ತುಮಕೂರು: ನಗರದಲ್ಲಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಗಳ ಕೊರತೆ ಎದುರಾಗಿದ್ದು, ಇದರ ನೇರ ಪರಿಣಾಮ ಇಂದಿರಾ ಕ್ಯಾಂಟೀನ್ ಗಳ ಮೇಲೆ ಬೀರಿದೆ. ಅಡುಗೆಗೆ ಅಗತ್ಯವಾದ ಸಿಲಿಂಡರ್ ಲಭ್ಯವಿಲ್ಲದ ಕಾರಣ, ನಗರದ ಪ್ರಮುಖ ಇಂದಿರಾ ಕ್ಯಾಂಟೀನ್ ಸೇರಿದಂತೆ ವಿವಿಧ ಘಟಕಗಳು ಶುಕ್ರವಾರದಿಂದ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿವೆ.
ತುಮಕೂರು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿರುವ ಮುಖ್ಯ ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ತಯಾರಿಸಿ ನಗರದ ಉಳಿದ 6 ಉಪಕೇಂದ್ರಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ ಕಳೆದ 3–4 ದಿನಗಳಿಂದ ಹೋಟೆಲ್ಗಳಿಗೆ ಪೂರೈಕೆಯಾಗುವ ವಾಣಿಜ್ಯ ಸಿಲಿಂಡರ್ ಗಳ ಅಭಾವ ಉಂಟಾಗಿದೆ. ಗುರುವಾರ ಇಡೀ ದಿನ ಸಿಬ್ಬಂದಿ ಸಿಲಿಂಡರ್ ಗಾಗಿ ಹುಡುಕಾಟ ನಡೆಸಿದರೂ ಸಿಗದೇ ಇದ್ದಾಗ, ಅನಿವಾರ್ಯವಾಗಿ ಕ್ಯಾಂಟೀನ್ ಗೆ ಬೀಗ ಹಾಕಲಾಗಿದೆ.
ಕ್ಯಾಂಟೀನ್ ಮುಂಭಾಗದಲ್ಲಿ “ಗ್ಯಾಸ್ ಸಿಗದ ಕಾರಣ ಇಂದು ಇಂದಿರಾ ಕ್ಯಾಂಟೀನ್ ಮುಚ್ಚಲಾಗಿದೆ. ದಯವಿಟ್ಟು ಸಹಕರಿಸಿ” ಎಂಬ ನಾಮಫಲಕವನ್ನು ಅಳವಡಿಸಲಾಗಿದ್ದು, ಎಂದಿನಂತೆ ಕಡಿಮೆ ದರದಲ್ಲಿ ಊಟ–ತಿಂಡಿ ನಿರೀಕ್ಷಿಸಿ ಬಂದ ಸಾರ್ವಜನಿಕರು ಮತ್ತು ಕಾರ್ಮಿಕರು ನಿರಾಸೆಯಿಂದ ವಾಪಸ್ಸಾಗುತ್ತಿದ್ದಾರೆ.
ಪಾಲಿಕೆ ಆಯುಕ್ತರ ಪ್ರತಿಕ್ರಿಯೆ:
ಈ ಕುರಿತು ಪ್ರತಿಕ್ರಿಯಿಸಿರುವ ಮಹಾನಗರ ಪಾಲಿಕೆ ಆಯುಕ್ತೆ ಬಿ. ಶುಭ ಅವರು, “ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿನ ಸಮಸ್ಯೆಯಿಂದಾಗಿ ಈ ಅಡಚಣೆ ಉಂಟಾಗಿದೆ. ಗುತ್ತಿಗೆದಾರರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಶನಿವಾರದಿಂದ ಕ್ಯಾಂಟೀನ್ ಪುನಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಅಡುಗೆ ಅನಿಲದ ಸಮಸ್ಯೆ ಮುಂದುವರಿದರೆ ಹೊರಗಡೆಯಿಂದ ಅಡುಗೆ ತಯಾರಿಸಿ ತಂದು ವಿತರಿಸಲು ವ್ಯವಸ್ಥೆ ಮಾಡಲಾಗುವುದು” ಎಂದು ತಿಳಿಸಿದ್ದಾರೆ.
ಆಟೋ ದರದಲ್ಲೂ ಏರಿಕೆ:
ಇದೇ ವೇಳೆ ಸಿಎನ್ಜಿ ಇಂಧನ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿ ಸರ್ವಿಸ್ ಆಟೋಗಳ ಪ್ರಯಾಣ ದರವನ್ನು ₹10 ರಷ್ಟು ಹೆಚ್ಚಿಸಲಾಗಿದೆ. ಈ ಮೊದಲು ₹20 ಇದ್ದ ಕನಿಷ್ಠ ದರ ಈಗ ₹30ಕ್ಕೆ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಹೊರೆಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


