ಚಿಕ್ಕನಾಯಕನಹಳ್ಳಿ: ತಾಲೂಕಿನ ರೈತಬಾಂಧವರು ತಮ್ಮ ಕೃಷಿ ಬೆಳೆಗಳಿಗೆ ಕೀಟನಾಶಕ ಸಿಂಪಡಿಸಿದ ನಂತರ, ಆ ಜಮೀನುಗಳಲ್ಲಿ ಕುರಿ, ಮೇಕೆ, ದನ ಹಾಗೂ ಇತರೆ ಜಾನುವಾರುಗಳನ್ನು ಮೇಯಲು ಬಿಡಬಾರದು ಎಂದು ಸಹಾಯಕ ಕೃಷಿ ನಿರ್ದೇಶಕರಾದ ಶಿವರಾಜ್ ಕುಮಾರ್ ಅವರು ಮನವಿ ಮಾಡಿದ್ದಾರೆ.
ಕೀಟನಾಶಕ ಸಿಂಪಡಿಸಿದ ಹುಲ್ಲು ಮತ್ತು ಎಲೆಗಳನ್ನು ತಿನ್ನುವುದರಿಂದ ಜಾನುವಾರುಗಳಿಗೆ ವಿಷಪ್ರಾಶನವಾಗಿ ಪ್ರಾಣಾಪಾಯ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ರೈತರು ಮತ್ತು ಜಾನುವಾರು ಮಾಲೀಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೇಟಿಂಗ್ ಪೀರಿಯಡ್ ಪಾಲಿಸಿ: ಕೀಟನಾಶಕ ಸಿಂಪಡಿಸಿದ ತಕ್ಷಣ ಜಾನುವಾರುಗಳನ್ನು ಜಮೀನಿನಲ್ಲಿ ಮೇಯಲು ಬಿಡಬಾರದು. ಔಷಧದ ಪ್ರಭಾವ ತಗ್ಗುವ ನಿರ್ದಿಷ್ಟ ಸಮಯ (ವೇಟಿಂಗ್ ಪೀರಿಯಡ್) ಮುಗಿದ ನಂತರವಷ್ಟೇ ಮೇಯಿಸಲು ಅವಕಾಶ ನೀಡಬೇಕು.
ಎಚ್ಚರಿಕೆ ಫಲಕ ಕಡ್ಡಾಯ: ಕೀಟನಾಶಕ ಸಿಂಪಡಿಸಿದ ಜಮೀನಿನ ಮಾಲೀಕರು, ಪ್ರವೇಶದ್ವಾರದಲ್ಲಿ ಅಥವಾ ಎಲ್ಲರಿಗೂ ಸ್ಪಷ್ಟವಾಗಿ ಕಾಣಿಸುವ ಸ್ಥಳದಲ್ಲಿ “ಈ ಜಮೀನಿಗೆ ಕೀಟನಾಶಕ ಸಿಂಪಡಿಸಲಾಗಿದೆ. ದಯವಿಟ್ಟು ಕುರಿ, ಮೇಕೆ, ದನ ಹಾಗೂ ಇತರೆ ಜಾನುವಾರುಗಳನ್ನು ಮೇಯಲು ಬಿಡಬೇಡಿ” ಎಂಬ ಸೂಚನಾ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು.
ಜಾನುವಾರುಗಳು ವಿಷಪೂರಿತ ಹುಲ್ಲು ತಿಂದು ಅನಾಹುತಕ್ಕೊಳಗಾಗುವುದನ್ನು ತಡೆಯಲು ಮತ್ತು ಜಾನುವಾರು ಮಾಲೀಕರಿಗೆ ಉಂಟಾಗಬಹುದಾದ ಆರ್ಥಿಕ ನಷ್ಟವನ್ನು ತಪ್ಪಿಸಲು ಪ್ರತಿಯೊಬ್ಬ ರೈತರೂ ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕರು ಕೋರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


