ತುಮಕೂರು: ಪವತಿ ಖಾತೆಯ ಆಧಾರದಲ್ಲಿ ಪಹಣಿ, ಎಂ.ಆರ್ ಗಳು ಸಕ್ರಮವಾಗಿದ್ದರು, ಪ್ರತ್ಯೇಕ ಪೋಡಿ ಮಾಡಿಕೊಡದೇ ವಿನಾ ಕಾರಣ ಕಾಲಹರಣ ಮಾಡುತ್ತಿರುವ ಅಧಿಕಾರಿ, ಸಿಬ್ಬಂದಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಂಡು ನೊಂದ ಮಹಿಳೆಗೆ ನ್ಯಾಯದೊರಕಿಸಿ ಕೊಡಬೇಕೆಂದು ಶೂದ್ರಸೇನೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಟಿ.ಸಿ.ರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.
ನಿರ್ಮಲ ಕೆ.ಎನ್ ಕೋಂ ಲೇಟ್ ರಾಜಕುಮಾರ್ ಬಿನ್, ಕಮಲಮ್ಮ ತುಮಕೂರು ನಗರ ನಿವಾಸಿಯಾದ ಇವರ ಪತಿಯವರಾದ ಲೇಟ್ ರಾಜ್ ಕುಮಾರ್ ಬಿನ್ ಕಮಲಮ್ಮರವರಿಗೆ ಭೂ ನ್ಯಾಯ ಮಂಡಳಿಯಿಂದ 10 ಗುಂಟೆ ವಿಸ್ತೀರ್ಣದ ಜಮೀನು ಸರ್ವೇ ನಂ.3.3ರ ಚನ್ನನದಿಣ್ಣೆ ಪ್ರದೇಶದಲ್ಲಿ ಮಂಜೂರಾಗಿದ್ದು ನ್ಯಾಯಯುತವಾಗಿದೆ.
ಹಾಗೂ ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ಸತ್ಯವಾಗಿವೆ. ತದನಂತರ ಇವರ ಪತಿಯಾದ ರಾಜ್ಕುಮಾರ್ ರವರು ಮರಣ ಹೊಂದಿದ್ದು, ಪವತಿ ಆಧಾರದಲ್ಲಿ ಇವರ ಹೆಸರಿಗೆ 10ಗುಂಟೆ ವಿಸ್ತೀರ್ಣದಲ್ಲಿ 02ಗುಂಟೆ ಸಾರ್ವಜನಿಕ ರಸ್ತೆಗೆ ಮಿಸಲಾಗಿದ್ದು, ಉಳಿದ 08 ಗುಂಟೆ ಇವರ ಹೆಸರಿಗೆ ಪಹಣಿ, ಎಂ.ಆರ್ , ದಾಖಲಾತಿಗಳಿವೆ, ಆದರೆ ಇದೇ ಸರ್ವೆ ನಂಬರ್ ಗಳಲ್ಲಿ ಕೆಲವರಿಗೆ ಭೂ ನ್ಯಾಯ ಮಂಡಳಿಯಲ್ಲಿ ಮಂಜೂರಾಗಿದ್ದು, ಅವರೆಲ್ಲರೂ ಜಿಲ್ಲಾಧಿಕಾರಿಗಳ ಮುಖಾಂತರ ಭೂ ಪರಿವರ್ತನೆ ಮಾಡಿಕೊಂಡು ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದಾರೆ
ಈ ಸರ್ವೇ ನಂಬರ್ ನಲ್ಲಿ ಮೂಲ ವಿಸ್ತೀರ್ಣ ವ್ಯತ್ಯಾಸವಾಗಿ ಮೂಲ ವಿಸ್ತೀರ್ಣಕ್ಕಿಂತ ಈಗಿನ ವಿಸ್ತೀರ್ಣ ವ್ಯತ್ಯಾಸವಾಗಿದೆ. ಆದ್ದರಿಂದ ನಾವುಗಳು ಈ ಸರ್ವೆ ನಂಬರ್ಗಳಿಗೆ ಸಂಬಂಧಿಸಿದಂತೆ ವಿಸ್ತೀರ್ಣ ವ್ಯತ್ಯಾಸದ ಬಗ್ಗೆ ತುಮಕೂರು ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಿದ್ದೆವು, ಈ ಮನವಿಗೆ ಸ್ಪಂದಿಸಿದ ವಿಭಾಗಾಧಿಕಾರಿಗಳು ತಮ್ಮ ಪತ್ರದೊಂದಿಗೆ ತುಮಕೂರು ತಾಲ್ಲೂಕು, ತಹಶೀಲ್ದಾರ್ರವರಿಗೆ ಈ ವಿಸ್ತೀರ್ಣದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ತಹಶೀಲ್ದಾರ್ ಕಛೇರಿಯಲ್ಲಿರುವ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರಾದ ಅಜಯ್ ರವರು ಹಾಗೂ ಗ್ರಾಮಲೆಕ್ಕಿಗರಾದ ರವಿಕುಮಾರ್ ಭೂಮಿಕೇಂದ್ರದ ಹೇಮಲತಾರವರು ವಿನ ಕಾರಣ ಯಾವುದೇ ಲೋಪಗಳು ಇಲ್ಲದಿದ್ದರೂ ವಿಸ್ತೀರ್ಣ ವ್ಯತ್ಯಾಸಗಳನ್ನು ಗುರುತಿಸದೇ ಕಳೆದ ಫೆಬ್ರವರಿ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ಏನು ಮಾಡದೇ ಅಲೆದಾಡಿಸಿ, ಅಲೆದಾಡಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿರುತ್ತಾರೆ ಎಂದು ಅವರು ತಿಳಿಸಿದರು.
ನೊಂದ ಕುಟುಂಬಕ್ಕೆ ನ್ಯಾಯಯುತವಾಗಿ ಬಂದಿರುವ 8 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ವಿಸ್ತೀರ್ಣ ವ್ಯತ್ಯಾಸವಾಗಿರುವುದನ್ನು ಸರಿಪಡಿಸಿಕೊಡಬೇಕು ಹಾಗೂ ಇವರಿಗೆ ಮಾನಸಿಕವಾಗಿ ಹಿಂಸೆಯನ್ನು ನೀಡಿದ ಈ ಮೇಲಿನ ಅಧಿಕಾರಿಗಳ ವಿರುದ್ದ ಕಾನೂನು ರೀತ್ಯಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಅವರು ಇದೇ ವೇಳೆ ಒತ್ತಾಯಿಸಿದರು.
“ತಾಲೂಕು ಕಚೇರಿ ಬಾಗಿಲು ತಟ್ಟಿ ತಟ್ಟಿ ನಮಗೆ ಸಾಕಷ್ಟು ನೋವು ಉಂಟಾಗಿದೆ. ಜಿಲ್ಲಾಧಿಕಾರಿಗಳು ಕೂಡಲೆ ನಮಗೆ ನ್ಯಾಯ ಕೊಡಿಸಲು ಮುಂದಾಗಬೇಕಿದೆ. ನಮಗೆ ನ್ಯಾಯ ಸಿಗದಿದ್ದರೆ, ನಾವು ಕುಟುಂಬ ಸಮೇತರಾಗಿ ಬಂದು ಜಿಲ್ಲಾಧಿಕಾರಿಗಳಿಗೆ ತುಮಕೂರು ಜಿಲ್ಲೆಯ ಸಂಘಟನೆಗಳ ಮುಖಾಂತರ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ಸಿದ್ದರಿದ್ದೇವೆ” ಎಂದು ನೊಂದ ಮಹಿಳೆಯ ಮಗನಾದ ಸಂದೀಪ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವರದಿ: ಯೋಗೀಶ್ ಮೇಳೇಕಲ್ಲಹಳ್ಳಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB