ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಯಲ್ಲಿ ಭಾಗಿಯಾಗುವುದನ್ನು ನಿಷೇಧಿಸಿ ಜಾರಿಗೊಳಿಸಲಾಗಿದ್ದ ಕಾನೂನನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆರವುಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ಬರೋಬ್ಬರಿ 58 ವರ್ಷಗಳ ಕಾನೂನು ರದ್ದಾದಂತೆ ಆಗಿದೆ. ಆದರೆ ಈ ಬಗ್ಗೆ ಪರ ವಿರೋಧಗಳು ಜೋರಾಗಿಯೇ ನಡೆಯುತ್ತಿದೆ. ಇದರ ನಡುವೆ ಅಂದು ಇಂದಿರಾಗಾಂಧಿ ಯಾಕೆ ಈ ಕಾನೂನನ್ನು ಜಾರಿಗೊಳಿಸಿದರು, ಇದರ ಉದ್ದೇಶ ಏನಾಗಿತ್ತು ಎಂಬ ಚರ್ಚೆಗಳು ನಡೆಯುತ್ತಿವೆ.
ಸರ್ಕಾರಿ ನೌಕರರು ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಮತ್ತು ಅದರ ಜೊತೆ ಸಂಪರ್ಕ ಇಟ್ಟುಕೊಳ್ಳಬಾರದು ಎಂಬುದು 1966ರಲ್ಲಿ ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ಮಾಡಲಾಗಿದ್ದ ಆದೇಶ. ಇದರ ಉದ್ದೇಶ ಏನೆಂದು ನೋಡ ಹೊರಟಾಗ ನಮಗೆ ಕಾಣಸಿಗುವುದು ಆ ಒಂದು ಘಟನೆ. ಏನದು?
1966ರ ನ 7ರಂದು ಸಂಸತ್ ಮುಂಭಾಗದಲ್ಲಿ ಗೋಹತ್ಯೆ ವಿರುದ್ಧ ಭಾರೀ ದೊಡ್ಡ ಪ್ರತಿಭಟನೆ ನಡೆದಿತ್ತು. ಲಕ್ಷಾಂತರ ಜನರನ್ನು ಆರ್ಎಸ್ಎಸ್ – ಜನಸಂಘ ಸೇರಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ಆಯೋಜಿಸಿತ್ತು. ಈ ವೇಳೆ ನಡೆದ ಗೋಲಿಬಾರ್ನಲ್ಲಿ ಬಹಳಷ್ಟು ಜನ ಮೃತಪಟ್ಟಿದ್ದರು. ಈ ಪ್ರತಿಭಟಟನೆಯ ಬಳಿಕ ಇಂದಿರಾ ಗಾಂಧಿ, 1966ರ ನ 30ರಂದು ಸರ್ಕಾರಿ ಸಿಬ್ಬಂದಿ ಆರ್ಎಸ್ಎಸ್ ಸೇರದಂತೆ ನಿರ್ಬಂಧಿಸಿದರು.
ಆರ್ ಎಸ್ ಎಸ್ ಜೊತೆ ಜಮಾತೆ ಇಸ್ಲಾಮಿಯಾ ಸದಸ್ಯತ್ವಕ್ಕೂ ನಿರ್ಬಂಧ ಹೇರಲಾಗಿತ್ತು. ಈ ಸಂಘಗಳ ಸದಸ್ಯತ್ವದಿಂದಾಗಿ ಸರ್ಕಾರದ ಮೇಲೆ ಪ್ರಭಾವ ಬೀರಬಹುದು. ಸಾಮಾಜಿಕ ನ್ಯಾಯದ ಮೇಲೆ ಎರಡೂ ಸಿದ್ಧಾಂತಗಳಿಂದ ಪ್ರಭಾವ ಎಂದು ಹೇಳಿ ಸರ್ಕಾರ ನಿಷೇಧ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.
ಆದರೆ ಇದೀಗ RSS ಚಟುವಟಿಕೆಗಳಲ್ಲಿ ಭಾಗವಹಿಸುವ ನಿಷೇಧ ವಾಪಸ್ ಪಡೆದು ಕೇಂದ್ರ ಗೃಹ ಸಚಿವಾಲಯ ಮಹತ್ವದ ಆದೇಶ ಹೊರಡಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ಕಾಂಗ್ರೆಸ್ ನಾಯಕರು ಅಧಿಕೃತ ಆದೇಶದ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 58 ವರ್ಷಗಳ ಹಿಂದೆ ನೀಡಲಾದ ‘ಅಸಂವಿಧಾನಿಕ’ ಸೂಚನೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಿಂಪಡೆದಿದೆ ಎಂದು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


