ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ಕೊರಟಗೆರೆ:- ಕಲ್ಲುಕ್ವಾರೆ ನಡೆಸಲು 3ವರ್ಷದಿಂದ ಪಟ್ಟುಹಿಡಿದ ಕಾದುಕುಳಿತ ಗಣಿಮಾಲೀಕ.. ಕಲ್ಲು ಗಣಿಗಾರಿಕೆ ನಡೆಸಲು ರಸ್ತೆ ಗುರುತಿಸಲು ಬಂದ ಮಧುಗಿರಿ ಎಸಿ.. ಗಣಿಗಾರಿಕೆ ಪ್ರಾರಂಭ ಮಾಡದಂತೆ ಒತ್ತಾಯ ಮಾಡಿದ ಸ್ಥಳೀಯ ರೈತಾಪಿವರ್ಗ.. ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶ ಮತ್ತು ನಾಮದ ಚಿಲುಮೆ ಪ್ರವಾಸಿ ಕ್ಷೇತ್ರ ಉಳಿವಿಗೆ ಸ್ಥಳೀಯರ ಆಗ್ರಹ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ತಂಗನಹಳ್ಳಿ ಸರ್ವೇ ನಂ.32ರಲ್ಲಿ 6ಎಕರೇ ಮತ್ತು ನೀಲಗೊಂಡನಹಳ್ಳಿ ಗ್ರಾಪಂಯ ಮಣ್ಣೂರು ತಿಮ್ಮನಹಳ್ಳಿ ಸರ್ವೆ ನಂ.4ರಲ್ಲಿ 40ಎಕರೇ ಸರಕಾರಿ ಗೋಮಾಳದ ಜಮೀನು ಬೆಂಗಳೂರು-ಬಳ್ಳಾರಿ ಮೂಲದ ಖಾಸಗಿ ವ್ಯಕ್ತಿಗೆ 25ವರ್ಷದ ಅವಧಿಗೆ 3ವರ್ಷದ ಹಿಂದೆಯೇ ಗುತ್ತಿಗೆ ನೀಡಲಾಗಿದೆ.
ಮಣ್ಣೋರು ತಿಮ್ಮನಹಳ್ಳಿ ಕರಡಿಗುಟ್ಟೆ ಮತ್ತು ತಂಗನಹಳ್ಳಿಯ ವಡ್ಡರಹಳ್ಳಿ ಕಲ್ಲುಗುಟ್ಟೆಯ ಸರಿಸುಮಾರು 50ಎಕರೇ ಗೋಮಾಳದ ಕಬಳಿಸಲು ಹುನ್ನಾರವೇ ನಡೆದಿದೆ. ಸ್ಥಳೀಯ ರೈತಾಪಿವರ್ಗ, ಪರಿಸರ ಪ್ರೇಮಿಗಳು, ಶ್ರೀಮಠದ ಸ್ವಾಮೀಜಿಗಳು ಸೇರಿದಂತೆ ಜನಪ್ರತಿನಿಧಿಗಳು ಎಷ್ಟೇ ಹೋರಾಟ ನಡೆಸಿದ್ರು ತೆರೆಮರೆಯಲ್ಲಿ ಗಣಿಗಾರಿಕೆ ಪ್ರಾರಂಭಿಸಲು ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿ ವರ್ಗವೇ ಪರೋಕ್ಷವಾಗಿ ಬೆಂಬಲಕ್ಕೆ ನಿಂತಿರುವುದು ರೈತರಲ್ಲಿ ಇನ್ನಷ್ಟು ಸಂಕಷ್ಟವನ್ನ ತಂದೊಡ್ಡಿದೆ.
ಕಂದಾಯ ತನಿಖಾಧಿಕಾರಿ ಅಮಾನತ್ತಿಗೆ ಆಗ್ರಹ..
ಕೋಳಾಲ ಕಂದಾಯ ತನಿಖಾಧಿಕಾರಿ ಅರುಣಕುಮಾರ್ ಗಣಿಗಾರಿಕೆ ಮಾಲೀಕರ ಜೊತೆ ಶಾಮಿಲಾಗಿ ರೈತರ ಸಹಿಯುಳ್ಳ ಪತ್ರದ ನಾಟಕ ಆಡಿದ್ದಾರೆ. ಸ್ಥಳೀಯ ರೈತರಿಗೆ ಕನ್ನಡದಲ್ಲೇ ಸಹಿ ಮಾಡಲು ಬರೋದಿಲ್ಲ. ಪತ್ರದಲ್ಲಿನ 15ಸಹಿಗಳು ಇಂಗ್ಲಿಷ್ನಲ್ಲಿವೆ. ಗೋಮಾಳದ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರ ಹೆಸರನ್ನೇ ಮರೆಮಾಚಿದ್ದಾರೆ. ಮಧುಗಿರಿ ಎಸಿ ಕೋಳಾಲ ಕಂದಾಯ ತನಿಖಾಧಿಕಾರಿ ವಿರುದ್ದ ತನಿಖೆ ನಡೆಸಿ ಅಮಾನತಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.
ಎತ್ತಿನಹೊಳೆ ಪೈಪ್ ಲೈನ್ ಗೆ ಅಪಾಯ..
ತಂಗನಹಳ್ಳಿ ಮತ್ತು ಐ.ಕೆ.ಕಾಲೋನಿ ನಡುವೆಯ ಬೆಟ್ಟದಲ್ಲಿ ಎತ್ತಿನಹೊಳೆ ಪೈಪ್ಲೈಲ್ ನಡೆಯುತ್ತಿದೆ. ಪೈಪ್ಲೈನ್ನ ಎರಡು ಭಾಗದಲ್ಲಿ ಗಣಿಗಾರಿಕೆ ನಡೆಸಲು ದಾರಿ ಗುರುತಿಸಲು ಮಧುಗಿರಿ ಎಸಿಯೇ ಖುದ್ದು ಆಗಮಿಸಿದ್ದಾರೆ. ಗಣಿಗಾರಿಕೆ ಪ್ರಾರಂಭ ಆದ್ರೇ ಎತ್ತಿನಹೊಳೆ ಯೋಜನೆಯ ಪೈಪ್ಲೈನ್, ಎಲೆರಾಂಪುರ ಕೆರೆಯ ಓಪನ್ ಕೇನಾಲ್, ಶ್ರೀಮಠದ ಸಮೀಪದ ಪಂಪುಹೌಸು ಸೇರಿದಂತೆ 30ಕ್ಕೂ ಅಧಿಕ ಕೆರೆಕಟ್ಟೆಗಳಿಗೆ ಅಪಾಯವು ಆಗಲಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶದಲ್ಲಿ ಸಾವಿರಾರು ಬಗೆಯ ವನ್ಯಜೀವಿ ಸಂಪನ್ಮೂಲವಿದೆ. ಕಲ್ಪತರು ನಾಡಿನ ಪ್ರವಾಸಿಗರ ಸ್ವರ್ಗಭೂಮಿ ನಾಮದ ಚಿಲುಮೆ. ವಡ್ಡರಹಳ್ಳಿ ಕಲ್ಲುಗುಟ್ಟೆ ಅಕ್ಕಪಕ್ಕ ಹತ್ತಾರು ಪುರಾತನ ದೇವಾಲಯ ಮತ್ತು ಕೆರೆಕಟ್ಟೆಗಳಿವೆ. ಬಳ್ಳಾರಿ ಗಣಿ ಮಾಲೀಕನ ಬೆದರಿಕೆಗೆ ರೈತಾಪಿವರ್ಗ ಹೆದರುವ ಪ್ರಶ್ನೆಯೇ ಇಲ್ಲ.
–ಸರ್ವೇಶ್. ಗ್ರಾಪಂ ಸದಸ್ಯ. ಎಲೆರಾಂಪುರ
2018ರಿಂದ 2023ರಿಂದ ಗಣಿಗಾರಿಕೆ ವಿರುದ್ದ ರೈತರ ಹೋರಾಟ ನಡೆದಿದೆ. ಕಂದಾಯ ಮತ್ತು ಸರ್ವೆ ಇಲಾಖೆ ಗಣಿಗಾರಿಕೆ ಮಾಲೀಕರ ಪರವಾಗಿ ಕೆಲಸ ಮಾಡ್ತಿದ್ದಾರೆ. ಕೋಳಾಲ ಕಂದಾಯ ತನಿಖಾಧಿಕಾರಿ ಅರುಣ್ಕುಮಾರ್ ರೈತರನ್ನು ವಂಚಿಸಿ ನಕಲಿ ಸಹಿ ಮಾಡಿಸಿದ್ದಾರೆ. ಗೃಹ ಸಚಿವರು ಕೊರಟಗೆರೆ ಕ್ಷೇತ್ರದ ರೈತರಿಗೆ ನ್ಯಾಯ ನೀಡಬೇಕಿದೆ.
–ತಿಮ್ಮರಾಜು. ಸ್ಥಳೀಯ ರೈತ. ತಂಗನಹಳ್ಳಿ
ತಂಗನಹಳ್ಳಿ ಸರ್ವೆ ನಂ.32ರಲ್ಲಿ ಗಲ್ಲುಗಣಿಗಾರಿಕೆ ನಡೆಸಲು ದಾರಿಯ ಸ್ಥಳ ಪರಿಶೀಲನೆ ನಡೆದಿದೆ. ಗಣಿಗಾರಿಕೆ ನಡೆಸದಂತೆ ಸ್ಥಳೀಯ ರೈತರು ಮನವಿ ಮಾಡಿದ್ದಾರೆ. ಬೆಟ್ಟದ ಸುತ್ತಲಿನ ಅರಣ್ಯ, ಕೆರೆಕಟ್ಟೆ ಮತ್ತು ಗ್ರಾಮಗಳ ಪರಿಶೀಲನೆ ನಡೆಸಲಾಗಿದೆ. ಗಣಿಗಾರಿಕೆ ಪರ ಮತ್ತು ವಿರೋಧದ ಸಂಪೂರ್ಣ ಮಾಹಿತಿ ಜಿಲ್ಲಾಧಿಕಾರಿಗೆ ನೀಡುತ್ತೇವೆ.
–ರಿಷಿಆನಂದ್. ಎಸಿ. ಮಧುಗಿರಿ
ವಿಡಿಯೋ ನೋಡಿ:
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy