ತುಮಕೂರು: ಶಿಕ್ಷಣ ಅಂಕಪಟ್ಟಿಗೆ ಸೀಮಿತವಾಗಬಾರದು. ಉದ್ಯೋಗ ಜಗತ್ತಿಗೆ ಸೂಕ್ತವಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ವಿವಿಯ ಉದ್ಯೋಗಾಧಿಕಾರಿ ಪ್ರೊ.ಪರಶುರಾಮ ಕೆ.ಜಿ. ತಿಳಿಸಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಉದ್ಯೋಗ ಮಾರ್ಗದರ್ಶನ ಮತ್ತು ನೇಮಕಾತಿ ಘಟಕ ಹಾಗೂ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿರುವ ಒಂದು ವಾರದ ವೃತ್ತಿಕೌಶಲ್ಯತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಾಗಾರ ಹಾಗೂ ಪ್ರಶಿಕ್ಷಣ ಕಾರ್ಯಕ್ರಮದ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ಮಾತನಾಡಿದರು.
ಪ್ರತಿ ವರ್ಷ ಪದವಿ ಪೂರ್ಣಗೊಳಿಸುತ್ತಿರುವ ಸಾವಿರಾರು ಮಂದಿಯಲ್ಲಿಉನ್ನತ ಶಿಕ್ಷಣದ ಮೆಟ್ಟಿಲೇರುತ್ತಿರುವವರ ಸಂಖ್ಯೆ ಬೆರಳೆಣಿಕೆಯಷ್ಟಿರುವುದು ಬೇಸರದ ಸಂಗತಿ. ಶಿಕ್ಷಣ ಉದ್ಯೋಗ, ಉನ್ನತ ಶಿಕ್ಷಣ, ಸ್ವಯಂಉದ್ಯೋಗಕ್ಕೆ ದಾರಿದೀಪವಾಗಬೇಕೇ ಹೊರತು ನಿರುದ್ಯೋಗ ಸಮಸ್ಯೆ ಸೃಷ್ಟಿಸಬಾರದು. ಶಿಕ್ಷಣವೆಂದರೆ ಜ್ಞಾನ ಮತ್ತು ಸಾಕ್ಷರತೆಗಾಗಿ ಹೋರಾಟ. ಶಿಕ್ಷಣವನ್ನು ಕೌಶಲ್ಯವಾಗಿ ಪರಿವರ್ತಿಸಿ ಪ್ರತಿಭೆಗಳ ಅನಾವರಣವಾಗಬೇಕುಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಕಲಾ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ರವಿ ಸಿ. ಎಂ.,ಕೃತಕ ಬುದ್ಧಿಮತ್ತೆಯ ಸ್ಪರ್ಧಾಯುಗದಲ್ಲಿಉದ್ಯೋಗ ಬಯಸುವ ಕೌಶಲ್ಯಗಳಲ್ಲಿ ನಿಪುಣತೆ ಹಾಗೂ ಪರಿಣಿತಿ ಹೊಂದಿರಬೇಕು. ಮಾರುಕಟ್ಟೆ ಬಯಸುವ ಕೌಶಲ್ಯಗಳನ್ನು ಕರಗತ ಮಾಡಿಕೊಂಡು, ಉನ್ನತ ಹುದ್ದೆಯನ್ನು ಅಲಂಕರಿಸುವ ಪ್ರತಿಭೆ ನಮ್ಮದಾಗಬೇಕು ಎಂದು ಹೇಳಿದರು.
ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ಕಾರ್ಯಕ್ರಮ ವ್ಯವಸ್ಥಾಪಕ ಅರವಿಂದ ಕ್ರಿಸ್ಟಿ ಅವರು ಸಂಸ್ಥೆಯನ್ನು ಪರಿಚಯಿಸುತ್ತ, ಶೇ.60 ವಿದ್ಯಾರ್ಥಿನಿಯರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಪಡೆಯಲು ಸಹಕರಿಸುತ್ತೇವೆ. ಸಂವಹನ ಕಲೆ, ಬರೆವಣಿಗೆಯಂತಹ ಕೌಶಲ್ಯಗಳನ್ನು ಕಲಿಸುತ್ತೇವೆ ಎಂದು ತಿಳಿಸಿದರು.
ವಿವಿ ಕಲಾ ಕಾಲೇಜಿನ ಉದ್ಯೋಗ ಮಾರ್ಗದರ್ಶನ ಮತ್ತು ನೇಮಕಾತಿ ಘಟಕದ ಸಂಯೋಜಕ ಡಾ.ಸಿಬಂತಿ ಪದ್ಮನಾಭ ಕೆ.ವಿ. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಕಲಾ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಮೌಳಿ, ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಕಾರ್ಯಕ್ರಮ ವ್ಯವಸ್ಥಾಪಕರಾದ ಧವನ್ ಗೌಡ, ಕಿರಣ್ ಚಿಂತಲಪುಡಿ ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ಶರ್ಮಾ ವಿ. ನಿರೂಪಿಸಿದರು. ಉದ್ಯೋಗ ಮಾರ್ಗದರ್ಶನ ಮತ್ತು ನೇಮಕಾತಿ ಘಟಕದ ಸದಸ್ಯ ಪ್ರಹ್ಲಾದ್ ಜಿ. ವಂದಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx