ಕೊರಟಗೆರೆ: ತಾಲ್ಲೂಕಿನ ಕ್ಯಾಮೇನಹಳ್ಳಿ ಶ್ರೀಆಂಜನೇಯ ಗರ್ಭಗುಡಿಯ ಪ್ರಾಣದೇವರ ಪೂಜೆಗೆ ಪರಿಚಾರಕ ಕೃಷ್ಣಚಾರ್ ಅವರಿಗೆ ಅವಕಾಶ ನೀಡಲಾಗಿದ್ದು, ಬ್ರಹ್ಮರಥೋತ್ಸವದ ಉತ್ಸವಮೂರ್ತಿಗೆ ದೇವರಾಯನ ದುರ್ಗದ ಅರ್ಚಕ ಲಕ್ಷ್ಮೀನಾರಾಯಣ್ ಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಮುಜರಾಯಿ ಇಲಾಖೆ, ಆಂಜನೇಯ ವ್ಯವಸ್ಥಾಪನಾ ಸಮಿತಿ ಮತ್ತು ಸ್ಥಳೀಯ ಭಕ್ತರ ಭಾವನೆಗಳಿಗೆ ತಾತ್ಕಾಲಿಕವಾಗಿ ಸಮಾಧಾನ ಪಡಿಸುವ ಕೆಲಸ ಮಾಡಿದೆ.
ಕೊರಟಗೆರೆ ತಾಲ್ಲೂಕಿನ ಸುಪ್ರಸಿದ್ದ ಪುಣ್ಯಕ್ಷೇತ್ರ ಕ್ಯಾಮೇನಹಳ್ಳಿಯ ಶ್ರೀಆಂಜನೇಯ ಸ್ವಾಮಿ ದೇವಾಲಯದ ಅರ್ಚಕ ನೇಮಕಾತಿ ವಿಚಾರದಲ್ಲಿ ಸೃಷ್ಟಿಯಾಗಿದ್ದ ಗೊಂದಲ ತಾತ್ಕಾಲಿಕವಾಗಿ ಮುಕ್ತಾಯವಾಗಿದೆ. ಬ್ರಹ್ಮ ರಥೋತ್ಸವ ಕಾರ್ಯಕ್ರಮ ಮುಗಿದ ಬಳಿಕ ದೇವರಾಯನ ದುರ್ಗದ ಅರ್ಚಕ ಲಕ್ಷ್ಮೀನಾರಾಯಣ್ ಮತ್ತೆ ಹಿಂದಕ್ಕೆ ತೆರಳಿದ್ದಾರೆ. ಪ್ರಸ್ತುತ ಇರುವ ಪರಿಚಾರಕರೇ ಆಂಜನೇಯ ಪ್ರಾಣದೇವರ ಅರ್ಚಕರಾಗಿ ಪೂಜಾ ಕಾರ್ಯಕ್ರಮ ನೇರವೆರಿಸಲಿದ್ದಾರೆ.
5 ಸಾವಿರ ವರ್ಷಗಳ ಇತಿಹಾಸವುಳ್ಳ ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಮತ್ತು ಉತ್ಸವ ಕಾರ್ಯಕ್ರಮಗಳು ಸ್ಥಗೀತ ಆಗಿರುವ ಇತಿಹಾಸವೇ ಇಲ್ಲ. ಕೊರೊನಾ ರೋಗದ ನೆಪದಿಂದ ಈಗ ಮೊದಲ ಸಲ ಬ್ರಹ್ಮ ರಥೋತ್ಸವ ಸರಕಾರದ ಆದೇಶದಂತೆ ರದ್ದಾಗಿ ಕೊರೊನಾ ನಿಯಮ ಪಾಲನೆಯಂತೆ ಆಂಜನೇಯ ಸ್ವಾಮಿಯ ಪೂಜಾ ಕಾರ್ಯಕ್ರಮ ಮತ್ತು ಭಕ್ತರಿಗೆ ದರ್ಶನದ ವ್ಯವಸ್ಥೆಯು ನಡೆದಿದೆ.
ಕ್ಯಾಮೇನಹಳ್ಳಿಯ ಆಂಜನೇಯ ಬ್ರಹ್ಮ ರಥೋತ್ಸವಕ್ಕೆ ಕರುನಾಡಿನ ಹತ್ತಾರು ಜಿಲ್ಲೆಗಳಿಂದ ಭಕ್ತರು ಆಗಮಿಸುವುದು ವಾಡಿಕೆಯಾಗಿದೆ. ಜಾತ್ರೆಯನ್ನು ರದ್ದು ಮಾಡಿರುವ ಪರಿಣಾಮ ಲಕ್ಷಾಂತರ ರೂ. ವಹಿವಾಟು ನಡೆಯದೇ ವರ್ತಕರಿಗೆ ನಷ್ಟವಾಗಿದೆ. ರಥೋತ್ಸವದ ಸೊಬಗನ್ನು ಸವಿಯಲು ಆಗಮಿಸಿದ್ದ ಭಕ್ತರಿಗೆ ನಿರಾಸೆಯಾಗಿ ಸರಕಾರದ ವಿರುದ್ದ ಹಿಡಿಶಾಪ ಹಾಕಿರುವ ಘಟನೆಯು ನಡೆದಿದೆ.
ವರದಿ: ಮಂಜುಸ್ವಾಮಿ.ಎಂ.ಎನ್. , ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB