ಬಾಗಲಕೋಟೆ: ಹೆಣ್ಣು ಸಿಗುತ್ತಿಲ್ಲ ಎಂಬ ಕೊರಗಿನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಮದುವೆ ಮಾಡಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ನಡೆದಿದ್ದು, ಮದುವೆ ಬಳಿಕ ಬ್ರೋಕರ್ ಹಾಗೂ ವಿವಾಹವಾದ ಹೆಣ್ಣು ಇಬ್ಬರೂ ಪರಾರಿಯಾಗಿದ್ದಾರೆ.
ಮುಧೋಳದ ಸೋಮಶೇಖರ್ ಎಂಬವರು ಮೋಸ ಹೋದವರಾಗಿದ್ದಾರೆ.
ಸೋಮಶೇಖರ್ ಹೆಣ್ಣು ಸಿಗದೇ ಹೆಣ್ಣಿಗಾಗಿ ಅಲೆದಾಡುತ್ತಿರುವ ವಿಚಾರ ತಿಳಿದು ಹೆಣ್ಣು ಕೊಡಿಸ್ತೀವಿ ಎಂದು ಹೇಳಿ 4 ಲಕ್ಷ ಹಣಕ್ಕೆ ಬ್ರೋಕರ್ ಟೀಂ ಡಿಮ್ಯಾಂಡ್ ಮಾಡಿದ್ದರು. ಹೆಣ್ಣು ಸಿಗದ ಕೊರಗಿನಲ್ಲಿದ್ದ ಸೋಮಶೇಖರ್ ಇದಕ್ಕೆ ಒಪ್ಪಿಕೊಂಡಿದ್ದರು.
ಶಿವಮೊಗ್ಗದ ಮಹಿಳೆ ಮಂಜುಳಾ ಎಂಬವರನ್ನು ಕರೆತಂದು ಬಾಗಲಕೋಟೆ ಮುಧೋಳದ ಕಾಳಿಕಾದೇವಿ ದೇಗುಲದಲ್ಲಿ ವರ್ಷದ ಹಿಂದೆ ಮದುವೆ ನಡೆದಿತ್ತು. ಮದುವೆ ದಿನವೇ ಬ್ರೋಕರ್ ತಂಡವು ಪೂರ್ಣ 4 ಲಕ್ಷ ಹಣ ಪಡೆದಿತ್ತು.
ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಮಂಜುಳಾ ಎಸ್ಕೇಪ್ ಆಗಿದ್ದಳು. ಪತ್ನಿ ಬಗ್ಗೆ ವಿಚಾರಿಸಲು ಹೋದ ವೇಳೆ ಈಗಾಗಲೇ ಆಕೆಗೆ ಎರಡು ಮದುವೆಯಾದ ಬಗ್ಗೆ ಸುಳಿವು ಸಿಕ್ಕಿದೆ. ಹಣ ಹೊಡೆಯಲು ಮದುವೆಯಾದ ಮಹಿಳೆಯನ್ನೇ ಶಿವಮೊಗ್ಗದಿಂದ ಮುಧೋಳಕ್ಕೆ ಬ್ರೋಕರ್ ಟೀಂ ಕರೆ ತಂದಿತ್ತು. ಬ್ರೋಕರ್ ಟೀಮ್ ಗೆ ತಾನು ನೀಡಿದ 4 ಲಕ್ಷ ಹಣ ಮರಳಿಸುವಂತೆ ಸಂತ್ರಸ್ತ ಸೋಮಶೇಖರ್ ಮನವಿ ಮಾಡಿದ್ದಾರೆ. ಕೊನೆಗೆ ಹಣ ಬಾರದೇ ಇದ್ದಾಗ ಮುಧೋಳ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.
ಆರೋಪಿ ಸತ್ಯಪ್ಪ ಮತ್ತು ಮಂಜುಳಾ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಮುಧೋಳ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx