ಕುಣಿಗಲ್: ಶಾಸಕ ಡಾ.ರಂಗನಾಥ್ ಅವರು ನವರಾತ್ರಿ ಒಂಬತ್ತು ದಿನಗಳ ಉಪವಾಸ ಮುಗಿಸಿ, ತಾಲ್ಲೂಕಿನ ಗಡಿಭಾಗದ ವಗೆರಗೆರೆ ಗ್ರಾಮದ ದಲಿತ ಸಮುದಾಯದ ವಿಧವೆ ಜಯಮ್ಮ ಮನೆಗೆ ಭೇಟಿ ನೀಡಿದ್ದು, ಈ ವೇಳೆ ಜಯಮ್ಮನವರು ಶಾಸಕರಿಗೆ ವಿಶೇಷ ಭೋಜನ ಬಡಿಸಿದರು.
ಉಪವಾಸ ಅಂತ್ಯಗೊಳಿಸಲು ಬಂದ ಶಾಸಕರನ್ನು ದಲಿತ ಮುಖಂಡರು ಎತ್ತಿನಗಾಡಿ ಮೆರವಣಿಗೆಯೊಂದಿಗೆ ಸಂಭ್ರಮದಿಂದ ಸ್ವಾಗತಿಸಿದರು. ಊಟಕ್ಕೆ ಗ್ರಾಮೀಣ ಸೊಗಡಿನ ಮುದ್ದೆ, ಸುಪ್ಪಿನ ಸಾರು ಮತ್ತು ಪಾಯಸ ಬಡಿಸಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ಟ್ ಮತ್ತು ಬಿಬಿಎಂಪಿ ವಿಭಜನೆ ಕಾರ್ಯವನ್ನು ಕುಮಾರಸ್ವಾಮಿ ಅವರು ಮಾಡಲು ಯೋಚಿಸಿದಾಗ ಯಾವುದೇ ಟೀಕೆ ಇರಲಿಲ್ಲ. ಆದರೆ, ಡಿ.ಕೆ.ಶಿವಕುಮಾರ್ ಅವರು ಅದೇ ಕಾರ್ಯ ಮಾಡಲು ಹೋದಾಗ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕುಣಿಗಲ್ ತಾಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುವ ವಿಚಾರ ಹಾಗೂ ತಾಲ್ಲೂಕಿನ ನೀರಾವರಿ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾ ಶಾಸಕರು ಸಹಕರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕುಣಿಗಲ್ ಬೆಂಗಳೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬಂದರೆ ಈ ಸಮಸ್ಯೆಗಳ ಪರಿಹಾರ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಜನಾಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ವೇಳೆ ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ, ಮುಖಂಡ ಪಾಪಣ್ಣ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC