶ್ರೀನಿವಾಸ್, ಸಲಿಂ ಪಾಷಾ, ಶಿವಾನಂದ್, ಮಾರಯ್ಯ, ವಸಂತಮ್ಮ, ಸೌಭಾಗ್ಯಮ್ಮ ಇತರರು ಇದ್ದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5