ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮವಾದ ಜಗನ್ ಜೀವನ್ ರಾಮ್ ರವರ 115ನೇ ಜಯಂತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತಾನಾಡಿದ ಸಿದ್ದರಾಮಯ್ಯ, ಈ ದೇಶ ಶೈಕ್ಷಣಿಕವಾಗಿ ಸಾಕಷ್ಟು ಮುಂದುವರೆದಿದ್ದರೂ ಸಹ ಜಾತಿ ವ್ಯವಸ್ಥೆಯಿಂದ ಹೊರಬಂದಿಲ್ಲ, ನಮ್ಮ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಮೊದಲು ಮನುಷ್ಯ ಮನುಷ್ಯನನ್ನು ಪ್ರೀತಿಸುವುದನ್ನು ಕಲಿಯಬೇಕು, ಆದರೆ ಮನುಷ್ಯ ಮನುಷ್ಯರನ್ನು ಗೌರವಿಸುವಂತಹ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಬಿಜೆಪಿಯವರಲ್ಲಿಲ್ಲ ಎಂದರು.
ಸಮಾಜದ ಎಲ್ಲಾ ಜನಾಂಗದವರನ್ನು ಸಮಾನವಾಗಿ ಕಾಣುವಂತಹ ಮನಸ್ಥಿತಿ ಬಿಜೆಪಿ ಪಕ್ಷದವರಿಗಾಗಲಿ, ಆರ್.ಎಸ್.ಎಸ್,ನಂತಹ ಸಂಘಟನೆಗಳಿಗಾಗಲಿ ಇಲ್ಲ, ಏಕೆಂದರೆ ಅವರೇ ಈ ಸಮಾಜದಲ್ಲಿ ಮೇಲು-ಕೀಳು ಎಂಬ ಭಾವನೆಯನ್ನು ಹುಟ್ಟುಹಾಕಿದ್ದು. ಈ ದೇಶದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬಾಬೂ ಜಗಜೀವನರಾಂ ರಂತಹ ನಾಯಕರು ಹುಟ್ಟದಿದ್ದರೆ ಅಸ್ಪೃಶ್ಯತೆ ನಿವಾರಣೆ ಆಗುತ್ತಲೇ ಇರಲಿಲ್ಲ ಎಂದರು.
ಕೆಪಿಸಿಸಿ ರಾಜ್ಯಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿ, ಪರಿಶಿಷ್ಟ ಜಾತಿಗೆ ಸೇರಿದ ಜಗಜೀವನರಾಂರವರು ಈ ದೇಶದ ಶೋಷಿತ ವರ್ಗದ ಜನರ ರಕ್ಷಣೆಗಾಗಿ ಕಂಕಣಬದ್ಧರಾಗಿ ನಿಂತಿದ್ದರು. ಇವರು ಕಾರ್ಮಿಕ ಇಲಾಖೆ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕೈಗಾರಿಕೆಗಳ ಕಾರ್ಮಿಕರ ಜೊತೆಗೆ ಕೃಷಿ ಕಾರ್ಮಿಕರ ಪರವಾಗಿ ಹೋರಾಟ ಮಾಡಿ, ಹಸಿರುಕ್ರಾಂತಿಯನ್ನು ಮಾಡುವ ಮೂಲಕ ಈ ದೇಶಕ್ಕೆ ಮಾದರಿಯಾಗಿದ್ದಾರೆ. ಅವರು, ಸಾರಿಗೆ ಇಲಾಖೆಯಲ್ಲಿ, ರಕ್ಷಣಾ ಇಲಾಖೆಯಲ್ಲಿ ಮಂತ್ರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರಗಳು, ಅವರು ಮಾಡಿದ ಶಾಸನಗಳು ಇಂದು ದೇಶದ ದೊಡ್ಡ ಅಡಿಪಾಯವಾಗಿ ನಿಂತಿದೆ ಎಂದರು.
ಇಂತಹ ಮಹಾನ್ ನಾಯಕರ ಜೀವನದ ಸಾಧನೆಗಳನ್ನು ಯುವಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಕೆಪಿಸಿಸಿ ವತಿಯಿಂದ ರಾಜ್ಯಮಟ್ಟದ ಈ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂಬುದಾಗಿ ಅವರು ಹೇಳಿದರು.
ಚಿತ್ರದುರ್ಗ ಅಸಂಘಟಿತ ಕಾರ್ಮಿಕ ವಲಯದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್ ಮಾತನಾಡಿ, ಈ ರಾಜ್ಯದಲ್ಲಿನ ಆಡಳಿತರೂಢ ಬಿಜೆಪಿ ಸರ್ಕಾರ ಹಿಜಾಬ್, ಹಲಾಲ್ ನಂತಹ ಸಣ್ಣ ಸಣ್ಣ ವಿಚಾರಗಳನ್ನು ಕುರಿತು ಜನರ ಮನಸ್ಸಿನಲ್ಲಿ ವಿಷಬೀಜವನ್ನು ಬಿತ್ತಿ, ನಮ್ಮನ್ನು ಭಾಗ ಮಾಡಲು ಹೊರಟಿದ್ದಾರೆ. ಇವರೊಂದಿಗೆ ಮಾಧ್ಯಮಮಿತ್ರರು ಸಹ ಸೇರಿಕೊಂಡು ಸಣ್ಣ ವಿಚಾರಗಳನ್ನು ದೊಡ್ಡದಾಗಿ ಬಿಂಬಿಸುವ ಮೂಲಕ ಜನರಲ್ಲಿ ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದ್ದು, ಇದೆಲ್ಲವನ್ನೂ ಅರಿತಿರುವ ನಮ್ಮ ಜಿಲ್ಲೆಯ ಜನರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಮತಹಾಕುವ ಮೂಲಕ ಜಿಲ್ಲೆಯ ಆರಕ್ಕೆ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂಬುದಾಗಿ ಹೇಳಿದರು.
ಪ್ರಾಸ್ತಾವಿಕನುಡಿಗಳನ್ನಾಡಿದ ಮಾಜಿ ಸಚಿವ ಎಚ್.ಆಂಜನೇಯ, ಈ ದೇಶದ ಉಪಪ್ರಧಾನಿಯಾಗಿ ದಕ್ಷತೆಯನ್ನು ಮೆರೆದ ಏಕೈಕ ಸೋಲರಿಯದ ಜನನಾಯಕನೆಂದರೆ, ಬಾಬುಜಗಜೀವನ್ ರಾಂರವರು. ಈ ದೇಶದ ಶೋಷಿತರ ಹಕ್ಕಿಗಾಗಿ ಹೋರಾಡಿದ ಮಹಾಪುರುಷ, ಇವರು ಕೇಂದ್ರ ಸರ್ಕಾರದ ಕೃಷಿ ಸಚಿವರಾಗಿ, ರಕ್ಷಣಾ ಸಚಿವರಾಗಿ ಈ ದೇಶಕ್ಕಾಗಿ ಸಲ್ಲಿಸಿರುವ ಸೇವೆ ಅತ್ಯಂತ ಸ್ಮರಣೀಯವಾಗಿದೆ ಎಂದರು.
ಶೋಷಿತವರ್ಗದಿಂದ ಬಂದ ಬಾಬುಜಗಜೀವನ್ ರಾಂರವರು ಪಂಡಿತ್ ಜವಾಹರ್ ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ರ್ತಿ, ಶ್ರೀಮತಿ ಇಂದಿರಾಗಾಂಧಿಯವರಂತಹ ಮಹಾನ್ ನಾಯಕರ ಸಚಿವಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಿರುವ ಇವರು ಈ ದೇಶ ಕಂಡ ಅತ್ಯಂತ ದಕ್ಷ, ಧೀಮಂತ ನಾಯಕ ಇಂತಹ ಶ್ರೇಷ್ಠ ನಾಯಕರ ಜಯಂತಿಯನ್ನು ಕಾಂಗ್ರೆಸ್ ಪಕ್ಷವು ಆಚರಿಸುವ ಮೂಲಕ ದೇಶದ ಜನತೆಗೆ ಅವರ ಸಾಧನೆಗಳನ್ನು ಪರಿಚಯಿಸುತ್ತಿದೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬಿಜೆಪಿ ಮುಖಂಡರಾದ ಪಿ.ಎಸ್.ಆರಾಧ್ಯ ರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಮಾಜಿ ಸಚಿವರಾದ ಡಿ.ಸುಧಾಕರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧೃವನಾರಾಯಣ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಅಮರನಾಥ್, ಎಐಸಿಸಿ ಸೂರಜ್ ಹೆಗ್ಡೆ ಮಾಜಿಶಾಸಕರಾದ ಬಿ.ಜಿ.ಗೋವಿಂದಪ್ಪ, ಮೇಲ್ಮನೆ ಸದಸ್ಯರಾದ ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಾಜ್ ಪೀರ್, ಚಳ್ಳಕೆರೆ ಶಾಸಕ ರಘುಮೂರ್ತಿ, ಮಾಜಿ ಶಾಸಕಿ ಶ್ರೀಮತಿ ಜಯಮ್ಮ ಬಾಲರಾಜ್, ಜಿ.ಪಂ.ಮಾಜಿ.ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸುರೇಶ್ ಬಾಬು, ಮಾಜಿ ಜಿ.ಪಂ.ಸದಸ್ಯರಾದ ನಾಗೇಂದ್ರನಾಯ್ಕ, ಪಾಪಣ್ಣ, ಗೀತಾನಾಗಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿರಮೇಶ್, ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ, ಎಸ್.ಸಿ ವಿಭಾಗದ ಅಧ್ಯಕ್ಷ ಜಿ.ಎಲ್.ಮೂರ್ತಿ, ಅಸಂಘಟಿತ ಕಾರ್ಮಿಕರ ತಾಲ್ಲೂಕು ಅಧ್ಯಕ್ಷ ಶಿವಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಗುರುಪ್ರಸಾದ್, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಂಷುನ್ನೀಸಾ, ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಸಾದತ್ ಉಲ್ಲಾ, ದಾದಾಪೀರ್, ಸೇರಿದಂತೆ ನಗರಸಭೆ ಸದಸ್ಯರುಗಳು, ಅನೇಕ ಕಾಂಗ್ರೆಸ್ ಮುಖಂಡರು ಹಾಗೂ ಅಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ: ಮುರುಳಿಧರನ್ ಆರ್ ಹಿರಿಯೂರು. ( ಚಿತ್ರದುರ್ಗ – ದಾವಣಗೆರೆ)
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5