ಗುಬ್ಬಿ: ಪಟ್ಟಣದ ಆದಿಶಕ್ತಿ ಶ್ರೀ ಗ್ರಾಮದೇವತೆ ಅಮ್ಮನವರ ಪುರಾತನ ದೇವಾಲಯವನ್ನು ಮೂಲ ಸ್ಥಳದಲ್ಲೇ ಜೀರ್ಣೋದ್ಧಾರ ನಡೆಸಿ ನೂತನ ದೇವಾಲಯವನ್ನು ಹದಿನೆಂಟು ಕೋಮಿನ ಭಕ್ತರ ಸಹಕಾರದಲ್ಲಿ ನವೆಂಬರ್ 29, 30 ಮತ್ತು ಡಿಸೆಂಬರ್ 1 ರಂದು ಮೂರು ದಿನಗಳ ಕಾಲ ಧಾರ್ಮಿಕ ವಿಧಿವತ್ತಾಗಿ ದೇವತಾಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಿ.ಎನ್.ಬೆಟ್ಟಸ್ವಾಮಿ ತಿಳಿಸಿದರು.
ಪಟ್ಟಣದ ಹಳೇ ಸಂತೆ ಮೈದಾನದ ಬಳಿಯಿರುವ ಗದ್ದುಗೆ ಗ್ರಾಮದೇವತೆ ದೇವಾಲಯ ಬಳಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇತಿಹಾಸ ಪ್ರಸಿದ್ಧ ಶ್ರೀ ಗ್ರಾಮದೇವತೆ ಗುಬ್ಬಿ ಹಳೇ ಗ್ರಾಮದ ಹೃದಯ ಭಾಗದಲ್ಲಿದ್ದು ದೇವಸ್ಥಾನ ಕಟ್ಟಡದ ಶಿಥಿಲಾವಸ್ಥೆ ಕಂಡ ನಂತರದಲ್ಲಿ ಗುಬ್ಬಿ ಪಟ್ಟಣದ ಹದಿನೆಂಟು ಕೋಮಿನ ಮುಖಂಡರು ಸಭೆ ಸೇರಿ ಚರ್ಚಿಸಿ ಜೀರ್ಣೋದ್ದಾರ ಕಾರ್ಯಕ್ಕೆ ಚಾಲನೆ ನೀಡಲಾಗಿ 13 ವರ್ಷದ ನಂತರ ಸಂಪೂರ್ಣಗೊಳಿಸಲಾಗಿದೆ ಎಂದರು.
ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮವನ್ನು ಈ ತಿಂಗಳ 29 ರಂದು ಪೂರ್ಣಕುಂಭದ ಮೆರವಣಿಗೆ ಮೂಲಕ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ನಗರದ ರಾಜ ಬೀದಿಯಲ್ಲಿ ಹೊರಟು ಪಣಗಾರರ ಬೀದಿಯಲ್ಲಿನ ಗ್ರಾಮದೇವತೆಯ ಮೂಲ ಸ್ಥಳದ ನೂತನ ದೇವಾಲಯ ತಲುಪಿ, 30ನೇ ತಾರೀಕು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ವಿವಿಧ ರೀತಿಯ ಹೋಮ ಹವನ ಮಾಡುವ ಮೂಲಕ ದೇವತಾರಾಧನೆಯ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಡಿಸೆಂಬರ್ 1 ರಂದು ಶ್ರೀ ಅಟವೀ ಜಂಗಮ ಮಠದ ಶ್ರೀ ಆಟವಿ ಶಿವಲಿಂಗ ಸ್ವಾಮೀಜಿ ಚಿಕ್ಕತೂಟ್ಲುಕೆರೆ ಹಾಗೂ ಗುಬ್ಬಿ ಶ್ರೀ ತೊರೇಮಠಾಧ್ಯಕ್ಷರಾದ ಶ್ರೀ ರಾಜಶೇಖರಮಹಾ ಸ್ವಾಮೀಜಿಗಳವರ ಅಮೃತ ಹಸ್ತದಿಂದ ಗೋಪುರ ಕಳಸ ಸ್ಥಾಪನೆ ನಡೆಯಲಿದೆ. ನಂತರ ನಡೆಯುವ ಧಾರ್ಮಿಕ ಸಮಾರಂಭವನ್ನು ಸಂಸದರಾದ ಜಿ.ಎಸ್.ಬಸವರಾಜು ಉದ್ಘಾಟನೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್ ಅತಿಥಿಗಳಾಗಿ ಭಾಗವಹಿಸುವರು, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್, ಸಚಿವ ವಿ.ಸೋಮಣ್ಣ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ ಎಲ್ಲಾ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಟೇಲ್ ಕೆಂಪೇಗೌಡ ಮಾತನಾಡಿ, ಕಳೆದ 13 ವರ್ಷದ ಹಿಂದೆ ದೇವಾಲಯ ಜೀರ್ಣೋದ್ಧಾರದ ಕಾರ್ಯವನ್ನು ಆರಂಭಿಸಲಾಯಿತು ಅಂದಿನಿಂದ ಇಂದಿನವರೆಗೂ ದೇವಸ್ಥಾನದ ನಿರ್ಮಾಣಕ್ಕೆ ಅಂದಾಜು 1 ಕೋಟಿ ರೂ.ಗಳ ಕ್ರಿಯಾ ಯೋಜನೆ ರೂಪಿಸಿ ಕೆಲಸ ಪ್ರಾರಂಭಿಸಲಾಯಿತು. ಗ್ರಾಮದೇವತೆ ನೆಲೆಸಿರುವ ಮೂಲ ಸ್ಥಳದಲ್ಲೇ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಅಗತ್ಯ ಸ್ಥಳ ನೀಡಲು ಕುರುಹಿನಶೆಟ್ಟಿ ಸಿದ್ದಲಿಂಗಪ್ಪ ವಂಶಸ್ಥರ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ. ಇದರ ಜೊತೆಗೆ ಗುಬ್ಬಿ ಗ್ರಾಮದ ಹದಿನೆಂಟು ಕೋಮಿನ ಜನತೆ ಆರ್ಥಿಕ ನೆರವು ಮಾಡಿದ್ದರಿಂದ ಇಂದು ಈ ಸುಂದರ ದೇವಾಲಯ ನಿರ್ಮಾಣಕ್ಕೆ ಸಹಕಾರವಾಯಿತು ಎಂದು ತಿಳಿಸಿದರು.
ನಾಳೆ ನಡೆಯುವ ದೇವಸ್ಥಾನ ಪ್ರಾರಂಭೋತ್ಸವ ಕಾರ್ಯಕ್ರಮದ ದಿನದಿಂದ ಭಕ್ತರ ಸಹಕಾರದಲ್ಲಿ ಮೂರು ದಿನಗಳ ಕಾಲ ದಾಸೋಹ ಕಾರ್ಯ ನಡೆಸಲಾಗುವುದು. ಈ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಗುಬ್ಬಿ ತಾಲ್ಲೂಕಿನ ಎಲ್ಲಾ ಭಕ್ತರು ಆಗಮಿಸಿ ತಾಯಿಯ ಆಶಿರ್ವಾದ ಪಡೆಯುವ ಮೂಲಕ ಈ ಕಾರ್ಯಕ್ರಮ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು.
ವರದಿ: ಯೋಗೀಶ್ ಮೇಳೇಕಲ್ಲಹಳ್ಳಿ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700