ತುಮಕೂರು: ಬಿಜೆಪಿಯನ್ನು ಕಟುವಾಗಿ ಖಂಡಿಸುವ ಧೈರ್ಯ ಕಾಂಗ್ರೆಸ್ ಗೆ ಇಲ್ಲ, ಆದರೆ ಆ ಧೈರ್ಯ ಕುಮಾರಸ್ವಾಮಿ ತೋರಿದ್ದಾರೆ. ಹಾಗಾಗಿ ಕುಮಾರಸ್ವಾಮಿಗೆ ನಾನು ಅಭಿನಂದಿಸುತ್ತೇನೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ತುಮಕೂರು ನಗರದ ಖಾಸಗಿ ಹೊಟೇಲ್ ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಮುಂದಿಟ್ಟುಕೊಂಡು ಬಿಜೆಪಿ ವಿನಾಕಾರಣ ವಿವಾದ ಸೃಷ್ಟಿಸುತ್ತಿದೆ. ಆಜಾನ್ ಕೂಗೋದು ನಿನ್ನೆ ಮೊನ್ನೆಯದಲ್ಲ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ನಾವೆಲ್ಲ ಭಾಷಣ ಮಾಡುವಾಗ ಆಜಾನ್ ಕೇಳಿದ್ರೆ ಮಧ್ಯ ಭಾಷಣ ನಿಲ್ಲಿಸಿ ಗೌರವಿಸುತ್ತೇವೆ. ಇಂಥಹುದರಲ್ಲಿ ಬಿಜೆಪಿ ವಿವಾದ ಸೃಷ್ಟಿಸಿದೆ. ಬಿಜೆಪಿ ಧೋರಣೆ ಖಂಡಿಸಲು ಕಾಂಗ್ರೆಸ್ ಗೆ ಧೈರ್ಯ ಇಲ್ಲ ಎಂದು ಅವರು ಸ್ವಪಕ್ಷವನ್ನು ಟೀಕಿಸಿದರು.
ಎಚ್.ಡಿ.ಕುಮಾರ್ ಸ್ವಾಮಿ ಮಾತ್ರ ಮುಲಾಜಿಲ್ಲದೆ ಖಂಡಿಸ್ತಾರೆ. ಈ ವಿಚಾರಕ್ಕೆ ಕುಮಾರ್ ಸ್ವಾಮಿಯನ್ನು ಅಭಿನಂದಿಸುತ್ತೇನೆ. ಯಾರೋ ಪೊಲಿಗಳು ಭಿತ್ತಿಪತ್ರ ಹಂಚಿ ಬಿಡುತ್ತಾರೆ. ಅದಕ್ಕೆಲ್ಲಾ ಬೆಲೆ ಕೊಡೊಕಾಗುತ್ತಾ ಎಂದು ಕುಮಾರಸ್ವಾಮಿ ಹೇಳುವ ತಾಕತ್ತು ತೋರಿದ್ದಾರೆ. ಅವರಿಗೆ ಧನ್ಯವಾದಗಳು.
ನಾವು ಕಾಂಗ್ರೆಸ್ ನವರು ನಮಗೆ ದಬ್ಬಣ ಚುಚ್ಚಬೇಕು. ಕೆಲವರು ಸೂಜಿ ಚುಚ್ಚಿದರೂ ಎಚ್ಚರವಾಗ್ತಾರೆ. ಆದರೆ ನಾವು ಕಾಂಗ್ರೆಸ್ ನವರಿಗೆ ದಬ್ಬಣ ಚುಚ್ವಬೇಕು. ಹಾಗಾಗಿ ನಾವು ಪಕ್ಷದ ಪ್ರಚಾರದಲ್ಲಿ ಹಿಂದೆ ಉಳಿದಿದ್ದೇವೆ ಎಂದು ಕೆ.ಎನ್.ರಾಜಣ್ಣ ಹೇಳಿದರು.