ಬಾಗಲಕೋಟೆ: ಸಾಮಾಜಿಕ ಹೊಣೆಗಾರಿಕೆ ಮತ್ತು ಜವಾಬ್ದಾರಿಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದರ ಜೊತೆಗೆ ಗ್ರಾಮೀಣ ಸಮುದಾಯಗಳನ್ನು ಪರಿಚಯ ಮಾಡಿಸಲು ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಸಹಾಯಕವಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಶ್ರಾಂತ ಪ್ರಾಚಾರ್ಯರಾದ ಬಿ.ಆರ್ ಪಾಟೀಲ್ ಹೇಳಿದರು.
ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರಿಂದ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು, ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 1969ರಲ್ಲಿ ರಾಷ್ಟ್ರೀಯ ಯೋಜನೆಯನ್ನು ಪ್ರಾರಂಭಿಸಲಾಗಿದ್ದು ಭಾರತದಲ್ಲಿ 1 ಕೋಟಿ 49 ಲಕ್ಷ ಹಾಗೂ ಕರ್ನಾಟಕದಲ್ಲಿ 2 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಎಐ ತಂತ್ರಜ್ಞಾನದ ಜಗತ್ತಿನಲ್ಲಿ ನಾವು ಬದುಕುತ್ತಿದ್ದು ಯಂತ್ರಗಳು ತಮ್ಮಷ್ಟಕ್ಕೆ ತಾವೆ ಅಭಿವೃದ್ಧಿ ಪಡೆಯುವಷ್ಟು ಜಗತ್ತು ಮುಂದುವರೆದಿದೆ. ಅದರಲ್ಲಿ ಪೈಪೋಟಿ ಸಾಮರ್ಥ್ಯ ಬೆಳಸಿಕೊಳ್ಳಬೇಕಿದೆ. ಸಮಾಜ ಅಭಿವೃದ್ಧಿಯತ್ತ ಸಾಗುತ್ತಿದ್ದು ಶಿಕ್ಷಣ, ನೀರು, ಆಹಾರ, ಆರೋಗ್ಯಗಳೆಲ್ಲವು ಮಾರಾಟ ಮಾಡುವ ಪೈಪೋಟಿ ಜಗತ್ತಿನಲ್ಲಿ ನಾವು ಬದಕುವ ಸಾಮರ್ಥ್ಯವನ್ನು ಬೆಳಸಿಕೊಳ್ಳಬೇಕಿದೆ. ಇಂತಹ ಶಿಬಿರಗಳಿಂದ ನೀವು ಆತ್ಮವಿಶ್ವಾಸ ಬೆಳಸಿಕೊಳ್ಳುವುದರ ಮೂಲಕ ಸೇವೆಯನ್ನು ಕಲಿಯಲು ಸಾಧ್ಯ ಎಂದರು.
ನಾಯಕತ್ವದ ಗುಣವನ್ನು ಬೆಳಸಿಕೊಳ್ಳಲು ಮತ್ತು ಯಶಸ್ವಿ ವ್ಯಕ್ತಿಯಾಗಿ ರೂಪಗೊಳ್ಳಬೇಕೆಂದರೆ ಸಮುದಾಯಕ್ಕಾಗಿ ಶ್ರಮಿಸುವುದನ್ನು ರೂಡಿಸಿಕೊಳ್ಳಬೇಕು. ವ್ಯಕ್ತಿತ್ವವು ಆತ್ಮವಿಶ್ವಾಸದಿಂದ ರೂಪಗೊಳ್ಳುತ್ತದೆ ಹೊರತು ಬಾಹ್ಯ ಒತ್ತಡಗಳಿಂದಲ್ಲ. ಸಾಧನೆಯನ್ನು ಸಂಪತ್ತಿನಿಂದ ನಿರ್ಧರಿಸಲು ಸಾಧ್ಯವಿಲ್ಲ ನೀವು ಮಾಡುವ ಕೆಲಸದಲ್ಲಿನ ಪರಿಪೂರ್ಣತೆಯಿಂದ ಅದು ಸಾಧ್ಯ ಎಂದರು.
ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಈ ಶಿಬಿರಗಳನ್ನು ಹಮ್ಮಿಕೊಳ್ಳುವುದರಿಂದ ಗ್ರಾಮೀಣ ಜನರನ್ನು ಹತ್ತಿರದಿಂದ ನೋಡಿ ಅವರ ಜೀವನ ಶೈಲಿಯನ್ನು ಅರಿತುಕೊಳ್ಳಲು ಪ್ರಯತ್ನಿಸಿ. ಶಿಕ್ಷಣ ಮುಗಿದ ನಂತರ ಉದ್ಯೋಗ ಪಡೆಯುವುದೇ ಒಂದು ಗುರಿಯನ್ನಾಗಿಸಿಕೊಂಡ ನಾವುಗಳು ಕೃಷಿ, ಬೇಸಾಯ ಪದ್ದತಿಯನ್ನು ಮರೆಯುತ್ತಿದ್ದೇವೆ. ಅದರ ಜ್ಞಾನವನ್ನು ಪಡೆದುಕೊಳ್ಳುವ ಕೆಲಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬೀಳೂರು ಗುರುಬಸಬ ಪತ್ತಿನ ಸ.ಸಂಘದ ನಿರ್ದೇಶಕರಾದ ಪ್ರಭುಸ್ವಾಮಿ ಸರಗಣಾಚಾರಿ ಅವರು ಮಾತನಾಡಿ ಬಿವಿವಿ ಸಂಘವು ಮುಚಖಂಡಿ ಗ್ರಾಮವನ್ನು ದತ್ತು ಪಡೆಯುವುದರ ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಎನ್.ಎಸ್.ಎಸ್ ಶಿಬಿರಗಳನ್ನು ನಡೆಸುತ್ತ ಬಂದಿದೆ. ಸಂಚಾರ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಇಂತಹ ಶಿಬಿರದ ಮೂಲಕ ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕ ಸಂಚಾರಕ್ಕೆ ಸಹಾಯ ಮಾಡಿದ್ದೀರಿ. ನಿಮ್ಮ ಶ್ರಮದಾನಕ್ಕೆ ಗ್ರಾಮಸ್ಥರು ಸಹಕಾರ ನೀಡುತ್ತಾರೆ ಎಂದರು.
ಪ್ರಾಚಾರ್ಯರಾದ ಎಸ್.ಆರ್ ಮುಗನೂರಮಠ ಅವರು ಮಾತನಾಡಿ ನಮ್ಮ ದೇಶದಲ್ಲಿ ಯುವಶಕ್ತಿ ಹೇರಳವಾಗಿದೆ. ಪ್ರತಿಯೊಬ್ಬರಲ್ಲಿ ಸಾಧನೆಯ ಶಕ್ತಿ ಅಡಗಿದ್ದು ಅದನ್ನು ಅರ್ಥಮಾಡಿಕೊಂಡು ಸರಿಯಾದ ಮಾರ್ಗದಲ್ಲಿ ನಡೆಯುವ ಕೆಲಸ ಮಾಡಬೇಕಿದೆ. ದುರಾಲೋಚನೆಗಳಿಂದ ದೂರ ಸರಿದು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಕೌಶಲ್ಯ ಬೆಳಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಅಧ್ಯಯನ ಮತ್ತು ಅಂಕಗಳಿಗೆ ಮಾತ್ರ ಸೀಮಿತವಾಗುತ್ತಿದ್ದು ಸಾಮಾಜಿಕ ಪ್ರಜ್ಞೆ ಮತ್ತು ಜವಾಬ್ದಾರಿ ಬರಬೇಕಿದೆ. ಅದು ಶಿಬಿರಗಳಿಂದ ಸಾಧ್ಯವಾಗುತ್ತದೆ. ಮಾತುಗಾರಿಕೆ, ಒಡನಾಟ, ವಿವೇಚನಾ ಸಾಮರ್ಥ್ಯವು ಪರಿಸರದೊಂದಿಗೆ ಬೆರೆಯುವುದರಿಂದ ಬೆಳಸಿಕೊಳ್ಳಲು ಸಾಧ್ಯ. ಹೆಚ್ಚು ಅಂಕ ಪಡೆಯುವುದರಿಂದ ನಾಯಕತ್ವ ಗುಣ ಬೆಳೆಯಲು ಸಾಧ್ಯವಿಲ್ಲ ಪ್ರಾಮಾಣಿಕತೆ, ತಾಳ್ಮೆ, ಹೊಂದಾಣಿಕೆ, ಒಗ್ಗೂಡಿಸುವ ಸಾಮರ್ಥ್ಯಗಳು ನಾಯಕತ್ವ ಗುಣವನ್ನು ಬೆಳೆಸುತ್ತವೆ. ಇದರಿಂದ ಸಾಧಕರಾಗುತ್ತೇವೆ. ಅವುಗಳನ್ನು ವಿಶೇಷ ಶಿಬಿರಗಳು ಕಲಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಘಟಕ 1ರ ಕಾರ್ಯಕ್ರಮಾಧಿಕಾರಿ ಎಂ.ಎಚ್ ವಡ್ಡರ ಘಟಕ 2ರ ಕಾರ್ಯಕ್ರಮಾಧಿಕಾರಿ ಡಾ. ವಿರೂಪಾಕ್ಷಿ ಎನ್.ಬಿ, ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು ರಾಠೋಡ ಸೇರಿದಂತೆ ಎಲ್ಲ ವಿಭಾಗದ ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA