ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲ್ಲೂಕಿನ ಕೆಆರ್ಎಸ್ನ ಬಜಾರ್ ಲೈನ್ ನಲ್ಲಿ ನಡೆದಿದೆ.
ಗುಜರಾತ್ ಮೂಲದ ಲಕ್ಷ್ಮೀ (26), ರಾಜ್ (12), ಕೋಮಲ್ (7), ಕುನಾಲ್ (4), ಗೋವಿಂದ (8) ಕೊಲೆಯಾಗಿದ್ದಾರೆ. ಬಜಾರ್ ಲೈನ್ನಲ್ಲಿ ವಾಸವಿದ್ದ ಈ ಕುಟುಂಬದವರ ಮನೆಗೆ ನಿನ್ನೆ ತಡ ರಾತ್ರಿ ನುಗ್ಗಿರುವ ದುಷ್ಕರ್ಮಿಗಳು, ಐವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ವ್ಯಾಪಾರಿ ಸಮುದಾಯವಾದ ಬೈಯಾದ್ ಜನಾಂಗಕ್ಕೆ ಸೇರಿರುವ ಗಂಗರಾಮ್ ಅವರ ಪತ್ನಿ ಲಕ್ಷ್ಮಿ ಮತ್ತು ಅವರ ಮಕ್ಕಳಾದ ರಾಜ್, ಕೋಮಲ್, ಕುನಾಲ್ ಮತ್ತು ಗಂಗರಾಮ್ ಅವರ ಅಣ್ಣನ ಮಗ ಗೋವಿಂದ ಕೊಲೆಯಾದವರು. ಗಂಗರಾಮ್ ಮತ್ತು ಆತನ ಅಣ್ಣ ಇಬ್ಬರು ಬಟ್ಟೆ ವ್ಯಾಪಾರಕ್ಕೆಂದು ಕಳೆದ ಹತ್ತು ದಿನಗಳ ಹಿಂದೆ ಹೊರ ಹೋಗಿದ್ದರು. ಲಕ್ಷ್ಮೀ ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿದ್ದರು. ನಿನ್ನೆ ತಡ ರಾತ್ರಿ ಈ ದುರ್ಘಟನೆ ನಡೆದಿದೆ.
ಹತ್ಯೆ ಮಾಡಿರುವ ಹಂತಕರು ಮನೆಯ ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ಇಂದು ಬೆಳಗ್ಗೆ ನೆರೆ ಮನೆಯ ಸೀತಾಬಾಯಿ ಎಂಬುವರು ಮನೆ ಬಳಿ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಕೊಲೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ.ಮಾಹಿತಿ ತಿಳಿದ ತಕ್ಷಣ ಕೆಆರ್ಎಸ್ ಠಾಣೆಯ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ. ದಕ್ಷಿಣ ವಲಯದ ಐಜಿಪಿ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB