ಕೊರಟಗೆರೆ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಸಮನ್ವಯತೆ ಇಲ್ಲದೆ ಇದ್ದರೆ ಅಭಿವೃದ್ಧಿ ಅಸಾಧ್ಯ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.
ತಾಲ್ಲೂಕಿನ ತುಂಬಾಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ್ದ ಆಂಜನೇಯಸ್ವಾಮಿ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮದ್ಯೆ ಸಮನ್ವಯತೆ ಇರಬೇಕು ಆಗ ಮಾತ್ರ ದೇಶ ಮತ್ತು ರಾಜ್ಯಗಳು ಅಭಿವೃದ್ಧಿ ಹೊಂದುತ್ತವೆ ಎಂದು ಹೇಳಿದರು.
ಈ ದೇಶಕ್ಕೆ ನರೇಂದ್ರ ಮೋದಿಯವರು ಪ್ರಧಾನಿಯಾಗದ್ದಿದ್ದರೆ ದೇಶ ಪರಿಸ್ಥಿತಿ ಈಗ ಏನು ಆಗುತ್ತಿತೋ ಗೊತ್ತಿಲ್ಲ, ಅಪರೇಷನ್ ಸಿಂಧೂರ ಈ ದೇಶದ ಸ್ವಾಭಿಮಾನ ಪ್ರತೀಕ. ಸ್ವಾತಂತ್ರ್ಯದ ದಿನದಂದು ದೇಶದಲ್ಲಿ ಗ್ರಾ.ಪಂ ಅಧ್ಯಕ್ಷರನ್ನು ಕರಸಿ ಗೌರವಿಸುವ ಕಾರ್ಯವನ್ನು 10 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ದೇಶದ ಜನರ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗೆ ೫ ಲಕ್ಷ ಕೋಟಿ ನೀಡಿದ್ದಾರೆ. ಇತಂಹ ಪ್ರದಾನಿ ವಿಶ್ವದಲ್ಲೇ ವಿರಳ ಎಂದರು.
ಡಾ.ಜಿ.ಪರಮೇಶ್ವರ ಬಗ್ಗೆ ಮೆಚ್ಚುಗೆ:
ಕೇಂದ್ರ ಸಚಿವ ಸೋಮಣ್ಣ ಗೃಹ ಸಚಿವ ಡಾ.ಜಿ.ಪರಮೇಶ್ವರರನ್ನು ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಮುಂದೆಯೆ ಹಾಡಿ ಹೊಗಳುವ ಮೂಲಕ ಈ ಕಾರ್ಯಕ್ರಮಕ್ಕೆ ಡಾ.ಜಿ.ಪರಮೇಶ್ವರ ಬರಬೇಕಿತ್ತು, ಈ ಭಾಗಕ್ಕೆ ಎತ್ತಿನಹೊಳೆ, ಭದ್ರ ಮೇಲ್ದಂಡೆ ಯೋಜನೆಗಳು ಬರಬೇಕಿದೆ, ಇದಕ್ಕಾಗಿ ಎರಡು ಸರ್ಕಾರಗಳು ಶ್ರಮಿಸುತ್ತಿವೆ, ಈ ಕ್ಷೇತ್ರದ ಶಾಸಕರು, ರಾಜ್ಯದ ಸಚಿವರಾದ ಡಾ.ಜಿ.ಪರಮೇಶ್ವರ ಈ ಭಾಗದ ಕೆರೆಗಳಿಗೆ ನೀರು ಹರಿಸಲು ಕೇಂದ್ರ ಸರ್ಕಾರಕ್ಕೂ ಅರ್ಜಿ ಸಲ್ಲಿಸಿದ್ದಾರೆ, ನಾನು, ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ಮೂವರು ಜನರು ಸೇರಿ ಪಕ್ಷಭೇದ ಮರೆತು ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸುವ ತಿರ್ಮಾನ ಮಾಡಿದ್ದೇವೆ, ಈ ಭಾಗದ ಅಭಿವೃದ್ಧಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ನನಗೆ ಪೂರ್ಣ ಸಹಕಾರ ನೀಡುತ್ತಿದ್ದು ಡಾ.ಜಿ. ಪರಮೇಶ್ವರರಂತ ಒಳ್ಳೆಯ ಉತ್ತಮ ರಾಜಕಾರಣ ಅಪರೂಪ ಎಂದು ಕೊಂಡಾಡಿದರು.
ತುಂಬಾಡಿ ಗ್ರಾಮಕ್ಕೆ ವಿಶೇಷ ಅನುಧಾನ:
ತುಂಬಾಡಿ ಗ್ರಾಮದ ಮುಖಂಡರ, ಜನರ ಕೋರಿಕೆ ಮೇರೆಗೆ ಇಲ್ಲಿನ ಶಾಲಾ ಕೊಠಡಿ ನಿರ್ಮಾಣಕ್ಕೆ 1.10 ಕೋಟಿ ನೀಡುವುದಾಗಿ ಭರವಸೆ ನೀಡಿ ಆ ಕೆಲಸವನ್ನು ಶೀಘ್ರವಾಗಿ ಪ್ರಾರಂಭಿಸಿ ಮುಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು, ಅದೇ ರೀತಿ ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಗ್ರಾಮದಲ್ಲಿ ಪ್ಲೋರೈಡ್ ಯುಕ್ತ ಕುಡಿಯುವ ನೀರಿದ್ದು ಅಲ್ಲಿನ ಶುದ್ದ ಕುಡಿಯುವ ನೀರಿನ ವ್ಯವಸ್ಥೆಗೆ 2 ಕೋಟಿ ಅನುದಾನ ನೀಡಿರುವುದಾಗಿ ಮಾಹಿತಿ ನೀಡಿದರು.
ಸಿದ್ದರಬೆಟ್ಟದ ಶ್ರೀಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದೆ ನಮ್ಮ ಪೂರ್ವಜರು ಊರಿನ ಹಿತಕ್ಕಾಗಿ ದೇವಾಲಯಗಳನ್ನು ಕಟ್ಟುತ್ತಿದ್ದರು ಊರಿನಲ್ಲಿ ಆಂಜಿನೇಯ ಸ್ವಾಮಿ ದೇವಾಲಯವಿದ್ದರೆ ಆ ಊರು ದುಷ್ಟಶಕ್ತಿಗಳಿಂದ ದೂರ ಮತ್ತು ಶಾಂತಿ ನೆಮ್ಮದಿಯಿಂದ ಇರುತ್ತದೆ ಎನ್ನುವ ನಂಬಿಕೆಯಿಂದ ಕಟ್ಟುತ್ತಿದ್ದರು, ಹಿಂದೆ ಅವುಗಳ ಜೀರ್ಣೋದ್ಧಾರ ಕಷ್ಟವಾಗುತ್ತಿತ್ತು ಆದರೆ ಈಗ ಜನರು ದೇವಾಲಯಗಳಿಗೆ ಹಣ ನೀಡುತ್ತಿದ್ದಾರೆ, ಆದರೆ ಈ ಯುವಕರಲ್ಲಿ ಮತ್ತು ಮಕ್ಕಳಲ್ಲಿ ದೈವದ ನಂಬಿಕೆ ಕಡಿಮೆ ಯಾಗುತ್ತಿರುವುದರಿಂದ ಯುವಕರು ಹಾದಿ ತಪ್ಪುತ್ತಿದ್ದಾರೆ, ತುಂಬಾಡಿ ಗ್ರಾಮದ ಜನರು 25 ವರ್ಷಗಳಿಂದ ಶ್ರಮಿಸಿ ಒಂದು ದೊಡ್ಡ ಸಮುದಾಯ ಭವನವನ್ನು, ಕಲ್ಯಾಣ ಮಂಟಪದ ರೀತಿ ನಿರ್ಮಿಸಿರುವುದು ಸಾಧನೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಸಿ.ಲಕ್ಷ್ಮೀಶ್, ಮಾಜಿ ಶಾಸಕ ಪಿ.ಆರ್. ಸುಧಾಕರ್ ಲಾಲ್, ಮಾಜಿ ಜಿ.ಪಂ ಅಧ್ಯಕ್ಷ ವೈ.ಹೆಚ್ ಹುಚ್ಚಯ್ಯ, ತಾ.ಜೆಡಿಎಸ್ ಅಧ್ಯಕ್ಷ ಜಿ.ಎಂ ಕಾಮರಾಜು, ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್, ತುಂಬಾಡಿ ಗ್ರಾ.ಪಂ ಅಧ್ಯಕ್ಷ ನಟರಾಜು, ಉಪಾದ್ಯಕ್ಷೆ ಲತಾ, ಸದಸ್ಯರಾದ ಪ್ರಸನ್ನಕುಮಾರ್, ಹೇಮಂತ್, ಪ.ಪಂ ಸದಸ್ಯ ಕೆ. ಎನ್ ಲಕ್ಷ್ಮೀನಾರಾಯಣ, ಮುಖಂಡರುಗಳಾದ ಜೆ. ಎನ್ ನರಸಿಂಹರಾಜು, ಮುಖಂಡರಾದ ತಿಮ್ಮಜ್ಜ, ವಿನಯ್ ಬಾಬು, ಕೃಷ್ಣಾಚಾರ್, ರಾಘವೇಂದ್ರ, ಸಿದ್ದಮಲ್ಲಯ್ಯ, ಸೇರಿದಂತೆ ಇತರರು ಇದ್ದರು.
ದೇವಾಲಯಕ್ಕೆ ಹಣ ಕೇಳಬೇಡಿ:
ನನಗೆ ಕೆಂದ್ರದಿಂದ ವರ್ಷಕ್ಕ 5 ಕೋಟಿ ಅನುದಾನ ಮಾತ್ರ ಬರುತ್ತದೆ. ಇದರಲ್ಲಿ 33000 ಸಾವಿರ ಹಳ್ಳಿಗಳು ಮತ್ತು ನಗರಗಳ ಅಭಿವೃದ್ದಿಗೆ ಅನುದಾನ ಹಂಚಬೇಕು. ನಾನು ಹೋಗುವ ಕಡೆ ಹೆಚ್ಚು ದೇವಸ್ಥಾನಗಳಿಗೆ ಜನರು ಹಣ ಕೇಳುತ್ತಾರೆ ಮತ್ತು ನಾನು ಅನುದಾನ ಎಲ್ಲಿಂದ ನೀಡಲಿ ಮತ್ತು ಎಲ್ಲಿಂದ ತರಲಿ ಎಂದು ಪರೋಕ್ಷವಾಗಿ ದೇವಾಲಯದ ಅಭಿವೃದ್ಧಿಗೆ ಹಣ ಕೇಳಲು ಬಂದಿದ್ದ ದೇವಾಲಯ ಸಮಿತಿಗೆ ನಾನು ಹಣ ನೀಡುವುದಿಲ್ಲ ಎಂದು ಹೇಳಿದರು
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC