ತುಮಕೂರು: SSLC ಪರೀಕ್ಷಾ ಕೇಂದ್ರಗಳನ್ನು ಅವಲೋಕಿಸಲು ತಮಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ವಿರುದ್ಧ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಕೆ.ಟಿ. ತಿಪ್ಪೇಸ್ವಾಮಿ ಅವರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಅವರು ಪತ್ರ ಬರೆದಿದ್ದು, ರಾಜ್ಯದಲ್ಲಿ ಪ್ರಸ್ತುತ ಎಸ್.ಎಸ್.ಎಲ್.ಸಿ. ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಕಲ್ಪಿಸಿರುವ ಮಕ್ಕಳ ಸ್ನೇಹಿ ವಾತಾವರಣ ಹಾಗೂ ವ್ಯವಸ್ಥೆಗಳನ್ನು ಅವಲೋಕಿಸಲು ಭೇಟಿ ನೀಡುವ ಬಗ್ಗೆ ಸೂಚಿಸಿದ್ದೀರಿ. ಅದರಂತೆ ನಾನು ತುಮಕೂರು ಜಿಲ್ಲೆಯ ಮಧುಗಿರಿ ಶೈಕ್ಷಣಿಕ ಜಿಲ್ಲೆ ಸಿರಾ ತಾಲ್ಲೂಕಿನ ಆಯ್ದ ಕೆಲವು ಪರೀಕ್ಷಾ ಕೇಂದ್ರಗಳಿಗೆ ದಿ.30/03/2024 ರಂದು ಭೇಟಿ ನೀಡಲು ಯೋಜಿಸಿದ್ದೆ. ಈ ಬಗ್ಗೆ ತಿಳಿಸಲು ಸದರಿ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕರನ್ನು ಹಾಗೂ ಸಿರಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ‘ನಮ್ಮ ಇಲಾಖೆಯ ಆಯುಕ್ತರು ಪರೀಕ್ಷಾ ಕೇಂದ್ರಗಳಿಗೆ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ಬೇಟಿಗೆ ಅವಕಾಶ ನೀಡಬಾರದು, ನಾವು ಅನುಮತಿ ನೀಡಿರುವುದಿಲ್ಲ’ ಎಂದು ಮೌಖಿಕ ಆದೇಶ ನೀಡಿದ್ದು, ಅದರಂತೆ ತಾವು ಅನುಮತಿ ಪಡೆದು ಭೇಟಿ ನೀಡಬೇಕೆಂದು ತಿಳಿಸಿರುತ್ತಾರೆ. ಆದ್ದರಿಂದಾಗಿ ಇಂದು ನಾನು ಸದರಿ ಪರೀಕ್ಷಾ ಕೆಂದ್ರಗಳಿಗೆ ಬೇಟಿ ನೀಡಲು ಸಾಧ್ಯವಾಗಲಿಲ್ಲವೆಂಬುದನ್ನು ತಮ್ಮ ಆದ್ಯ ಗಮನಕ್ಕೆ ತರಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ಆಯೋಗದ ಭೇಟಿಯನ್ನು ನಿರ್ಬಂಧಿಸಿರುವ ಹಿಂದಿನ ಉದ್ದೇಶವೇನೆಂದು ತಿಳಿದಿಲ್ಲ. ಆದರೆ ಈ ರೀತಿ ಆಯೋಗದ ಪರಿಶೀಲನಾ ಭೇಟಿಯನ್ನು ನಿರ್ಬಂಧಿಸುವುದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಾಯಿದೆ-2005ರ ಸೆಕ್ಷನ್ 13(ಐ) ಮತ್ತು (ಕೆ) ಉಲ್ಲಂಘನೆಯಾಗಿದೆ. ಅಲ್ಲದೇ ಆಯುಕ್ತರು ತಮ್ಮ ಅಧೀನ ಅಧಿಕಾರಿಗಳ ಸಭೆಯಲ್ಲಿ ಈ ರೀತಿಯ ಹೇಳಿಕೆ ನೀಡಿರುವುದು ಗೌರವಾನ್ವಿತ ಆಯೋಗದ ಘನತೆಗೆ ಕುಂದುಂಟು ಮಾಡಿದೆ. ಇದು ಮುಂದಿನ ದಿನಗಳಲ್ಲಿ ಆಯೋಗದ ಪ್ರದತ್ತ ಅಧಿಕಾರವಾದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ–2009ರ ಮೇಲುಸ್ತುವಾರಿಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗಾಗಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಬೇಕೆಂದು ಕೆ.ಟಿ. ತಿಪ್ಪೇಸ್ವಾಮಿ ಕೋರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


