ತುಮಕೂರು: ಕನ್ನಡಕ್ಕೆ ಮೊದಲ ಪ್ರತಿಷ್ಟಿತ ಬೂಕರ್ ಪ್ರಶಸ್ತಿಯನ್ನು ತಂದು ಕೊಟ್ಟ ಲೇಖಕಿ ಬಾನು ಮುಷ್ತಾಕ್ ಮತ್ತು ಈ ಕೃತಿಯನ್ನು ಸಮರ್ಥವಾಗಿ ಇಂಗ್ಲಿಷ್ ಗೆ ಅನುವಾದಿಸಿ ಬೂಕರ್ ಪುರಸ್ಕಾರ ಬರಲು ಕಾರಣಕರ್ತರಾದ ಅನುವಾದಕಿ ದೀಪಾ ಭಸ್ತಿಯವರನ್ನೂ ಸಹ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್.ಸಿದ್ಧಲಿಂಗಪ್ಪ ಅಭಿನಂದಿಸಿದ್ದಾರೆ.
ಈ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಅನುವಾದ ಸಾಹಿತ್ಯದ ಮಹತ್ವವೂ ರುಜುವಾತಾಗಿದೆ. ಈ ಮೊದಲೇ ಕನ್ನಡದ ಅನೇಕ ಕೃತಿಗಳು ಇಂಗ್ಲೀಷ್ ಗೆ ಸಮರ್ಥವಾಗಿ ಅನುವಾದವಾಗಿದ್ದರೆ ನೋಬಲ್ ಪುರಸ್ಕಾರಕ್ಕೂ ಸಹ ಅರ್ಹವಾಗುತ್ತಿದ್ದವು. ಬಾನು ಮುಷ್ಕಾಕ್ ಅವರ ‘ಹಸೀನಾ’ ಕಥೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ ಚಿತ್ರ ರಾಷ್ಟ್ರ ಪುರಸ್ಕಾರವನ್ನು ಪಡೆದಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇನ್ನೊಮ್ಮೆ ಬಾನು ಮುಷ್ತಾಕ್ ಅವರಿಂದ ಅಂತಹದೇ ಇತಿಹಾಸ ಸೃಷ್ಟಿಯಾಗಿದೆ ಎಂದು ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಪ್ರಶಂಸಿಸಿದ್ದಾರೆ.
ಬಾನು ಮುಷ್ತಾಕ್ ಅವರು 1990ರಿಂದ 2023ರ ನಡುವೆ ಬರೆದ ಹನ್ನೆರಡು ಕಥೆಗಳ ಇಂಗ್ಲೀಷ್ ಅನುವಾದವನ್ನು ದೀಪಾ ಭಸ್ತಿಯವರು “ಹಾರ್ಟ್ ಲ್ಯಾಂಪ್” ಶೀರ್ಷಿಕೆಯಲ್ಲಿ ಅನುವಾದ ಮಾಡಿದ್ದರು. ಈ ಕೃತಿಗೆ ಮೊದಲು ಅಂತರರಾಷ್ಟ್ರೀಯ ಪೆನ್ ಟ್ರಾನ್ಸ್ ಲೇಟ್ಸ್ ಪ್ರಶಸ್ತಿ ದೊರಕಿತು. ನಂತರ ಸಂಕಲನದ ‘ರೆಡ್ ಲುಂಗಿ’ ಕಥೆ, 2024ರ ಜೂನ್ ಜುಲೈ ತಿಂಗಳ ದ ಪ್ಯಾರಿಸ್ ರಿವ್ಯೂ ಮ್ಯಾಗಝೀನ್ ನಲ್ಲಿ ಪ್ರಕಟವಾಯಿತು. ಸಂಕಲನದ ಇನ್ನೊಂದು ಕಥೆ “ಒಮ್ಮೆ ಹೆಣ್ಣಾಗು ಪ್ರಭುವೆ”ಯ ಅನುವಾದ ಇನ್ನೊಂದು ಸಾಹಿತ್ಯಕ ಪತ್ರಿಕೆ ಯಾದ “ದಿ ಬ್ಯಾಫ್ಲರ್”ನಲ್ಲಿ ಪ್ರಕಟವಾಯಿತು.
ನಂತರ ಹಾರ್ಟ್ ಲ್ಯಾಂಪ್ ಕಥಾ ಸಂಕಲನವು ಅಮೆರಿಕದಲ್ಲಿ ಹಾಗೂ ಬ್ರಿಟನ್ ನಲ್ಲಿ ನಂತರ ಭಾರತದಲ್ಲಿ ಪೆಂಗ್ವಿನ್ ರಾಂಡಮ್ ಹೌಸ್ ನಿಂದ 2025ರ ಏಪ್ರಿಲ್ ನಲ್ಲಿ ಬಿಡುಗಡೆಯಾಗಿದ್ದು ಪ್ರಕಟಣಾ ಪೂರ್ವದಲ್ಲಿಯೇ ಕಥಾ ಸಂಕಲನ 2025 ರ ಅಂತರ ರಾಷ್ಟ್ರೀಯ ಬುಕ್ಕರ್ ಬಹುಮಾನದ ಪ್ರಧಾನ ಸುತ್ತಿಗೆ ಆಯ್ಕೆಯಾಗಿದ್ದು ಈಗ ಅಂತಿಮವಾಗಿ ಪುರಸ್ಕಾರವನ್ನು ಪಡೆದಿದೆ.
ಇದು ಕನ್ನಡಕ್ಕೆ ದೊರೆತ ಮೊದಲ ಬೂಕರ್ ಪುರಸ್ಕಾರ ಮತ್ತು ಭಾರತಕ್ಕೆ ದೊರೆತ ಆರನೆಯದು ಎಂದು ಪ್ರಸ್ತಾಪಿಸಿರುವ ಕೆ.ಎಸ್.ಸಿದ್ದಲಿಂಗಪ್ಪನವರು ಪುರಸ್ಕಾರದ ಹಾದಿಯನ್ನು ನೆನಪು ಮಾಡಿಕೊಂಡರು. ಬಾನು ಮುಷ್ತಾಕ್ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ನಿಕಟ ಸಂಪರ್ಕ ಇಟ್ಟುಕೊಂಡವರು. ಮಂಡ್ಯದಲ್ಲಿ ನಡೆದ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು “ಪುನಶ್ಚೇತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು” ವಿಚಾರ ಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿ ಬಹು ಮೌಲಿಕವಾದ ಮಾತುಗಳನ್ನಾಡಿದ್ದರು. ವಿಧಾನ ಸೌಧದ ಆವರಣದಲ್ಲಿ ಅಯೋಜಿತವಾಗಿದ್ದ ‘ಪುಸ್ತಕ ಮೇಳ’ದ ಸಂದರ್ಭದಲ್ಲಿ 2.03.2025ರಂದು ನಡೆದ “ಕನ್ನಡ ಸಾಹಿತ್ಯದಲ್ಲಿ ಸರ್ವ ಸಮಭಾವ ಚಿಂತನೆಗಳು” ಗೋಷ್ಟಿಯಲ್ಲಿ ಭಾಗವಹಿಸಿದ್ದನ್ನು ಸ್ಮರಿಸಬಹುದು ಎಂದು ಕೆ.ಎಸ್.ಸಿದ್ಧಲಿಂಗಪ್ಪ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————