ತುಮಕೂರು: ತೆಂಗು ಬೆಳೆಯಲ್ಲಿ ಕೆಂಪುಮೂತಿ ಹುಳುಗಳನ್ನು ಹತೋಟಿ ಮಾಡುವ ಕ್ರಮದ ಬಗ್ಗೆ ಗುಬ್ಬಿ ತಾಲ್ಲೂಕು ತೋಟಗಾರಿಕೆ ಇಲಾಖೆ ರೈತರಿಗೆ ಸಲಹೆ ನೀಡಿದೆ.
ಕೆಂಪುಮೂತಿ ಕೀಟವು ತನ್ನ ಜೀವನಚಕ್ರವನ್ನು ಪೂರ್ಣಗೊಳಿಸಲು ತೆಂಗಿನ ಮರವನ್ನು ಅವಲಂಬಿಸಿರುವುದರಿಂದ ಎಲ್ಲಾ ಹಂತದಲ್ಲೂ ತೆಂಗಿಗೆ ಹಾನಿ ಉಂಟು ಮಾಡುತ್ತದೆ. ಕೆಂಪುಮೂತಿ ಹುಳುಗಳು ತೆಂಗಿನ ಮರದ ಕಾಂಡದೊಳಗೆ ಸೇರಿಕೊಂಡು ಮೃದು ಭಾಗಗಳನ್ನು ಕೊರೆಯುವುದರಿಂದ ಪ್ರಾರಂಭದಲ್ಲಿ ಸಣ್ಣ-ಸಣ್ಣ ರಂಧ್ರಗಳು ಕಾಣಿಸಿಕೊಳ್ಳುತ್ತವೆ. ಕೀಟ ಬಾಧೆಗೆ ಒಳಗಾದ ರಂಧ್ರಗಳಿಂದ ಕಂದು ಬಣ್ಣದ ರಸ ಸೋರಿರುವುದು ಹಾಗೂ ಹುಳುಗಳು ತಿಂದು ಹಾಕಿದ ನಾರು ಹೊರ ಬಂದಿರುವುದನ್ನು ಕಾಣಬಹುದಾಗಿದೆ. ಕೀಟ ಬಾಧೆಯು ತೀವ್ರವಾದಾಗ ಸುಳಿ ಗರಿಗಳು ಒಣಗಿ, ಹಾನಿಗೊಳಗಾದ ಭಾಗಗಳ ಹತ್ತಿರ ಎಲೆಯ ತೊಟ್ಟು(ಎಡಮಟ್ಟೆ)ಗಳು ಸೀಳುತ್ತವೆ.
ಕೆಂಪು ಮೂತಿ ಹುಳುವಿನ ಬಾಧೆಯನ್ನು ಖಚಿತಪಡಿಸಿಕೊಳ್ಳಲು ನಿಶ್ಯಬ್ದ ಸಮಯದಲ್ಲಿ ತೆಂಗಿನ ಮರದ ಕಾಂಡಕ್ಕೆ ಕಿವಿಯನ್ನಿಟ್ಟು ಆಲಿಸಿದಾಗ ಹುಳುಗಳು ತಿನ್ನುತ್ತಿರುವ ಶಬ್ದವನ್ನು ಕೇಳಿಸಿಕೊಳ್ಳಬಹುದು. ಈ ಕೀಟವು ಎಳೆಯ ವಯಸ್ಸಿನ ತೆಂಗಿನ ಮರಗಳಿಗೆ ಹೆಚ್ಚು ಹಾನಿಕಾರಕವಾಗಿದೆ. ಸಾಮಾನ್ಯವಾಗಿ 5 ರಿಂದ 20 ವರ್ಷ ವಯಸ್ಸಿನ ಮರಗಳು ಇದರ ಹಾವಳಿಗೆ ತುತ್ತಾಗುತ್ತವೆ.
ಮರದ ಯಾವುದೇ ಗರಿಗಳನ್ನು ಕತ್ತರಿಸುವಾಗ ಕಾಂಡದಿಂದ 1ಮೀ. ಉದ್ದ ಬಿಟ್ಟು ಉಳಿದ ಭಾಗ ಕತ್ತರಿಸಿ, ಮೃದುವಾದ ಅಂಗಾಂಶಗಳಿಗೆ ಗಾಯವಾಗದಂತೆ ನೋಡಿಕೊಳ್ಳುವುದರಿಂದ ಕೀಟಬಾಧೆಯನ್ನು ನಿರ್ವಹಣೆ ಮಾಡಬಹುದು. ಕೀಟವನ್ನು ನಿಯಂತ್ರಿಸಲು ತೋಟದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಈ ಕೀಟ ಬಾಧೆಯು ಹೆಚ್ಚಿನ ಸಂಖ್ಯೆಯಲ್ಲಿ ಹರಡುವುದನ್ನು ನಿವಾರಿಸಲು ಬಾಧೆಗೊಳಗಾದ ಮರಗಳನ್ನು ಕತ್ತರಿಸಿ ಅವುಗಳನ್ನು ಸುಟ್ಟುಹಾಕಬೇಕು. ಸೈನೋಸ್ಕಾಡ್ 2.5 ಎಸ್.ಸಿ. ಪ್ರತಿ ಲೀ. ನೀರಿಗೆ 5 ಮಿ.ಲೀ ನಂತೆ, ಇಮಿಡಾಕೊರೊಫಿಡ್ 30.5 ಎಸ್.ಎಲ್, ಪ್ರತಿ ಲೀ. ನೀರಿಗೆ 1 ಮಿ.ಲೀ.ನಂತೆ ಬಾಧಿತ ಮರದ ಕಾಂಡದ ಎತ್ತರದಲ್ಲಿರುವ ರಂಧ್ರದಿಂದ ಸುರಿದು ಕಾಂಡದಲ್ಲಿ ಸೇರಿಸುವುದರಿಂದ ಕೀಟವನ್ನು ಹತೋಟಿಯಲ್ಲಿಡಬಹುದಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q