ತಿಪಟೂರು: ತಾಲ್ಲೂಕಿನ ತಡಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತುಮಕೂರು–1 ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ರವರ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ತಾಲ್ಲೂಕಿನಾದ್ಯಂತ ಪರಿಸರ ಜಾಗೃತಿ ಮಾಹಿತಿ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸತೀಶ್ ಸುವರ್ಣ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪರಿಸರ ಸಂರಕ್ಷಣೆಗಾಗಿ ಇದುವರೆಗೂ ರಾಜ್ಯಾದ್ಯಂತ 73 ಕೋಟಿಗೂ ಅಧಿಕ ವಿವಿಧ ಸಸಿಗಳನ್ನು ನಾಟಿ ಮಾಡಿ ಪೋಷಿಸುತ್ತಿದ್ದು, ಗ್ರಾಮಾಭಿವೃದ್ಧಿ ಯೋಜನೆಯು ಪರಿಸರ ದಿನಾಚರಣೆ ನಿಮಿತ್ತ ಒಂದೆರಡು ಸಾರ್ವಜನಿಕ ಸ್ಥಳಗಳಲ್ಲಿ ಗಿಡನಾಟಿ ಮಾಡಿ ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಎಂದಿಗೂ ಮಾಡುವುದಿಲ್ಲ, ಬದಲಾಗಿ ಪರಿಸರ ಸಂರಕ್ಷಣೆಯ ಹೊಣೆಯನ್ನು ಹೊತ್ತು ರಾಜ್ಯಾದ್ಯಂತ ಅನೇಕ ಸರಕಾರಿ ಶಾಲೆಗಳಲ್ಲಿ, ಕೆರೆಯಂಗಳಗಳಲ್ಲಿ, ದೇವಸ್ಥಾನಗಳ ಬಳಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಳೀಯರ ಸಮ್ಮುಖದಲ್ಲಿ ವಿವಿಧ ಬಗೆಯ ಸಸಿಗಳನ್ನು ನಾಟಿ ಮಾಡಿ ಪೋಷಿಸುವ ಜವಾಬ್ದಾರಿಯನ್ನು ಸ್ಥಳೀಯ ಗ್ರಾಮಸ್ಥರಿಗೆ, ನಮ್ಮ ಪಾಲುದಾರರಿಗೆ, ವಿದ್ಯಾರ್ಥಿಗಳಿಗೆ ವಹಿಸಿಕೊಡಲಾಗುತ್ತದೆ ಎಂದು ತಿಳಿಸಿದರು.
ತಡಸೂರು ಗ್ರಾ.ಪಂ.ಉಪಾಧ್ಯಕ್ಷರಾದ ಶೇಖರ್ ಮಾತನಾಡಿ, ಈ ನವಯುಗದಲ್ಲಿ ಪರಿಸರ ಮಾಲಿನ್ಯ ಅಧಿಕವಾಗಿದ್ದು, ಜೀವಕುಲ ಆರೋಗ್ಯವಾಗಿ ಉಳಿಯಬೇಕಾದರೆ ಪರಿಸರ ಸಂರಕ್ಷಣೆ ನಮ್ಮೆಲ್ಲರಿಗೂ ಅವಶ್ಯಕತೆಗಿಂತ ಅನಿವಾರ್ಯತೆಯೇ ಅಧಿಕವಾಗಿದೆಯಾದ್ದರಿಂದ ಪ್ರತಿಯೊಬ್ಬರು ಮನೆಗೊಂದು ಮರ ಊರಿಗೊಂದು ವನದಂತೆ ಯಾವುದಾದರೂ ಹಣ್ಣಿನ ಅಥವಾ ಕಾಡಿನ ಸಸಿಗಳನ್ನು ಬೆಳೆಯಲೇಬೇಕೆಂದು ತಿಳಿಸಿದರು.
ತಡಸೂರು ಪ್ರೌಢಶಾಲೆಯ ವಿಜ್ಞಾನ ವಿಭಾಗದ ಸಹಶಿಕ್ಷಕಿ ಶುಭಕುಮಾರಿ ಮಾತನಾಡಿ, ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ನಾನ್ನುಡಿಯಂತೆ ಈಗಿನ ವಿದ್ಯಾರ್ಥಿ ಸಮೂಹ ವೃಕ್ಷೋ ರಕ್ಷತಿ ರಕ್ಷಿತಃ ಎನ್ನುವಂತೆ ನಾಟಿ ಮಾಡಿದ ಸಸಿಗಳನ್ನು ಪೋಷಿಸಬೇಕೆಂದು ತಿಳಿಸಿದರು.
ಪರಿಸರ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವೂ ನೆರವೇರಿತು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ಆವರಣದಲ್ಲಿ ಹಲಸು, ಬೆಟ್ಟದ ನೆಲ್ಲಿ, ಬಿಲ್ವಪತ್ರೆ, ಮಹಾಗನಿ, ಬೀಟೆ ಈಗೆ ವಿವಿಧ ಬಗೆಯ 80 ಸಸಿಗಳನ್ನು ನಾಟಿ ಮಾಡಿದರು.
ಕಾರ್ಯಕ್ರಮದಲ್ಲಿ ತಡಸೂರು ಗ್ರಾ.ಪಂ. ಸೆಕೆಂಡರಿ ವೇದಮೂರ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಿಪಟೂರು ತಾಲ್ಲೂಕು ಯೋಜನಾಧಿಕಾರಿ ಉದಯ್.ಕೆ, ತಾಲ್ಲೂಕು ಕೃಷಿ ಅಧಿಕಾರಿ ಪ್ರಮೋದ್ ಕುಮಾರ್, ಮೇಲ್ವಿಚಾರಕ ದಿನೇಶ್ ಕೆ., ತಡಸೂರು ಪ್ರೌಢ ಶಾಲಾ ಶಿಕ್ಷಕರಾದ ತ್ರಿಮೂರ್ತಿ, ಶಾಲಾ ಶಿಕ್ಷಕ ವೃಂದದವರು, ಸೇವಾಪ್ರತಿನಿಧಿಗಳಾದ ಪ್ರೀತಿ ಹಾಗೂ ದಿವ್ಯಾ, ಶಾಲಾ ವಿದ್ಯಾರ್ಥಿಗಳು ಹಾಗೂ ತಡಸೂರು ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW